ಸಿಂದಗಿಯಲ್ಲಿ ನಡೆದ ಬಸವಣ್ಣನವರ ಜಯಂತ್ಯುತ್ಸವದಲ್ಲಿ ಶಾಸಕ ಅಶೋಕ ಮನಗೂಳಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ೧೨ನೇ ಶತಮಾನದಲ್ಲಿಯೇ ಅನುಭವ ಮಂಟಪವನ್ನು ಸ್ಥಾಪಿಸಿ ಸಾಮಾಜೋದ್ಧಾರ್ಮಿಕ ಸಮಾನತೆಗೆ ಶ್ರಮಿಸಿದ ಬಸವಣ್ಣನವರ ಅಂದಿನ ಅನುಭವ ಮಂಟಪದ ಪರಿಕಲ್ಪನೆಗಳೇ ಇಂದಿನ ಭಾರತದ ಸಂವಿಧಾನಕ್ಕೆ ತಳಹದಿಯಾಗಿವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ನಗರದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡ ಬಸವಣ್ಣನವರ ೮೯೩ನೇ ಜಯಂತ್ಯುತ್ಸವದ ಭವ್ಯ ಮೆರವಣಿಗೆಗೆ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಯುಗಪುರುಷ ಬಸವಣ್ಣನವರು ಮನೆಯಿಂದಲೇ ವೈಚಾರಿಕ ಕ್ರಾಂತಿಯನ್ನು ಆರಂಭಿಸಿದರು. ಬಸವಣ್ಣನವರು ವಿಶ್ವದ ಶ್ರೇಷ್ಠ ದಾರ್ಶನಿಕರಲ್ಲಿ ಮುಂಚೂಣಿಯಲ್ಲಿದ್ದವರು. ಎಲ್ಲ ಧರ್ಮಕ್ಕಿಂತ ಕಾಯಕ ಧರ್ಮ ದೊಡ್ಡದು. ಅಹಿಂಸೆಯೇ ಮಾನವ ಧರ್ಮವನ್ನು ಧೀರ್ಘಕಾಲ ಬಾಳಿಸಬಲ್ಲದು ಎಂಬುದನ್ನು ಜಗತ್ತಿಗೆ ಸಾರಿದ ಬಸವಣ್ಣ ವಿಶ್ವ ಸಾಂಸ್ಕೃತಿಕ ನಾಯಕರು. ಇವರನ್ನು ರಾಜ್ಯ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಈ ವೇಳೆ ತಹಶೀಲ್ದಾರ ಕರೆಪ್ಪ ಬೆಳ್ಳಿ, ಯೋಜನಾ ಪ್ರಾಧಿಕಾರ ಅಧ್ಯಕ್ಷ ಹಣಮಂತ ಸುಣಗಾರ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕಾಧ್ಯಕ್ಷ ಅಶೋಕ ವಾರದ, ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಸುರೇಶ ಪೂಜಾರ, ಆರ್.ಡಿ.ದೇಸಾಯಿ, ಜಗದೀಶ ಪಟ್ಟಣಶೆಟ್ಟಿ, ಚನ್ನು ವಾರದ, ಬಿ.ಜಿ.ನೆಲ್ಲಗಿ, ಅಶೋಕ ಅಲ್ಲಾಪೂರ, ಬಸವದಳದ ಅಧ್ಯಕ್ಷ ಮಲ್ಲಿಕಾರ್ಜುನ ಅರ್ಜುಣಗಿ, ಸೋಮನಗೌಡ ಬಿರಾದಾರ, ಮುತ್ತು ಮುಂಡೇವಾಡಗಿ, ಎಂ.ಎಂ.ಹಂಗರಗಿ, ಡಾ.ರವಿ ಗೋಲಾ, ಶಾಂತಪ್ಪ ರಾಣಾಗೋಳ, ಜಗದೀಶ ಕಲಬುರ್ಗಿ, ಸುನಂದಾ ಯಂಪೂರೆ, ಶೈನಾಬಿ ಮಸಳಿ, ಮುತ್ತು ಪಟ್ಟಣಶೆಟ್ಟಿ, ಶ್ರೀಮಂತ ಮಲ್ಲೇದ, ಶಿವರಾಜ ಭಾಸಗಿ, ಬಸು ಗುಗ್ಗರಿ, ವಿಶ್ವನಾಥ ಜೋಗುರ ಸೇರಿದಂತೆ ಬಸವಾಭಿಮಾನಿಗಳು ಇದ್ದರು.

