ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಬಾಬಾಸಾಹೇಬರು ನೀಡಿರುವ ಸಂವಿಧಾನದಡಿಯಲ್ಲಿ ನಾವೆಲ್ಲರೂ ಕಾರ್ಯನಿರ್ವಹಿಸಬೇಕು. ಅಧಿಕಾರ ಯಾವಾಗಲೂ ಜನಪರವಾಗಿರಬೇಕು. ಅಧಿಕಾರ ಎನ್ನುವುದು ಸೇವೆ ಎಂಬ ಮನೋಭಾವದಿಂದ ಕೂಡಿರಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ತಾಲೂಕಿನ ಗಬಸಾವಳಗಿ ಗ್ರಾಮದಲ್ಲಿ ನಡೆದ ೨೦೨೫-೨೬ ಸಾಲಿನ ಮುಖ್ಯಮಂತ್ರಿ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಶ್ರೀ ಸಿದ್ರಾಮೇಶ್ವರ ದೇವಸ್ಥಾನ ಹತ್ತಿರ ರೂ.೨೫ಲಕ್ಷ ಮೊತ್ತದ ಸಮುದಾಯ ಭವನದ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು, ಶರಣರ, ಸಂತರ, ಸ್ವಾತಂತ್ರ್ಯ ಹೋರಾಟಗಾರರ ಹಾಗೂ ದಾರ್ಶನಿಕರ ಆಚಾರ, ವಿಚಾರ, ಸಂಪ್ರದಾಯ ಮತ್ತು ತತ್ವಾದರ್ಶಗಳನ್ನು ಮುಂದಿನ ಯುವ ಪೀಳಿಗೆಗೆ ವರ್ಗಾವಣೆಯಾಗಬೇಕಾದರೆ ಗ್ರಾಮೀಣ ಪ್ರದೇಶಗಳಲ್ಲಿ ಕಾಲಕ್ಕೆ ಅನುಗುಣವಾಗಿ ಪುರಾಣ-ಪ್ರವಚನ, ಉಪನ್ಯಾಸಗಳು ನಡೆಯಬೇಕು. ಗ್ರಾಮದ ಅಭಿವೃದ್ಧಿಗಾಗಿ ಸದಾ ಶ್ರಮಿಸುತ್ತೇನೆ. ಶ್ರೀ ಸಿದ್ರಾಮೇಶ್ವರ ದೇವಸ್ಥಾನ ಜಿರ್ಣೋದ್ಧಾರಕ್ಕೆ ಗ್ರಾಮಸ್ಥರ ಈಗಾಗಲೇ ರೂ.೭೦ಲಕ್ಷ ಹಣವನ್ನು ದೇಣಿಗೆಯ ಮೂಲಕ ಸಂಗ್ರಹಣೆ ಮಾಡಿ ೧೪ ನಿವೇಶನಗಳನ್ನು ಖರೀದಿ ಮಾಡಿದ್ದಾರೆ. ಮುಖ್ಯಮಂತ್ರಿ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಶ್ರೀ ಸಿದ್ರಾಮೇಶ್ವರ ದೇವಸ್ಥಾನ ಹತ್ತಿರ ರೂ.೨೫ಲಕ್ಷ ಮೊತ್ತದ ಸಮುದಾಯ ಭವನದ ಕಾಮಗಾರಿಗೆ ಮೀಸಲಿಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಶಾಸಕ ಅಶೋಕ ಮನಗೂಳಿ ಅವರಿಗೆ ಗ್ರಾಮಸ್ಥರು ಅದ್ದೂರಿ ಮೆರವಣಿಗೆ ಮೂಲಕ ಸ್ವಾಗತಿಸಿಕೊಂಡರು. ಕಾರ್ಯಕ್ರಮದಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡದಿರುವ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಮಾಜಿ ಜಿಪಂ ಸದಸ್ಯರು ನರಸಿಂಗ ಪ್ರಸಾದ ತಿವಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ, ಕೆಡಿಪಿ ಸದಸ್ಯ ನಿಂಗಣ್ಣ ಬುಳ್ಳಾ, ಮುಖಂಡ ಸೋಮನಗೌಡ ಪಾಟೀಲ, ಭೀಮನಗೌಡ ಬಿರಾದಾರ, ಬಾಗಪ್ಪಗೌಡ ಪಾಟೀಲ, ಅಶೋಕಗೌಡ ಬಿರಾದಾರ, ಅಯ್ಯನಗೌಡ ಬಿರಾದಾರ, ಅಮೋಘ ಪೂಜಾರಿ, ಗೊಲ್ಲಾಳಪ್ಪಗೌಡ ಪಾಟೀಲ, ಸಾಯಿಪಟೇಲ ಯರಗಲ್ ಸೇರಿದಂತೆ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಇದ್ದರು.

