ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಬೀದಿ ದೀಪಗಳು ಸುಟ್ಟು ಹೋಗಿ ಹಲವು ದಿನಗಳು ಕಳೆದಿದ್ದರೂ, ಹೊಸ ದೀಪಗಳನ್ನು ಅಳವಡಿಸದ ಪಟ್ಟಣ ಪಂಚಾಯಿತಿ ಸಿಬ್ಬಂದಿಯ ಕಾರ್ಯವೈಖರಿ ಕುರಿತು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಇಂಡಿ ರಸ್ತೆಯ ವಾರ್ಡ ೧೧ ರಲ್ಲಿನ ಕಲ್ಮೇಶ್ವರ ನಗರದಲ್ಲಿ ಕಳೆದ ೧೫ ದಿನಗಳಿಂದ ವಿದ್ಯುತ್ ಬಲ್ಬ್ಗಳು ಸುಟ್ಟು ಹೋಗಿ ಇಡೀ ರಸ್ತೆಗಳು ಕತ್ತಲೆಯಿಂದ ಕೂಡಿವೆ. ಈ ಕುರಿತು ಸ್ಥಳೀಯ ಸಿಬ್ಬಂದಿ ಸಹಿತ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ವಿನಂತಿಸಲಾಗಿದೆ. ಅದಾಗ್ಯೂ ಇವರೆಗೆ ಯಾವುದೇ ಕ್ರಮ ವಹಿಸದ ಹಿನ್ನೆಲೆಯಲ್ಲಿ ಸಾರ್ವನಿಕರು ಕತ್ತಲೆ ಹಾಗೂ ಕಳ್ಳರ ಕುರಿತು ಭಯ ಪಡುವಂತಾಗಿದೆ. ಈ ಬಗ್ಗೆ ವಾರ್ಡಿನ ಪ್ರಭು ಕೋಟಿನ್, ರವಿ ಚಟ್ಟರಕಿ ತಮ್ಮ ಅಸಮಾಧಾನ ವ್ಯಕ್ತಪಡಿಸಿ, ಪಟ್ಟಣದ ಹೊರವಲಯದ ವಿದ್ಯುತ್ ಕಂಬಗಳಿಗೆ ದೀಪ ಅಳವಡಿಸುವುದು ಸುರಕ್ಷತೆಯ ದೃಷ್ಟಿಯಿಂದ ಅತೀ ಅಗತ್ಯವಾಗಿದೆ. ನಿನ್ನೆಯಷ್ಟೇ ವಿಜಯಪುರ ನಗರದಲ್ಲಿ ಕಳ್ಳರು ಮನೆಗೆ ನುಗ್ಗಿ ಹಲ್ಲೆ ಹಾಗೂ ದರೋಡೆ ಮಾಡಿದ ಘಟನೆ ಸಂಭವಿಸಿದೆ. ಈಗ ನಮ್ಮ ಮನೆಗಳು ಸಹ ಪಟ್ಟಣದ ಹೊರವಲಯದಲ್ಲಿವೆ. ಇಲ್ಲಿ ರಾತ್ರಿಯಾಗುತ್ತಿದ್ದಂತೆಯೇ ಯಾರು , ಯಾರು ಬರುತ್ತಾರೋ, ಹೋಗುತ್ತಾರೋ ಗೋತ್ತಾಗುವುದೇ ಇಲ್ಲ. ಒಂದು ವೇಳೆ ಬೀದಿದೀಪಗಳಿದ್ದರೇ ಬರುವವರನ್ನು ಗುರುತಿಸಬಹುದು. ಮೇಲಾಗಿ ಬೆಳಕಿನಲ್ಲಿ ಅಪರಿಚಿತರು ಬರಲು ಭಯಪಡುತ್ತಾರೆ.
ಸ್ಥಳೀಯ ಸಂಬಂಧಿಸಿದ ಸಿಬ್ಬಂದಿ ಬೀದಿ ದೀಪಗಳ ಅಳವಡಿಕೆಗೆ ಕೂಡಲೇ ಕ್ರಮ ವಹಿಸುವುದರ ಮೂಲಕ ಸಾರ್ವಜನಿಕರ ಮನವಿಗೆ ಸ್ಪಂದಿಸಬೇಕು ಎಂದು ವಾರ್ಡಿನ ನಿವಾಸಿಗಳಾದ ಬಂಡೆಪ್ಪಗೌಡ ಬಿರಾದಾರ(ದಿಂಡವಾರ), ರಾಮು ದೇಸಾಯಿ, ಮಹೇಶ ಅಳ್ಳಗಿ, ಶಿವನಗೌಡ ಪಾಟೀಲ, ಸಿದ್ದು ಆನಂದಿ ಸೇರಿದಂತೆ ಹಲವರು ಆಗ್ರಹಿಸಿದ್ದಾರೆ.

