ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಬಸವನಗರದ ಖೇಮು ರಾಠೋಡ ಎಂಬುವವರ ಮಾಲೀಕತ್ವದ ಇಟ್ಟಂಗಿ ಭಟ್ಟಿಯಲ್ಲಿ ಕಾರ್ಮಿಕರಾಗಿ, ಅಲ್ಲಿರೇ ವಾಸವಾಗಿದ್ದ ಸದಾಶಿವ ಬಸಪ್ಪ ಮಾದರ ಸದಾಶಿವ ಚಂದ್ರಪ್ಪ ಬಬಲಾದಿ ಹಾಗೂ ಉಮೇಶ ಮಾಳಪ್ಪ ಮಾದರ ಅವರ ಮೇಲೆ ಮನಸೋಯಿಚ್ಛೆ ಥಳಿಸಿ, ಮಾರಣಾಂತಿಕ ಹಲ್ಲೆಗೈದ ಮಾಲೀಕ ಖೇಮು ರಾಠೋಡ ಸೇರಿದಂತೆ ಐವರು ಆರೋಪಗಳನ್ನು ಪೋಲೀಸರು ಸೋಮವಾರ ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ: ಜ.13ರಂದು ಸಂಕ್ರಮಣ ಹಬ್ಬದ ನಿಮಿತ್ಯ ಎಲ್ಲ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಿದ್ದರು. ಜ.15 ರಂದು ಇಟ್ಟಂಗಿ ಭಟ್ಟಿ ಮಾಲೀಕರು ಕಾರ್ಮಿಕರಿಗೆ ಫೋನ್ ಮಾಡಿ ಕೆಲಸಕ್ಕೆ ಮರಳಿ ಬರುವಂತೆ ತಿಳಿಸಿದ್ದು, ಆಗ ಕಾರ್ಮಿಕರು ಹಬ್ಬದ ಖರ್ಚಿಗೆ 10 ಸಾವಿರ ಹಣ ಕೇಳಿದ್ದು, ಮಾಲೀಕ ಕೊಡುತ್ತೇನೆ ಅಂತಾ ಹೇಳಿ ಇಟ್ಟಂಗಿ ಭಟ್ಟಿಗೆ ಬರಲು ಹೇಳಿದ್ದು, ಅದರಂತೆ ಮೂವರು ಕಾರ್ಮಿಕರು ಜ.15 ರಂದು ಬೆಳಗ್ಗೆ ಇಟ್ಟಂಗಿ ಭಟ್ಟಿಗೆ ಬಂದಿದ್ದರು. ಆಗ ಮಾಲೀಕ ಖೇಮು ರಾಠೋಡ, ಆತನ ಮಗ ರೋಹನ ರಾಠೋಡ ಹಾಗೂ ಇನ್ನೂ ಕೆಲವು ಜನರು ಸೇರಿ ಕಾರ್ಮಿಕರನ್ನು ರೂಮ್ ನಲ್ಲಿ ಕೈ ಕಾಲು ಕಟ್ಟಿ ಹಾಕಿ, ಪ್ಲಾಸ್ಟಿಕ್ ಪೈಪ್ನಿಂದ ಹಲ್ಲೆ ಮಾಡಿ ರೂಮ್ ನಲ್ಲಿ ಕೂಡಿ ಹಾಕಿರುತ್ತಾರೆ. ನಂತರ ಜ.18 ರಂದು ಬೆಳಿಗ್ಗೆ 10.00 ಗಂಟೆಗೆ ಕಾರ್ಮಿಕರನ್ನು ರೂಮ್ನಿಂದ ಹೊರಗೆ ಕರೆದುಕೊಂಡು ಬಂದು ಪುನಃ ಹಲ್ಲೆ ನಡೆಸಿದ್ದರು..
ಸದರಿ ಘಟನೆ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ಗುನ್ನೆ ನಂ: 28/2025 ಕಲಂ: 189(2), 191(2), 191(3), 126(2), 127(2), 118(1), 109(1), 352, 351(2): 190 ಬಿ.ಎನ್.ಎಸ್-2023 ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಸದರಿ ಪ್ರಕರಣದಲ್ಲಿ ಆರೋಪಿತರಾದ ಖೇಮು ರಾಠೋಡ, ಸಚಿನ ಮಾನವರ, ವಿಶಾಲ ಜುಮನಾಳ
ರೋಹನ್ ಖೇಮು ರಾಠೋಡ ಮತ್ತು ಕನಕಮೂರ್ತಿ ಜ್ಞಾನದೇವ ಗೋಂಧಳಿ ಎಂಬುವವರನ್ನು
ಬಂಧಿಸಲಾಗಿದ್ದು, ಎಲ್ಲ ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

