ಲೇಖನ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ
ಉದಯರಶ್ಮಿ ದಿನಪತ್ರಿಕೆ
ಮಹಾರಾಷ್ಟ್ರದ ಸತಾರ ಜಿಲ್ಲೆಯ ನೈಗಾನ್ ಗ್ರಾಮದ ಲಕ್ಷ್ಮಿ ಮತ್ತು ಖoಡೂಜಿಯವರ ಮಗಳಾಗಿ 1831 ರಲ್ಲಿ ಸಾವಿತ್ರಿಬಾಯಿಯವರು ಜನಿಸಿದರು. ಅವರ ತಂದೆ ತಾಯಿ ತೀರ ಬಡವರಾಗಿದ್ದರಿಂದ ಮೂಲ ಶಿಕ್ಷಣ ಕೊಡಿಸಲು ಶಾಲೆಗೆ ಕಳಿಸಲು ಆಗಲಿಲ್ಲ.ಅವರು ಬಾಲ್ಯದಿಂದಲೂ ಅನೇಕ ದೈನಂದಿನ ಅಪಮಾನಗಳನ್ನು ಅನುಭವಿಸಿಯೇ ಬೆಳೆದವರು. ಸಾವಿತ್ರಿಬಾಯಿಯವರು ಬಡ ಮತ್ತು ತನ್ನಂತೆಯೇ ಕೆಳ ಜಾತಿಯವರಾದ ಹಾಗೂ ನಾಲ್ಕು ವರ್ಷ ಹಿರಿಯರಾದ ಜ್ಯೋತಿಬಾ ಅವರನ್ನು ತಮ್ಮ ಒಂಬತ್ತನೇ ವಯಸ್ಸಿನಲ್ಲಿ ಮದುವೆಯಾದರು.
ಜ್ಯೋತಿಬಾ ಅವರು ಒಂದು ಧರ್ಮ ಪ್ರಚಾರದ ಸಂಸ್ಥೆಯ ಶಾಲೆಯಲ್ಲಿ 7ನೇ ಶ್ರೇಣಿಯವರಿಗೆ ಓದಿದರು. ಇದರಿಂದ ಜ್ಯೋತಿಬಾ ರವರಿಗೆ ಶಿಕ್ಷಣವು ಮನುಷ್ಯನ ಏಳಿಗೆಗೆ ಬಹಳ ಸಹಾಯಕಾರಿ ಎಂದು ಅರಿವಾಯಿತು ಅಲ್ಲದೆ ಅನ್ಯಾಯ ಅಸಮತೋಲನಗಳನ್ನು ಚೆನ್ನಾಗಿ ಅರ್ಥ ಮಾಡಿಸಿತು. ಅವರಿಗೆ ಈ ಜ್ಞಾನ ಬೆಳಗಿದಂತೆಲ್ಲ ಹೆಣ್ಣು ಮಕ್ಕಳಿಗೆ ಶಿಕ್ಷಣದ ಅವಕಾಶವೇ ಇಲ್ಲವೆಂದು ಮನದಟ್ಟಾಯಿತು.
ಸಾವಿತ್ರಿಬಾಯಿ ಅವರಿಗೆ ಪ್ರಾಥಮಿಕ ಶಿಕ್ಷಣವು ಮನೆಯಲ್ಲಿ ಜ್ಯೋತಿಬಾ ಮತ್ತು ಅವರ ಸ್ನೇಹಿತರಿಂದ ದೊರೆಯಿತು. ಅವರಿಗೆ 15 ವರ್ಷ ತುಂಬಿದ ನಂತರ ಧರ್ಮ ಪ್ರಚಾರಕ ಸಂಸ್ಥೆಗಳು ನಡೆಸುವ ಶಾಲೆಗೆ ಸೇರಿದರು. ಆನಂತರ ಅಮೆರಿಕಾ ಧರ್ಮಪ್ರಚಾರಕ ಸಂಸ್ಥೆ, ಸಿಂಧಿಯಾ ಫರಾಲ್, ಅಹಮದ್ ನಗರ್, ಅಧ್ಯಾಪಕರ ಸಂಸ್ಥೆಯಲ್ಲಿ ಸೇರಿದರು. ನಂತರ ಅಧ್ಯಾಪಕರ ವೃತ್ತಿಗೆ ನೆರವಾಗುವ ಮತ್ತೊಂದು ಕೋರ್ಸ್ ಅನ್ನು ಪೂನಾದಲ್ಲಿ ಮುಗಿಸಿದರು. ಅನಂತರದಲ್ಲಿ ಪೂನಾದ ಮೆಹರ್ವಾಡ ಪ್ರದೇಶದಲ್ಲಿ ಅವರ ಸಲಹೆಗಾರರಾಗಿದ್ದ ಸುಗುಣಾ ಬಾಯಿ ಜೊತೆ ಬಾಲಕಿಯರಿಗೆ ಪಾಠ ಮಾಡಲು ಪ್ರಾರಂಭಿಸಿದರು. ಪುನಾದ ಬಿಡೆವಾಡದಲ್ಲಿ ಜ್ಯೋತಿಬಾಪುಲೆ 1848ರಲ್ಲಿ ಬಾಲಕಿಯರಿಗೆ ಒಂದು ಶಾಲೆಯನ್ನು ಪ್ರಾರಂಭಿಸಿದರು. ಆಗ ಅವರಿಗೆ 21 ವರ್ಷ ಮತ್ತು ಸಾವಿತ್ರಿ ಬಾಯಿಗೆ 17 ವರ್ಷ. ಇವರ ಶಾಲೆ ಪ್ರತಿಯೊಬ್ಬ ಜಾತಿಯ ಮಕ್ಕಳಿಗೆ ಶಿಕ್ಷಣ ಕೊಡುತ್ತಿತ್ತು. ಇದು ಭಾರತೀಯರೇ ಪ್ರಾರಂಭಿಸಿದ ಮೊದಲ ಮಾದರಿ ಹೆಣ್ಣು ಮಕ್ಕಳ ಶಾಲೆ. ಇದಕ್ಕೆ ಎಂಟು ಬಾಲಕಿಯರು ಸೇರಿದರು. ಈ ಶಾಲೆಯಲ್ಲಿ ಗಣಿತ, ವಿಜ್ಞಾನ , ಮತ್ತು ಸಮಾಜಶಾಸ್ತ್ರವನ್ನು ಕಲಿಸಲಾಗುತ್ತಿತ್ತು. ಸಾವಿತ್ರಿಬಾಯಿಯವರು ಕೆಲವೇ ದಿನಗಳಲ್ಲಿ ಆ ಶಾಲೆಯ ವೇತನ ರಹಿತ ಮುಖ್ಯೋಪಾಧ್ಯಾಯರಾದರು
ಫುಲೆ ಮತ್ತು ಅವರ ಪ್ರಾಥಮಿಕ ಶಿಕ್ಷಣದ ಆರಂಭವನ್ನು ಅನೇಕ ಜನರು ವಿರೋಧಿಸಿದರು.ಪ್ರತಿನಿತ್ಯ ಅವರು ಶಾಲೆಗೆ ನಡೆದು ಬರುವಾಗ ಅವರ ಮೇಲೆ ಕೆಸರು ಚೆಲ್ಲುವುದು ಮತ್ತು ಕಲ್ಲು ತೂರುವುದು ಮಾಡಿದರು. ಆದರೆ ಸಾವಿತ್ರಿ ಬಾಯಿಯವರು ಮತ್ತೊಂದು ಸೀರೆಯನ್ನು ಒಯ್ದು ಶಾಲೆಯಲ್ಲಿ ಬದಲಾಯಿಸಿಕೊಳ್ಳುತ್ತಿದ್ದರು. ಒಂದು ದಿನ ಒಬ್ಬ ಮನುಷ್ಯ ಮಹಿಳೆಯರಿಗೆ ಶಿಕ್ಷಣ ನೀಡಿ ಪಾಪ ಕಟ್ಟಿಕೊಳ್ಳುತ್ತಿದ್ದೀರಿ ಎಂದು ಬೈದದ್ದುoಟು.ಆದರೆ ಅವರು ಇಂತಹ ವಿಷಯಗಳಿಗೆ ಸೊಪ್ಪು ಹಾಕಲಿಲ್ಲ. ಇವರನ್ನು ಹೆದರಿಸಿದವರಿಗಾಗಿ ಬೈದವರಿಗಾಗಿ ತಾನು ನಂಬಿದ ಧ್ಯೇಯವನ್ನು ಬಿಟ್ಟು ಕೊಡಲೇ ಇಲ್ಲ. ಕೆಲವು ಪ್ರಭಾವಿ ವ್ಯಕ್ತಿಗಳು ಜ್ಯೋತಿಬಾ ಅವರ ತಂದೆ ಗೋವಿಂದರಾವ್ ಅವರಿಗೆ ಇವರ ಮೂಲ ಸಿದ್ಧಾಂತಗಳ ಬಗ್ಗೆ ದೂರಿದ್ದರು. ಪರಿಣಾಮ ಸಾವಿತ್ರಿ ದಂಪತಿಗಳು ಅವರ ಮನೆ ತೊರೆದು ಮತ್ತೊಂದು ಮನೆಯನ್ನು ಹುಡುಕಿಕೊಳ್ಳಬೇಕಾಯಿತು. ಆದರೆ ಇವರಿಗೆ ಶುಭಕೋರುವ ಸಹಾಯ ಮಾಡುವ ವ್ಯಕ್ತಿಗಳೂ ಇದ್ದರು. ಕೆಲವರು ಅಗತ್ಯವಿರುವ ಪುಸ್ತಕ ಮತ್ತು ಹಣದ ಸಹಾಯ ಮಾಡಿದರು. ಉಸ್ಮಾನ್ ಶೇಕ್ ಶಾಲೆ ನಡೆಸಲು ಮನೆಕೊಟ್ಟರು. ಆನಂತರ ಫುಲೆಯವರ ಶಿಕ್ಷಣ ಸಂಸ್ಥೆಗಳು ವೇಗ ಪಡೆದುಕೊಂಡು ಎಲ್ಲರ ಆಸಕ್ತಿಯನ್ನು ಸೆಳೆದವು.
ಸಾವಿತ್ರಿಬಾಯಿ ಮತ್ತು ಜ್ಯೋತಿಬಾ 1851 ರ ಹೊತ್ತಿಗೆ 3 ಶಾಲೆಗಳನ್ನು ತೆರೆದು 150 ಬಾಲಕಿಯರು ಓದುವ ಹಾಗೆ ಮಾಡಿದರು.. ಫುಲೆಯವರ ಅಮೋಘವಾದ ಕೆಲಸವನ್ನು 1852 ರಲ್ಲಿ ಶಿಕ್ಷಣ ಇಲಾಖೆ ಗುರುತಿಸಿ ಸನ್ಮಾನ ಸಮಾರಂಭವನ್ನು ಏರ್ಪಡಿಸಿತು. ನಂತರದಲ್ಲಿ ಪೂನಾದಿಂದ ಬರುವ ಮಕ್ಕಳಿಗೆ ವಸತಿ ವಿದ್ಯಾಲಯಗಳನ್ನು ಸ್ಥಾಪಿಸಿ ಕಡಿಮೆ ದರದಲ್ಲಿ, ವಸತಿ ಮತ್ತು ಊಟ ಕೊಡುವ ವ್ಯವಸ್ಥೆ ಮಾಡಿದರು. ಸಾರ್ವಜನಿಕ ಬಾವಿಗಳಲ್ಲಿ ಮತ್ತು ಇತರ ಮೂಲಗಳಿಂದ ನೀರು ದೊರೆಯದಂತವರಿಗೆ ಬಾವಿಗಳನ್ನು ತೆರೆಯಲು ಸಹಾಯ ಮಾಡುತ್ತಿದ್ದರು. ಮಕ್ಕಳು ಶಾಲೆಗೆ ಬರುವುದನ್ನು ಪ್ರೇರೇಪಿಸಲು, ಅವರ ತಂದೆ ತಾಯಿಯಂದಿರು ಶಿಕ್ಷಣ ಹೊಂದಿರಬೇಕೆಂದು ಅರ್ಥ ಮಾಡಿಕೊಂಡಿದ್ದವರು, ಅಂತಹ ಎಲ್ಲಾ ಪೋಷಕರಿಗೆ ವಯಸ್ಕರ ಶಿಕ್ಷಣವನ್ನು ಅವರ ಮನೆಗಳಲ್ಲೇ ಕೊಡುತ್ತಿದ್ದರು. ವಿಧವೆಯರು ಅದರಲ್ಲಿಯೂ ಒಂಟಿಯಾಗಿರುವಂತವರನ್ನು ಸಮಾಜ ಬಳಸಿಕೊಳ್ಳುವಂತಿದ್ದವರನ್ನು ಕಂಡು ಸಾವಿತ್ರಿಬಾಯಿ ಫುಲೆ ಅವರು ಮರುಗುತ್ತಿದ್ದರು. ವಿಧವೆಯರ ತಲೆಯನ್ನು ಬೋಳಿಸಿ ಅಪಮಾನಗೊಳಿಸುವಂತಹ ಭಯಂಕರ ಆಚಾರದ ವಿರುದ್ಧ ಕ್ಷೌರಿಕರು ಮುಷ್ಕರ ಹೂಡುವಂತೆ ಪ್ರೇರೇಪಿಸಿದರು. ಹೀಗೆ ಎಲ್ಲ ಸ್ಥರದಲ್ಲೂ ಅವರು ಮಹಿಳೆಯರೊಟ್ಟಿಗೆ ಇದ್ದರು.
ಜ್ಯೋತಿಬಾ ರವರು 1873ರಲ್ಲಿ ಸತ್ಯಶೋಧಕ ಸಮಾಜ ಎಂಬ ಸಂಘವನ್ನು ಪ್ರಾರಂಭಿಸಿ ಅದರಿಂದ ಎಲ್ಲಾ ಮಾನವರು ದೇವರ ಮಕ್ಕಳು ಇವರ ಮಧ್ಯ ದೇವರನ್ನು ಪೂಜಿಸಲು ಪೂಜಾರಿಗಳು ಬೇಕಿಲ್ಲ ಎಂದು ಘೋಷಿಸಿದರು. ಈ ಸಂಘಕ್ಕೆ ಸಾವಿತ್ರಿಬಾಯಿ ಫುಲೆ ಸದಸ್ಯರಾಗಿ ಸತ್ಯ ಶೋಧಕ ಮದುವೆಗಳನ್ನು ಪುರೋಹಿತರಿಲ್ಲದೆ ಮದುವೆ ಮಾಡಿಸುತ್ತಿದ್ದರು. ಆದರೆ ಮದುವೆ ಗಂಡು ” ಹೆಂಡತಿಗೆ ಶಿಕ್ಷಣ ಕೊಡಿಸುವೆ ಮತ್ತು ಸಮನಾದ ಹಕ್ಕುಗಳನ್ನು ನೀಡುವೆ ” ಎಂದು ಪ್ರತಿಜ್ಞೆ ಮಾಡಬೇಕಾಗಿತ್ತು. ಸಂಪ್ರದಾಯದ ಪುರೋಹಿತರ ಮಂತ್ರಗಳನ್ನು ಗಂಡು ಮತ್ತು ಹೆಣ್ಣುಗಳೇ ಪಠಿಸಬೇಕಾಗಿತ್ತು. ಸಮಾಜವು 1877ರಲ್ಲಿ ಮಹಾರಾಷ್ಟ್ರದಲ್ಲಿ ಕ್ಷಾಮ ತಲೆದೋರಿದಾಗ ಸಾವಿತ್ರಿಬಾಯಿ ಕೆಲವು ಸ್ವಯಂ ಸೇವಕರೊಂದಿಗೆ ಪ್ರವಾಸ ಮಾಡಿ ಕ್ಷಾಮ ಪೀಡಿತ ಪ್ರದೇಶದ ಜನರಿಗೆ ಹಣ ಮತ್ತು ಇತರ ಅಗತ್ಯವಾದ ಸಹಾಯಗಳನ್ನು ಮಾಡಿದರು. ಸಾಲ ಕೊಡುತ್ತಿದ್ದ ಸಾಹುಕಾರರು ಹೇಗೆ ಬಡವರನ್ನು ಬಳಸಿಕೊಳ್ಳುತ್ತಿದ್ದರು ಎನ್ನುವುದನ್ನು ಅವರಿಗೆ ಮನವರಿಕೆ ಮಾಡಿಕೊಡುತ್ತಿದ್ದರು.
ಫುಲೆ ದಂಪತಿಗಳು ಅಗತ್ಯವಿರುವ ಆಹಾರ ಮತ್ತು ಆಶ್ರಯ ನೀಡಲು ಧನಕವಾಡಿಯಲ್ಲಿ ವಿಕ್ಟೋರಿಯಾ ಬಾಲಾಶ್ರಮ ಕಟ್ಟಿದರು. ಜ್ಯೋತಿಬಾ ಅವರ ಮರಣ ನಂತರ ಸಾವಿತ್ರಿಬಾಯಿ ಫುಲೆ ಸತ್ಯಶೋಧಕ ಸಮಾಜದ ಅಧ್ಯಕ್ಷತೆಯನ್ನು ವಹಿಸಿಕೊಂಡು 1893ರಲ್ಲಿ ಸಾಸವಾಡದಲ್ಲಿ ಒಂದು ಮಹಾ ಸಮ್ಮೇಳನವನ್ನು ಆಯೋಜಿಸಿದರು. ಮಹಾರಾಷ್ಟ್ರದಲ್ಲಿ 1896ರಲ್ಲಿ ಮತ್ತೊಮ್ಮೆ ಕ್ಷಾಮ ತಲೆದೋರಿತು ಮತ್ತು ಅದೇ ಸಮಯದಲ್ಲಿ ಮುಂಬೈ ಮತ್ತು ಪೂನಾಗಳಲ್ಲಿ ಪ್ಲೇಗ್ ಕಾಣಿಸಿಕೊಂಡು ಅನೇಕರು ಜೀವ ತೆತ್ತರು. ಆಗ ಸಾವಿತ್ರಿಬಾಯಿ ಪರಿಹಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅವರ ಸಾಕು ಮಗ ಯಶವಂತ್ ಕೂಡ ಒಂದು ಆಸ್ಪತ್ರೆಯನ್ನು ಪ್ರಾರಂಭಿಸಿ ಫುಲೆಯವರಿಗೆ ಸಹಾಯಕರಾಗಿ ದುಡಿದನು.
ಸಾವಿತ್ರಿಬಾಯಿ ಫುಲೆ ಅವರು ಭಾರತದಲ್ಲಿ ಉತ್ತಮವಾದ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ್ದಲ್ಲದೆ ಭಾರತದ ಮೊಟ್ಟ ಮೊದಲ ಮಹಿಳಾ ಅಧ್ಯಾಪಕಿಯಾಗಿದ್ದರು.ಅವರು ಕವಿಯಿತ್ರಿಯಾಗಿ ಕಾವ್ಯ ಪುಲೆ ಮತ್ತು ಭಾವನ ಕಾಶಿ ಸಹೋದರ ರತ್ನಾಕರ ಎಂಬ ಕೃತಿಗಳನ್ನು ರಚಿಸಿದ್ದಾರೆ. ಅವರ ಲೇಖನಗಳು ಸಾಮಾಜಿಕ ಕಳಕಳಿಯನ್ನು ಬೆಂಬಲಿಸುತ್ತವೆ.ಸ್ವಾತಂತ್ರ ಮತ್ತು ಹಳೆ ಕಂದಾಚಾರಗಳು ಮತ್ತು ಪದ್ಧತಿಗಳನ್ನು ಮೆಟ್ಟಿನಿಂತು ಜನ ಹೊಸತನ್ನು ಕಲಿತು ಜೀವನ ಸುಖಮಗೊಳಿಸಿಕೊಳ್ಳಬೇಕು ಎಂದು ನಂಬಿದ್ದವರ ಆ ತತ್ವಗಳನ್ನು ಅವರ ಅನುಯಾಯಿಗಳು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.


