ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಜ೨೧ ರಂದು ಬೆಳಗಾವಿಯಲ್ಲಿ ನಡೆಯಲಿರುವ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗೋಣ ಎಂದು ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಕರೆ ನೀಡಿದರು.
ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ತಮ್ಮ ನಿವಾಸದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಗಾಂಧೀಜಿಯವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ನೂರು ವರ್ಷ ತುಂಬಿದ ಹಿನ್ನೆಲೆ, ಅವರ ನೆನಪುಗಳನ್ನು ಜನತೆಗೆ ಮುಟ್ಟಿಸುವ ಮೂಲಕ ಗಾಂಧಿ ತತ್ವಗಳನ್ನು ಅಳವಡಿಸಿಕೊಂಡಲ್ಲಿ ರಾಜಕಾರಣದಲ್ಲಿ ಬದಲಾವಣೆಯನ್ನು ತರಲು ಸಾಧ್ಯ ಎನ್ನುವ ಉದ್ದೇಶದಿಂದ ಈ ಸಮಾವೇಶವನ್ನು ಆಯೋಜಿಸಲಾಗಿದೆ. ಅಂದಾಜು ಒಂದೂವರೆ ಲಕ್ಷ ಜನ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಅನ್ನೋದು ಸಂಕಲ್ಪವಾಗಿದೆ. ವಿಶೇಶವಾಗಿ ಪಂಚಾಯತ ಸದಸ್ಯರುಗಳು, ಮುಖಂಡರುಗಳು, ಕೇಂದ್ರ ಕಾರ್ಯಕರ್ತರು ಮತ್ತು ಗಣ್ಯ ಮಾನ್ಯರು ಕಡ್ಡಾಯವಾಗಿ ಭಾಗುವಂತೆ ಕಟ್ಟಪ್ಪಣೆ ನೀಡಲಾಗಿದೆ ಎಂದರು.
ಅಂದು ಬೆಳಿಗ್ಗೆ ೧೧ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗುವದು. ಯಾವುದೇ ವಿಳಂಬವಾಗುದಿಲ್ಲ ಎಂದು ತಿಳಿಸಲಾಗಿದೆ. ಹೊರಡುವ ದಿನ ವಾಹನಗಳು ತಯಾರಿಯಲ್ಲಿರುತ್ತವೆ. ಮಹಿಳಾ ಕಾರ್ಯಕರ್ತರಿಗೆ ಪ್ರತ್ಯೇಕ ವಾಹನದ ವ್ಯವಸ್ಥೆ ಕಲ್ಪಿಸಲಾಗುವದು. ನಸುಕಿನ ಜಾವ ೫ಗಂಟೆಗೆ ಪಟ್ಟಣದಿಂದ ಹೊರಡಬೇಕಾಗುತ್ತದೆ. ಪಕ್ಷದ ಎಲ್ಲ ಪದಾಧಿಕಾರಿಗಳು ಕಾರ್ಯಕರ್ತರು ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಮುಂದಾಳತ್ವ ವಹಿಸಿ ಜನತೆಯನ್ನು ಕರೆತರುವ ಕಾರ್ಯದಲ್ಲಿ ತೊಡಗಬೇಕು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವದರಿಂದ ಹೆಚ್ಚಿನ ಭದ್ರತೆ ಒದಗಿಸಲಾಗಿರುತ್ತೆ. ನಿಮ್ಮ ವಾಹನಗಳು ದೂರದಲ್ಲಿ ನಿಲ್ಲಿಸಬೇಕಾಗುತ್ತದೆ. ವಾಹನ ಸವಾರರೆಲ್ಲರೂ ನಿಮ್ಮ ಮೊಬೈಲ್ ನಂಬರ್ಗಳನ್ನು ಚಾಲಕನಿಗೆ ನೀಡಿ, ಚಾಲಕನ ಸಂಖ್ಯೆಯನ್ನು ನಿಮ್ಮಲ್ಲಿ ಉಳಿಸಿಕೊಂಡಲ್ಲಿ ಒಳ್ಳೆಯದು. ಈ ಕಾರ್ಯಕ್ರಮದಲ್ಲಿ ನಮ್ಮ ತಾಲೂಕಿನಿಂದ ಅತೀ ಹೆಚ್ಚು ಜನ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಮೂಲಕ ಗಾಂಧೀಜಿಯವರ ತತ್ವ ಸಿದ್ಧಾಂತಗಳನ್ನು ಹಳ್ಳಿ ಹಳ್ಳಿಗೆ ತಲುಪಿಸುವ ಜವಾಬ್ದಾರಿ ನಮ್ಮದಿದೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಎಂದರು.
ಈ ವೇಳೆ ಅಫಜಲಪುರದ ಶಾಸಕ ಎಂ.ವಾಯ್.ಪಾಟೀಲ, ಮಾಜಿ ಜಿ.ಪಂ ಸದಸ್ಯ ಮತೀನ ಪಟೇಲ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಪು.ಅಧ್ಯಕ್ಷ ಮಹೆಬೂಬ ಗೊಳಸಂಗಿ, ಶಿವಶಂಕರಗೌಡ ಹಿರೇಗೌಡರ, ಸಿದ್ದಣ್ಣ ಮೇಟಿ, ವಾಯ್.ಎಚ್.ವಿಜಯಕರುಮರೇಶ ಗೂಳಿ, ಹರೀಶ ಬೆವೂರ, ಸಂಗಣ್ಣ ಮೇಲಿನಮನಿ, ಸಿ.ಜಿ.ವಿಜಯಕರ, ಪಿಂಟು ಸಾಲಿಮನಿ, ಸುಜಾತಾ ಸಿಂಧೆ, ಸಿಕಂದರ ಜಾನ್ವೇಕರ ಸೇರಿದಂತೆ ಹಲವರು ಇದ್ದರು.

