ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಸವಾದಿ ಶರಣರು ತಮ್ಮ ಆಧ್ಯಾತ್ಮಿಕ ಲೋಕದಿಂದ ಹುಡುಕಿ ತೆಗೆದ ತತ್ವಗಳೇ ವಚನಗಳು. ಸತ್ಯ, ಶುದ್ಧ, ಕಾಯಕದಿಂದ ನೆಮ್ಮದಿ, ಸಂತೃಪ್ತಿ ನೀಡುವುದು ದಾಸೋಹ, ಸಮಾನತೆ, ಪರಿಶುದ್ಧತೆ ಎಲ್ಲವೂ ಇದೆ. ಅದರಲ್ಲಿ ಕಾಯಕ, ದಾಸೋಹ ಮಾದರಿಯಾಗಬೇಕೆಂದು ಸಾಹಿತಿ ಡಾ. ರೇಖಾ ಬ. ಪಾಟೀಲ ಹೇಳಿದರು.
ನಗರದ ವೀರಶೈವ ಸಭಾಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದವರು ಏರ್ಪಡಿಸಿದ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಶ್ರೀ ಸಿದ್ಧರಾಮೇಶ್ವರರ ಅನುಭಾವ ಕುರಿತು ಮಾತನಾಡುತ್ತ ಅನುಭಾವಿಗಳೆಂದರೆ ಕನಸು ಕಾಣುವ ಶಿಶುವಿನಂತೆ ಸತ್ಯ, ನೀತಿ, ಯೋಗವನ್ನು ಸಾಧಿಸುವುದು. ಅನುಭಾವ ಸಮುದ್ರದಂತೆ ಜನಹಿತಕ್ಕಾಗಿ ಸುಗ್ಗವ್ಯಯ ೫ ತಿಂಗಳ ಮಡಿಲಲ್ಲಿ ಜನಿಸಿದ ಸಿದ್ಧರಾಮೇಶ್ವರರು ಬಾಲ್ಯದಿಂದಲೂ ಶಿವಭಕ್ತನಾಗಿ ಪರಿಶುದ್ಧ ಮನಸ್ಸಿನಿಂದ ಶಿವನ ಆರಾಧನೆ ಮಾಡುತ್ತ ಧ್ಯಾನದಲ್ಲಿ ಲೀನನಾಗಿ ಶಿವನನ್ನು ಒಲಿಸಿಕೊಂಡವರು. ಜನಹಿತಕ್ಕಾಗಿ ಆತ್ಮಕಲ್ಯಾಣ, ಲೋಕಕಲ್ಯಾಣ ಮಾಡುತ್ತ ತಮ್ಮ ಪವಾಡಗಳಿಂದ ಜಗತ್ತನ್ನೇ ಗೆದ್ದವರು. ಸಮತಾವಾದ, ಹೃದಯವಂತಿಕೆ ಅವರಲ್ಲಿ ಇತ್ತು. ಶಿವನಸಂಕಲ್ಪವಿತ್ತು ಜನಕಲ್ಯಾಣಕ್ಕಾಗಿ ಶಿವಯೋಗಿ ಸಿದ್ಧರಾಮೇಶ್ವರರಾಗಿ ನಿಸ್ವಾರ್ಥ ಬದುಕನ್ನು ಬಾಳಿ ತತ್ವ ಆದರ್ಶಗಳಿಂದ ನುಡಿದಂತೆ ನಡೆದವರು. ಆಚಾರ-ವಿಚಾರ ಅನುಭವದ ತತ್ವಗಳನ್ನು ಕಾಯಕದ ಮೂಲಕ ಅಳವಡಿಸಿಕೊಂಡ ಸಿದ್ಧರಾಮೇಶ್ವರರು ೬೧ಸಾವಿರ ವಚನಗಳನ್ನು ರಚಿಸಿ ಇಂದು ಕೇವಲ ೧೬೦೦ ವಚನಗಳು ಮಾತ್ರ ಲಭ್ಯವಾಗಿವೆ. ಅವೆಲ್ಲವೂ ಸಮಾಜದ ಒಳತಿಗಾಗಿ ರಚಿಸಿದಂತಹವು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ, ಶಿವಯೋಗಿ ಸಿದ್ಧರಾಮೇಶ್ವರಲ್ಲಿ ನಮಗೆ ಅತ್ಯಂತ ಪೂಜ್ಯ ಸ್ಥಾನವಿದೆ. ಭಕ್ತರು, ಭಕ್ತಿಯಿಂದ ತನು-ಮನ ಪೂಜ್ಯ ಭಾವದಿಂದ ಶ್ರದ್ಧೆಯಿಂದ ಸ್ಮರಣೆ ಮಾಡಬೇಕು. ಶಿವನ ಸ್ವರೂಪವೇ ಗುರು. ನಾವು ಲಿಂಗ ಪೂಜೆಯಮೂಲಕ ಶಿವನನ್ನು ಕಾಣಬಹುದು ಎಂದರು.
ಅತಿಥಿ ಶಿವಲೀಲಾ ಮಠಪತಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ತು ಬೆಂಗಳೂರು ಇವರು ಪ್ರತಿ ವರ್ಷ ಕೊಡಮಾಡುವ ಡಾ. ಎಚ್. ನರಸಿಂಹಯ್ಯ ಪ್ರಶಸ್ತಿಗೆ ಭಾಜನರಾದ ಸಾಹಿತಿ ಜಂಬುನಾಥ ಕಂಚ್ಯಾಣಿ ಅವರನ್ನು ಮಹಾಸಭಾ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಶರಣೆ ಅಕ್ಕಮಹಾದೇವಿ ಬುರ್ಲಿ, ಅಪ್ಪಾಸಾಹೇಬ ಕೋರಿ, ಸಹದೇವ ನಾಡಗೌಡರ, ಶಾರದಾ ಕೊಪ್ಪ (ಐಹೊಳ್ಳಿ) ಬ್ಯಾಕೋಡ ದಂಪತಿ, ಸೋಮಶೇಖರ ವಾಲಿ, ಎಂ.ಎಂ. ಅವರಾದಿ, ರಾಜೇಂದ್ರ ಕೌಜಲಗಿ, ಮಲ್ಲಿಕಾರ್ಜುನ ಅಮರಣ್ಣವರ, ಎಸ್.ಎಂ. ಶಿವಣಗಿ, ಬಿ.ಟಿ. ಈಶ್ವರಗೊಂಡ, ಕಾಶಿನಾಥ ಅಣೆಪ್ಪನವರ, ಜಗದೀಶ ಮೋಟಗಿ, ಶರಣಗೌಡ ಪಾಟೀಲ, ಗುರುಪಾದಪ್ಪ ಅಂಬಲಿ, ಕೆ.ಎಸ್. ಬಿರಾದಾರ, ಅಂಗಡಿ, ಆರ್.ಎಸ್. ಪಟ್ಟಣಶೆಟ್ಟಿ, ಶಿರಹಟ್ಟಿ, ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕಾರ್ಯಕ್ರಮ ಸಾಹಿತಿ ಸಂಗಮೇಶ ಬದಾಮಿ ನಿರೂಪಿಸಿದರು. ನಿರ್ದೇಶಕ ವಿಠ್ಠಲ ತೇಲಿ ವಂದಿಸಿದರು.

