ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ಅಕ್ಷಯ ತೃತೀಯ ಶುಭದಿನದಂದು ಬಸವ ಜಯಂತಿಯ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಬಸವೇಶ್ವರ ಜಾತ್ರಾ ಮಹೋತ್ಸವ ಭಾರೀ ವಿಜೃಂಭಣೆಯಿಂದ ಜರುಗಿತು.
ಮುಂಜಾನೆ ವೇದಮೂರ್ತಿ ಮುರುಘೇಂದ್ರ ಮಹಾಸ್ವಾಮಿಗಳು (ಹಿರೇಮಠ) ಅವರ ಅಮೃತವಾಣಿಯಿಂದ ವೇದಮಂತ್ರಗಳ ಪಠಣದೊಂದಿಗೆ ದೇವಸ್ಥಾನದಲ್ಲಿರುವ ಬಸವೇಶ್ವರ ಶಿಲಾಮೂರ್ತಿಗೆ ರುದ್ರಾಭಿಷೇಕ ಸಹಿತ ಪೂಜಾ ವಿಧಿವಿಧಾನಗಳು ನೆರವೇರಿಸಲಾಯಿತು. ಭಕ್ತರಿಗೆ ಅನ್ನಪ್ರಸಾದದ ವ್ಯವಸ್ಥೆಯೂ ಮಾಡಲಾಗಿತ್ತು.
ಸಂಜೆ ಐದು ಗಂಟೆಗೆ ಪಟ್ಟಣದ ರೈತರು ತಮ್ಮ ಎತ್ತುಗಳನ್ನು ಅಲಂಕರಿಸಿಕೊಂಡು ಬಸವೇಶ್ವರ ದೇವಸ್ಥಾನಕ್ಕೆ ಕರೆತಂದರು. ಸುಮಾರು ೧೦೧ಕ್ಕೂ ಅಧಿಕ ಎತ್ತುಗಳೊಂದಿಗೆ ಗೋಮಾತೆಯ ಮೆರವಣಿಗೆ ಮತ್ತು ಪಲ್ಲಕ್ಕಿ ಉತ್ಸವವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ವೈಭವಗಳೊಂದಿಗೆ ನೂರಾರು ರೈತರು ಹಾಗೂ ದೇವಸ್ಥಾನದ ಆಡಳಿತ ಮಂಡಳಿಯವರ ಸಮ್ಮುಖದಲ್ಲಿ ಸಾಂಗೋಪಾಂಗವಾಗಿ ನಡೆಯಿತು.
ಗೋಮಾತೆ, ಎತ್ತುಗಳು ಹಾಗೂ ಬಸವೇಶ್ವರ ಮತ್ತು ಅಕ್ಕಮಹಾದೇವಿಯ ಭಾವಚಿತ್ರಗಳ ಮೆರವಣಿಗೆ ದೇವಸ್ಥಾನಕ್ಕೆ ತಲುಪಿದ ಬಳಿಕ ರೈತರಿಗೆ ಉಪಯುಕ್ತವಾಗುವ ಕೃಷಿ ಸಂಬಂಧಿತ ವಿವಿಧ ಬಹುಮಾನಗಳನ್ನು ಆಡಳಿತ ಮಂಡಳಿಯವರು ವಿತರಿಸಿದರು.
ತದನಂತರ ಬಸವಣ್ಣನವರ ತೊಟ್ಟಿಲೋತ್ಸವ ಕಾರ್ಯಕ್ರಮವು ನೂರಾರು ಮಹಿಳೆಯರ ಸಮ್ಮುಖದಲ್ಲಿ ಜನಪದ ಹಾಡುಗಳೊಂದಿಗೆ ನೆರವೇರಿತು.
ಈ ಸಂದರ್ಭದಲ್ಲಿ ಊರಿನ ಸರ್ವ ಜನಾಂಗದ ನಾಗರಿಕರು ಭಾಗವಹಿಸಿದರು.

