ಲೇಖನ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ
ಉದಯರಶ್ಮಿ ದಿನಪತ್ರಿಕೆ
ಫ್ಲಾರೆನ್ಸ ನೈಟಿoಗೇಲ್ ಅವರು ಲೇಡಿ ವಿತ್ ದ ಲ್ಯಾಂಪ್ ಎಂದೇ ಪ್ರಖ್ಯಾತರಾಗಿದ್ದರು. ಇವರು 1820ರ ಮೇ 12ರಂದು ಇಟಲಿಯ ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ತಮ್ಮ 17ನೇ ವಯಸ್ಸಿನಲ್ಲಿ ನರ್ಸಿಂಗ್ ವೃತ್ತಿಯನ್ನು ಆಯ್ಕೆ ಮಾಡಿಕೊಂಡರು. ಸಮಾಜದಲ್ಲಿ ಹಿಂದುಳಿದ ಹಾಗೂ ಬಡ ಜನರಿಗೆ ವೈದ್ಯಕೀಯ ನೆರವು ದೊರೆಯಬೇಕೆಂಬುದೇ ಇವರ ಧ್ಯೇಯವಾಗಿತ್ತು. 1854ರ ಅಕ್ಟೋಬರ್ 21ರಂದು ತಮ್ಮ 38 ನರ್ಸ್ ತಂಡದೊಂದಿಗೆ ಕ್ರಿಮಿಯನ್ ಯುದ್ಧದಲ್ಲಿ ಗಾಯಗೊಂಡ ಸೈನಿಕರ ಸೇವೆ ಮಾಡಿದರು. ಮಿಲಿಟರಿ ಆಸ್ಪತ್ರೆಗಳ ಹಾಗೂ ಇತರ ಆಸ್ಪತ್ರೆಗಳ ಸುಧಾರಣೆಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ಅವುಗಳನ್ನು ಜಾರಿಗೆ ತರಲು ಪ್ರಯತ್ನಿಸಿದರು. ಇದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಇಂದಿಗೂ ಇವರು ರೂಪಿಸಿದ ಸುಧಾರಣಾ ಕ್ರಮಗಳನ್ನು ಜಗತ್ತಿನ ಎಲ್ಲಾ ಆಸ್ಪತ್ರೆಗಳು ಒಂದಲ್ಲ ಒಂದು ರೀತಿಯಲ್ಲಿ ಅನುಸರಿಸುತ್ತಿವೆ. ಇವರ ನೆನಪಿಗಾಗಿ ಲಂಡನ್ ನ ವಾಟರ್ ಲೂ ಅರಮನೆಯಲ್ಲಿ ಬೃಹತ್ ಪ್ರತಿಮೆ ನಿರ್ಮಿಸಲಾಗಿದೆ.
ತಮ್ಮ ಮನೆತನದ ವಿರೋಧದ ನಡುವೆಯೂ ತಮ್ಮ ಸಮಸ್ತ ಪ್ರತಿಷ್ಠೆ, ಗೌರವ, ಸಿರಿತನ ಹಾಗೂ ತಮ್ಮ ವೈಯಕ್ತಿಕ ಸುಖ ಸಂತೋಷವನ್ನು ಧಾರೆ ಎರೆದು ಇಂಗ್ಲೆಂಡಿನ ಹೈಸರ್ ವರ್ಥ ನಗರದ ಲೂಥರನ್ ಆಸ್ಪತ್ರೆಯಲ್ಲಿ ದಾದಿಯರ ಶುಶ್ರೂಷೆ ಶಿಕ್ಷಣ ಶಾಲೆಗೆ ವಿದ್ಯಾರ್ಥಿನಿಯಾಗಿ ಸೇರ್ಪಡೆಗೊಂಡರು. ತಮ್ಮ ಶ್ರದ್ಧೆ ಮತ್ತು ಅನುಪಮ ಸೇವೆಯಿಂದ ಶಿಕ್ಷಕರ ಪ್ರಶಂಸೆಗೆ ಪಾತ್ರರಾದರು. ತಮ್ಮ ಮನದ ಅಭಿಲಾಷೆಯಂತೆ ರೋಗಿಗಳ ಆರೈಕೆಯ ಸೇವೆಗೆ ಧುಮುಕಿದರು.ಆ ಕಾಲದಲ್ಲಿ ಮಹಿಳೆಯರಿಗೆ ಸೇವೆ ಸಲ್ಲಿಸುವ ಅನುಮತಿ ಇರಲಿಲ್ಲ.ಪುರುಷ ಪ್ರಧಾನ್ಯತೆ ಹೊಂದಿದಂತಹ ಆ ಸಮಯದಲ್ಲಿ ನೈಟಿoಗೇಲ್ ಅವರಿಗೆ ತಮ್ಮ ಮಾನವೀಯತೆಯ ಮಾತೃ ತ್ವದ ಅಮೋಘ ಸೇವೆಯಿಂದ ಮನಗೆದ್ದು, ಮಹಿಳೆಯರಿಗೆ ದಾದಿಯ ವೃತ್ತಿಗೆ ಅಡಿಪಾಯ ಹಾಕಿದರು. ನೈಟಿoಗೇಲ್ ಒಬ್ಬಂಟಿ ಮಹಿಳೆಯಾದರೂ ಧೃತಿಗೆಡದೆ ಯುದ್ದ ಶಿಬಿರದಲ್ಲಿ ಸಲ್ಲಿಸಿದ ಸೇವೆಯಲ್ಲಿ ಇಡೀ ಸೈನಿಕರಿಗೆ ದೇವತೆಯಂತೆ ಕಂಡರು. ಅಂದಿನ ಅಧಿಕಾರಶಾಹಿಗಳಿಗೆ ಯುದ್ಧದಲ್ಲಿ ಮತ್ತೊಂದು ಸಾಮ್ರಾಜ್ಯವನ್ನು ಕಸಿದು ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವ ಗುಣವಿತ್ತೇ ವಿನಹ ತಮಗಾಗಿ ಯುದ್ಧ ಮಾಡುವವರಿಗೆ ಏನಾಗಿದೆ, ಆತನಿಗೆ ಪೆಟ್ಟು ಬಿದ್ದಾಗ ಏನು ಮಾಡಬೇಕೆಂಬುದರ ಕಾಳಜಿ ಇರಲಿಲ್ಲ.

ರೋಗಿಗಳಲ್ಲಿ ತುಂಬಾ ಗಂಭೀರರಾದವರನ್ನು ಸಮುದ್ರದಲ್ಲಿ ಎಸೆದರೆ, ಸ್ವಲ್ಪ ಪ್ರಾಣವಿರುವವರನ್ನು ತಿಂಗಳಾನುಗಟ್ಟಲೆ ಹಡಗಿನ ಪ್ರಯಾಣದಲ್ಲಿ ಸಾಗಿಸಿ ಪ್ರಾಣಿಗಳಿಗೂ ಸಹ್ಯವೆನಿಸದ ಅಮಾನುಷ ಸ್ಥಳಗಳಲ್ಲಿ ಯಾವುದೇ ಸುಶ್ರುಷಾ ವ್ಯವಸ್ಥೆ ಇಲ್ಲದ ಸ್ಥಳಗಳಿಗೆ ದಬ್ಬುತ್ತಿದ್ದರು. ಸಾವಿರಾರು ಜನರಿಗೆ ಒಬ್ಬರು ಅಥವಾ ಇಬ್ಬರು ವೈದ್ಯರಿದ್ದರೆ ಉಂಟು, ಇಲ್ಲದಿದ್ದರೆ ಇಲ್ಲ ಅಂತಹ ಒಂದು ಯುದ್ಧದಲ್ಲಿ ಸ್ಕುಟಾರ್ ಎಂಬ ಸ್ಥಳದಲ್ಲಿ ಯುದ್ಧ ಗಾಯಾಳುಗಳನ್ನು ತುಂಬಿದ್ದ ಕೊಟ್ಟಿಗೆಗೆ ಸಿಡ್ನಿ ಹರ್ಬರ್ಟ್ ಎಂಬ ಬ್ರಿಟಿಷ್ ಮಂತ್ರಿಮಂಡಲದ ಅಧಿಕಾರಿಯ ಮನವಿಯ ಮೇರೆಗೆ ಆಗಮಿಸಿದ ಫ್ಲಾರೆನ್ಸ್ ಮಾಡಿದ ಸುಧಾರಣೆ, ಮನೋಜ್ಞ ಸೇವೆ ಚರಿತ್ರಾರ್ಹ ವಾದದ್ದು.ಭಾರತದಲ್ಲಿ ಸಿಪಾಯಿ ದಂಗೆಯ ಸಮಯದಲ್ಲೂ ಅವರು ಮಾಡಿದ ಸೇವೆ ಅಭೂತಪೂರ್ವವಾದದ್ದು.
ಯಾವುದೇ ವ್ಯವಸ್ಥೆಗಳಿಲ್ಲದ ಬೇಜವಾಬ್ದಾರಿಗಳ ಸರ್ಕಾರಿ ವ್ಯವಸ್ಥೆ ,ಅಪಹಾಸ್ಯಗಳನ್ನು ಎದುರಿಸಿ ಕೂಡಾ, ಮಾನವೀಯ ಅನುಕಂಪ, ಸೇವಾ ಮನೋಭಾವನೆಗಳ ಹಾದಿಯಲ್ಲಿ ಬಂದ ಅಡೆತಡೆಗಳನ್ನೆಲ್ಲ ನಿವಾರಿಸಿ ಮಾನವ ಕುಲಕ್ಕೆ ಇವರು ಸಲ್ಲಿಸಿದ ಸೇವೆ ಇಡೀ ವಿಶ್ವವೇ ಬೆರಗಾಗುವಂತೆ ಮಾಡಿದೆ .ತಮ್ಮ ಸೇವೆಯಲ್ಲಿ ದೇವರನ್ನು ಕಂಡ ಈ ಮಹಾತಾಯಿ ಮುಂದೆ ಮಾನವ ಕುಲವನ್ನು ಸಲಹು ತ್ತಿರುವ ಅನೇಕ ಮಾನವೀಯ ದಾದಿಯರ ಪ್ರತಿನಿಧಿಯಾಗಿ ಎಂದೆಂದೂ ನೆನಪಿನಲ್ಲಿ ಉಳಿಯುತ್ತಾರೆ.
ಅವರು ಕೆಲಸ ಮಾಡುವ ಬೃಹದಾಕಾರದ ಮಿಲಿಟರಿ ಆಸ್ಪತ್ರೆ ಕಟ್ಟಡವು ದೊಡ್ಡದಾಗಿತ್ತು. ಆದರೆ ಕನಿಷ್ಠ ಸೌಕರ್ಯವೂ ಇಲ್ಲದ ಆಸ್ಪತ್ರೆ. ಆಸ್ಪತ್ರೆಯ ಉದ್ದ ಸುಮಾರು 6.5 ಕಿಲೋಮೀಟರ್. ಆಸ್ಪತ್ರೆಯಲ್ಲಿ ಸಾವಿರಾರು ಹಾಸಿಗೆಗಳು. ಆದರೆ ಒಬ್ಬ ರೋಗಿಯ ಹಾಸಿಗೆಗೂ ಇನ್ನೊಬ್ಬ ರೋಗಿಯ ಹಾಸಿಗೆಗೂ ಇದ್ದ ಅಂತರ ಕೇವಲ 45 ಸೆಂಟಿಮೀಟರ್ ಗಳು. ಇಂತಹ ಆಸ್ಪತ್ರೆಯಲ್ಲಿ ಪ್ರತಿನಿತ್ಯ ರಾತ್ರಿಯ ಹೊತ್ತು ಇವರು ಕೈಯಲ್ಲಿ ದೀಪ ಹಿಡಿದು ಪ್ರತಿಯೊಂದು ಹಾಸಿಗೆ ಬಳಿ ಹೋಗುತ್ತಿದ್ದರು. ಪ್ರತಿಯೊಬ್ಬ ರೋಗಿಯನ್ನು ವಿಚಾರಿಸುತ್ತಿದ್ದರು. ಅವರಿಗೆ ಅಗತ್ಯವಾದ ಔಷಧ ಮತ್ತು ಇತರ ವಸ್ತುಗಳನ್ನು ನೀಡುತ್ತಿದ್ದರು. ಮೆಲುಧ್ವನಿಯಲ್ಲಿ ಅವರನ್ನು ಉಪಚರಿಸುತ್ತಿದ್ದರು.ಅವರಿಗೆ ಧೈರ್ಯ ತುಂಬುತ್ತಿದ್ದರು . ಸಾವಿನ ಹೊಸ್ತಿಲಲ್ಲಿರುವ ವ್ಯಕ್ತಿಗೆ ಆಗ ತಾನೇ ಚೇತರಿಸಿಕೊಳ್ಳುತ್ತಿರುವ ರೋಗಿಗೆ ಅವರು ಮಾಡುತ್ತಿದ್ದ ಸೇವೆಯಿಂದ ಅವರೊಬ್ಬ ದೇವತೆ ಎನಿಸಿದರೆ ಆಶ್ಚರ್ಯವಿಲ್ಲ. ಪ್ರತಿದಿನ ಕತ್ತಲಾದೊಡನೆ ದೀಪವನ್ನು ಹಿಡಿದು ರೋಗಿಗಳನ್ನು ವಿಚಾರಿಸಲು ಬರುತ್ತಿದ್ದ ಇವರನ್ನು ದೀಪಧಾರಿಣಿ ಎಂದೇ ಕರೆಯುತ್ತಿದ್ದರು.


