ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಭಾರತ ಚುನಾವಣಾ ಆಯೋಗವು ಚುನಾವಣೆ ಕುರಿತ “ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ” ಎಂಬ ಧ್ಯೇಯವಾಕ್ಯವನ್ನು ಜ.೨೫ರಂದು ತಮ್ಮ ತಮ್ಮ ಕಚೇರಿಯ ಪತ್ರ ವ್ಯವಹಾರಗಳಲ್ಲಿ ಬಳಕೆ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.
ಗುರುವಾರ ಸಂಜೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜನವರಿ ೨೫ ರಂದು ನಡೆಯುವು ೧೫ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸರ್ಕಾರಿ ಹಾಗೂ ಅಧೀನ ಕಚೇರಿಗಳಲ್ಲ್ಲಿ ಅಂದು ಬೆಳಿಗ್ಗೆ ೧೧ ಗಂಟೆಗೆ ಮತದಾರರ ಪ್ರತಿಜ್ಞಾ ವಿಧಿ ಭೋಧನೆ ಭೋದಿಸುವುದರ ಜೊತೆಗೆ ಛಾಯಾಚಿತ್ರ ತೆಗೆದು ಪ್ರಚಾರ ಪಡಿಸಬೇಕು. ಸಾಮಾಜಿಕ ಸೇವಾ ಸಂಸ್ಥೆಗಳು, ಯುವ ಸ್ವಯಂ ಸೇವಾ ಸಂಸ್ಥೆಗಳು, ಎನ್.ಎಸ್.ಎಸ್, ಎನ್.ಸಿ.ಸಿ ಸ್ಕೌಟ್ ಮತ್ತು ಗೈಡ್ಸ್. ನೆಹರು ಯುವಕ ಕೇಂದ್ರ ಸೇರಿದಂತೆ ರಾಷ್ಟ್ರೀಯ ಮತದಾರರ ದಿನಾಚರಣೆ ೨೦೨೫ ರ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದರು.
ಕಾರ್ಯಕ್ರಮಗಳನ್ನು ಜಿಲ್ಲಾ ಪಂಚಾಯತ ಸಭಾಂಗಣದ ವೇದಿಕೆ ಆಯೋಜಿಸಬೇಕು, ವೇದಿಕ ಕಾರ್ಯಕ್ರಮ ಮುಂಚೆ ಜಾಥಾ ಕಾರ್ಯಕ್ರಮ ಏರ್ಪಡಿಸುವುದು, ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಚುನಾವಣೆಯ ಮತದಾನ ಕುರಿತು ಪ್ರಬಂಧ ಸ್ಪರ್ಧೇ ಏರ್ಪಡಿಸಬೇಕು, ಸ್ಪರ್ಧೇಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಪತ್ರಿಕೆ, ರೇಡಿಯೋ, ಟಿ.ವಿ ಸಾಮಾಜಿಕ ಜಾಲತಾಣ ಹಾಗೂ ಪರಸ್ಪರ ಸಂವಹನ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳುವುದು ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿ ವಿತರಿಸುವುದು ಅಂಚೆ ಮತಪತ್ರ, ಮತದಾರರಿಗೆ ಮತ್ತು ಮತಗಟ್ಟೆಗಳಲ್ಲಿ ಒದಗಿಸಿರುವ ಮೂಲಭೂತ ಸೌಲಭ್ಯಗಳು, ಇ.ವಿ.ಎಮ್, ವಿವಿ ಪ್ಯಾಟ್, ಓಟರ್ ಹೆಲ್ಪಲೈನ್ ನೈತಿಕ ಮತದಾನ ಇತ್ಯಾದಿಗಳ ಕುರಿತು ಜಾಗೃತಿ ಚಿತ್ರಗಳನ್ನು ಪ್ರದರ್ಶಿಸುವುದು ಇದರ ಜೊತೆಗೆ ಸ್ವೀಪ್ ಕಾರ್ಯಕ್ರಮಗಳು ಕೂಡ ಒಂದು ಭಾಗವಾಗಿವೆ ಎಂದು ಅವರು ಹೇಳಿದರು.
ಜ.೩೦ ರಂದು ಹುತಾತ್ಮ ದಿನಾಚರಣೆ : ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣತೆತ್ತು ಹುತಾತ್ಮರಾದ ಮಹಣೀಯರ ಸ್ಮರಣಾರ್ಥ ಜನವರಿ ೩೦ ರಂದು ಜಿಲ್ಲಾಡಳಿತ ವತಿಯಿಂದ ಪರ್ವಾಹ್ನ ೧೧-೦೨ಕ್ಕೆ ನಗರದ ಮೀನಾಕ್ಷೀ ವೃತ್ತದಲ್ಲಿ ಆಚರಿಸಲು ನಿರ್ಧರಿಸಲಾಯಿತು.
ವೇದಿಕೆ ಕಾರ್ಯಕ್ರಮದಲ್ಲಿ ಶಿಷ್ಟಾಚರದಂತೆ ಆಹ್ವಾನ ನೀಡುವುದು, ಭಾರತದ ಸ್ವಾತಂತ್ರಕ್ಕಾಗಿ ಹೋರಾಟಗಾರರ ಪಾತ್ರವನ್ನು ತಿಳಿಸುವಂತಹ ಭಾಷಣ, ಚರ್ಚೆಗಳನ್ನು ಏರ್ಪಡಿಸುವುದು ಹಾಗೂ ಪ್ರಾರ್ಥನೆ ಸರ್ವಧರ್ಮ ಭಜನೆ ಕಾರ್ಯಕ್ರಮ ಆಯೋಜಿಸಲು ಕ್ರಮ ವಹಿಸುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಸೂಚಿಸಲಾಯಿತು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಶಂಕರ ಮಾರಿಹಾಳ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸಂಘಟನೆ ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು.

