ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ ಜಮಖಂಡಿಯಲ್ಲಿ ಸೋಮವಾರ ಸಾಂಸ್ಕೃತಿಕ ವಿಭಾಗ ಹಾಗೂ ಐ.ಕ್ಯೂ.ಎ.ಸಿ. ಇವರ ಸಂಯುಕ್ತ ಆಶ್ರಯದಲ್ಲಿ “ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ 893ನೇ ಬಸವ ಜಯಂತಿ”ಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ವೈ. ವೈ. ಕೊಕ್ಕನವರ, ಕನ್ನಡ ಸಹ ಪ್ರಾಧ್ಯಾಪಕರು ಇವರು ಮಾತನಾಡುತ್ತಾ “ವಿಶ್ವಗುರು ಬಸವಣ್ಣನವರು 12ನೇ ಶತಮಾನದ ಮಹಾನ್ ಸಮಾಜ ಸುಧಾರಕರಾಗಿ, ಸಮಾನತೆ, ಶ್ರಮದ ಗೌರವ ಮತ್ತು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ ಮಹಾನ್ ಚಿಂತಕರು. ಅವರು ಕಲ್ಯಾಣದಲ್ಲಿ ಅನೇಕ ಸಾಮಾಜಿಕ ಕ್ರಾಂತಿಗಳನ್ನು ಮಾಡಿ ‘ಅನುಭವ ಮಂಟಪ’ದ ಮೂಲಕ ಎಲ್ಲ ವರ್ಗದ ಜನರಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ವೇದಿಕೆಯನ್ನು ನಿರ್ಮಿಸಿದರು. ಅವರ ವಚನ ಸಾಹಿತ್ಯವು ಸಮಾಜದ ಅಂಧಶ್ರದ್ಧೆಗಳನ್ನು ನಿವಾರಿಸಿ. ಸತ್ಯ, ಧರ್ಮ ಹಾಗೂ ನೈತಿಕತೆಯ ಮಾರ್ಗವನ್ನು ತೋರಿಸುತ್ತದೆ. ಬಸವಣ್ಣನವರ ಸಾಧನೆಗಳು ಇಂದಿಗೂ ಸಮಾಜಕ್ಕೆ ದೀಪಸ್ತಂಭವಾಗಿವೆ” ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಸುನಂದಾ ಎಸ್. ಶಿರೂರ ಮಾತನಾಡುತ್ತಾ “ಬಸವಣ್ಣನವರ ಜೀವನ ಹಾಗೂ ತತ್ವಗಳು ನಮ್ಮೆಲ್ಲರಿಗೂ ಪ್ರೇರಣೆಯಾಗಿವೆ ಎಂದರು.
ಮೌನೇಶ ಬಡಿಗೇರ ಪ್ರಾರ್ಥಿಸಿದರು. ಡಾ. ಎ. ವಾಯ್. ಕಾಂಬಳಿ ನಿರೂಪಿಸಿದರು. ಎಸ್. ಪಿ. ಆಲಗೂರ ಸ್ವಾಗತಿಸಿದರು. ಎಸ್. ಕೆ. ಡೇಂಬರೆ ವಂದಿಸಿದರು.
ಕಾರ್ಯಕ್ರಮದಲ್ಲಿ ಡಾ. ವಿ. ಆರ್. ದಳವಾಯಿ, ಡಾ. ಎಮ್. ಎಮ್. ಮಂಟೂರ, ಎ. ಎಸ್. ಪೂಜಾರಿ, ಆರ್. ಹೆಚ್. ಹಳ್ಳಿ, ಆರ್. ಎಸ್. ಜಾಧವ. ಡಾ. ಬಿ. ಎನ್. ಜಾಧವ, ಎಸ್. ಪಿ. ಸಜ್ಜನ ಉಪಸ್ಥಿತರಿದ್ದರು.

