ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನೀವುಗಳು ನೀಡಿರುವ ಒಂದು ಮತ ಇಡೀ ವಿಜಯಪುರ ನಗರದ ಚಿತ್ರಣವನ್ನೇ ಬದಲಿಸಿ, ದೇಶದಲ್ಲಿ ಅತ್ಯುತ್ತಮ ಗಾಳಿ ಬಿಸುವ ನಗರ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಬರಲು ಸಾಧ್ಯವಾಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ಶ್ರೀ 1008 ಸಹಸ್ರಫಣಿ ಪಾರ್ಶ್ವನಾಥ ಜೈನ್ ಮಂದಿರ ಹತ್ತಿರ ಭಾನುವಾರ ಲೋಕೋಪಯೋಗಿ ಇಲಾಖೆಯ ಎಸ್.ಎಚ್.ಡಿ.ಪಿ ಯೋಜನೆಯಡಿ ಮಂಜೂರಿಸಿದ ರೂ.10 ಕೋಟಿ ಅನುದಾನದಲ್ಲಿ ಸೋಲಾಪುರ ರಸ್ತೆಯಿಂದ ಇಟ್ಟಂಗಿಹಾಳ ಹೋಗುವ ರಿಂಗ್ ರಸ್ತೆ ವರೆಗೆ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಬೆಂಗಳೂರಿನಲ್ಲಿ ಇರುವ ಎಂ.ಜಿ ರಸ್ತೆ ಮೀರಿಸುವಂತೆ ನಗರದ ರಸ್ತೆಗಳು ಅಭಿವೃದ್ಧಿಗೊಂಡಿವೆ. ರಸ್ತೆಗಳ ಅಗಲೀಕರಣ ವೇಳೆ ಹಲವರು ಬೈದರು. ನಂತರ ಅವರೇ ಬಂದು ಥ್ಯಾಂಕ್ಸ್ ಹೇಳಿದ್ದಾರೆ. ಅದಕ್ಕೆ ಕಾರಣ ನಗರದಲ್ಲಿರುವ ರಸ್ತೆಗಳನ್ನು ವಿಶಾಲವಾಗಿ ಹಾಗೂ ಗುಣಮಟ್ಟದಿಂದ ಅಭಿವೃದ್ಧಿಗೊಳಿಸಿದಕ್ಕೆ ಸುಗಮ ಸಂಚಾರ, ದೂಳುಮುಕ್ತ ಜೊತೆಗೆ ನಿವೇಶನಗಳ ಬೆಲೆಯೂ ದುಪ್ಪಟ್ಟಾಗಿವೆ ಎಂದರು.
ವಿದೇಶ ಸೇರಿ ಬೇರೆ ಬೇರೆ ಕಡೆಗಳಲ್ಲಿ ನೆಲೆಸಿರುವ ನಮ್ಮವರು 8-10 ವರ್ಷಗಳ ನಂತರ ವಿಜಯಪುರಕ್ಕೆ ಬಂದರೆ, ಇದು ನಮ್ಮ ನಗರವೇ ಎಂದು ಕೆಲ ಕ್ಷಣ ಗೊಂದಲದಲ್ಲಿರುತ್ತಾರೆ. ಅಷ್ಟೊಂದು ಅಭಿವೃದ್ಧಿಯಲ್ಲಿ ಬದಲಾವಣೆ ಆಗಿದೆ. ಅದೇ ರೀತಿ ಸಹಸ್ರಫಣಿ ಪಾರ್ಶ್ವನಾಥ ಜೈನ್ ಮಂದಿರ ರಸ್ತೆಯೂ ಅಭಿವೃದ್ಧಿಗೊಳ್ಳಲಿದೆ. ಇನ್ನೊಂದು ರಿಂಗ್ ರೋಡ ಸಹ ಮಾಡಲಾಗುವುದು ಎಂದು ತಿಳಿಸಿದರು.
ವಕ್ಫ್ ಕಾನೂನು ಎಷ್ಟು ಕೆಟ್ಟದ್ದಾಗಿದೆ ಎಂಬುವುದು ಬಹಳಷ್ಟು ಅಧಿಕಾರಿಗಳಿಗೂ ಗೊತ್ತಿಲ್ಲ. ಅದರ ಬಗ್ಗೆ ಯಾರು ಹೆದರಬೇಡಿ, ಯಾರೊಬ್ಬರಿಗೂ ಯಾವುದೇ ಸಮಸ್ಯೆ ಆಗಲು ನಾವು ಬಿಡುವುದಿಲ್ಲ. ರಾಜ್ಯದಲ್ಲಿ ಸಂಚರಿಸಿ ವಾಸ್ತವ ತಿಳಿದುಕೊಂಡು, ಎರಡು ಬಾರಿ ದೆಹಲಿಗೆ ತೆರಳಿ ಸುಮಾರು 2500 ಪುಟಗಳ ವರದಿ ಸಲ್ಲಿಸಿದ್ದೇವೆ. ತಿದ್ದುಪಡಿ ಬದಲಾಗಿ, ಸಂಪೂರ್ಣ ವಕ್ಫ್ ರದ್ದು ಮಾಡುವಂತೆಯೂ ಮನವಿ ಮಾಡಿಕೊಂಡಿದ್ದೇವೆ. ಎಲ್ಲರೂ ಒಂದಾಗಿ, ಯಾರು ಏನು ಮಾಡುವುದಿಲ್ಲ ಎಂದು ಸಲಹೆ ನೀಡಿದರು.
ಪ್ರಜಾತಂತ್ರದ ಜಾತ್ರೆ ಅಂದರೆ ಮತದಾನ. ಎಲ್ಲರೂ ಜಾತ್ರೆಗಳಿಗೆ ಹೋದಂತೆ ಮತದಾನ ಬಂದಾಗ ಮನೆಯಲ್ಲಿ ಕುಳಿತುಕೊಳ್ಳದೆ, ಮತ ಚಲಾಯಿಸಲು ಹೋಗಿ ಒಳ್ಳೆಯವರನ್ನು ಆಯ್ಕೆ ಮಾಡಿದರೆ ಹೀಗೆ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ ಎಂದರು.
ಮುಖಂಡರಾದ ಸಾಯಬಣ್ಣ ಬೋವಿ, ಶೀತಲಕುಮಾರ ಓಗಿ, ಮಧುಸೂಧನ ಯಲಗುದ್ರಿ, ವಿ.ಸಿ.ಕುಲಕರ್ಣಿ, ಪ್ರಕಾಶ ಗೊಂಗಡಿ, ಸುನೀಲ ಉಳ್ಳಾಗಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

