ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಆಂಧ್ರಪ್ರದೇಶದಲ್ಲಿ ಜನಿಸಿದ ೧೫ನೇ ಶತಮಾನದ ಕವಿ, ವಚನಕಾರ ವೇಮನ ದುಶ್ಚಟಗಳ ದಾಸನಾಗಿದ್ದರು. ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮಳಿಂದಾಗಿ ಮಹಾನ್ ಯೋಗಿ ಆದರು ಎಂದು ನಿವೃತ್ತ ಮುಖ್ಯಗುರು ಆರ್.ಎಸ್ ಬಿರಾದಾರ ಹೇಳಿದರು.
ಸಿಂದಗಿ ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಹಮ್ಮಿಕೊಂಡ ವೇಮನರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನ್ನಡದಲ್ಲಿ ಸರ್ವಜ್ಞ, ತಮಿಳುನಾಡಿನಲ್ಲಿ ತಿರುವಳ್ಳುವರ್ ಅವರಂತೆ ಆಂಧ್ರದಲ್ಲಿ ವೇಮನ ಅವರು ಮಹಾನ್ ಯೋಗಿ, ಸಮಾಜ ಚಿಂತಕ ಹಾಗೂ ವಚನಕಾರರು. ದುಶ್ಚಟಗಳ ದಾಸನಾಗಿದ್ದ ಅವರು ವೇಶ್ಯೆಗೆ ಮೂಗುತಿ ಕೊಡುವ ಸಂಬಂಧ ಅತ್ತಿಗೆ ಬಳಿ ಬರುತ್ತಾನೆ. ಆಗ ಆಕೆ ಕರಾರು ಹಾಕುತ್ತಾಳೆ. ವೇಮನ ಮಂಚದ ಮೇಲೆ ಕುಳಿತುಕೊಳ್ಳಬೇಕು. ವೇಶ್ಯೆ ನಗ್ನಳಾಗಿ ಬಂದು ಮಂಚವನ್ನು ಮುರು ಸುತ್ತು ಹಾಕಿ, ಹಿಮ್ಮುಖವಾಗಿ ಬಾಗಿ ಮೂಗುತಿ ಪಡೆಯಬೇಕು. ಅಲ್ಲಿಯ ತನಕ ವೇಮನ ತದೇಕಚಿತ್ತದಿಂದ ಅವಳನ್ನು ನೋಡಬೇಕು ಎನ್ನುತ್ತಾಳೆ. ಇದನ್ನು ಪಾಲಿಸಿದ ವೇಮನ ಜಿಗುಪ್ಸೆಗೊಳ್ಳುತ್ತಾನೆ. ಅಸಹ್ಯಭಾವನೆ ಮೂಡುತ್ತೆ. ಹುಟ್ಟುವಾಗ ಬೆತ್ತಲೆ, ಸತ್ತಮೇಲೆ ಬೆತ್ತಲೆ ಎನ್ನುವುದು ಅರಿವಾಗಿ ಬದುಕಿನುದ್ದಕ್ಕೂ ನಗ್ನನಾಗಿ ವೈರಗ್ಯಮೂರ್ತಿಯಾಗಿ ಸಾಧನೆಯ ಮೂಲಕ ಮಹಾನ್ ಯೋಗಿ ಆದರು ಎಂದರು.
ಈ ವೇಳೆ ರೆಡ್ಡಿ ಸಮುದಾಯದ ಹಿರಿಯ ಕಸಾಪ ಮಾಜಿ ತಾಲೂಕಾಧ್ಯಕ್ಷ ಚಂದ್ರಶೇಖರ ದೇವರೆಡ್ಡಿ ಮಾತನಾಡಿ, ಸಂತ ವೇಮನರ ಜೀವನ ಆದರ್ಶಗಳನ್ನು ನಾವೆಲ್ಲ ರೂಢಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಸೇರಿದಂತೆ ರೆಡ್ಡಿ ಸಮುದಾಯದ ಮುಖಂಡರು ವೇಮನರ ಫೋಟೋ ಪೂಜೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಬಿ.ಎಂ ಬಿರಾದಾರ, ಎಂ.ಎಸ್.ಪಾಟೀಲ, ಅಶೋಕ ಬಿರಾದಾರ, ಬಸವರಾಜ ಕೋಳೂರ, ಜಿ.ಬಿ ಡಿಗ್ಗಾವಿ, ಅಪ್ಪುಗೌಡ ಕೋಟಿ, ಸಿದ್ದನಗೌಡ ಐನಾಪೂರ, ಗೇಡ್-೨ ತಹಶೀಲ್ದಾರ್ ಇಂದಿರಾಬಾಯಿ ಬಳಗಾನೂರ, ಶಿರಸ್ತೇದಾರ್ ರಾಘವೇಂದ್ರ ಜೋಶಿ ಸೇರಿದಂತೆ ಅಧಿಕಾರಿಗಳು, ಸಮಾಜದ ಮುಖಂಡರು ಸಿಬ್ಬಂದಿಗಳು ಇದ್ದರು.

