ಉದಯರಶ್ಮಿ ದಿನಪತ್ರಿಕೆ
ಚಡಚಣ: ಚಡಚಣ ಏತ ನೀರಾವರಿ ಯೋಜನೆಯ ಪ್ರಥಮ ಹಂತದಲ್ಲಿ ಚಡಚಣ ಭಾಗದ ವಿವಿದ ಔಟ್ ಲೆಟಗಳ ಮುಖಾಂತರ ಅಧಿಕಾರಿಗಳು ರೈತರ ಜಮೀನುಗಳಿಗೆ ಗುರುವಾರ ನೀರು ಹರಿಸಿದ್ದಾರೆ. ತಮ್ಮ ಜಮೀನುಗಳಲ್ಲಿ ನೀರು ಹರಿಯುತ್ತಿರುವದನ್ನು ಕಂಡು ರೈತರು ಫುಲ್ ಖುಶ್ ಆಗಿದ್ದಾರೆ.
ಚಡಚಣ ಭಾಗಕ್ಕೆ ಯಾವುದೆ ನೀರಾವರಿ ಯೋಜನೆಗಳ ಬಂದರೂ ಅದು ಕಾರ್ಯರೂಪಕ್ಕೆ ಬರುವದಿಲ್ಲ ಎನ್ನವದು ಈ ಭಾಗದ ಜನರ ನಂಬಿಕೆಯಾಗಿತ್ತು. ಚಡಚಣ ಏತ ನೀರಾವರಿ ಯೋಜನೆಯ ವಿಷಯದಲ್ಲಿಯೂ ರೈತರು ಇದೆ ಅಭಿಪ್ರಾಯವನ್ನು ಹೊಂದಿದ್ದರು. ಆದರೆ ಇಂದು ಶಾಸಕ ವಿಠ್ಠಲ ಕಟಕಧೋಂಡ ಖುದ್ದು ರೈತರ ಜಮೀನುಗಳಿಗೆ ತೆರಳಿ ಔಟಲೆಟ್ಗಳ ಮುಖಾಂತರ ನೀರು ಹರಿಯುವದನ್ನು ವೀಕ್ಷಿಸಿ ಸಂತೋಷ ಪಟ್ಟರು.
ಸುಮಾರು ೫೦೦ ಕೋಟಿ ವೆಚ್ಚದ ಚಡಚಣ ಏತ ನೀರಾವರಿ ಕಾಮಗಾರಿ ೨೦೧೩ ರಲ್ಲಿ ಮಂಜೂರಾಗಿತ್ತು. ಆದರೆ ಈ ಯೋಜನೆ ಕುಂಟುತ್ತ ಸಾಗಿ ಸುಮಾರು ೧೨ ವರ್ಷಗಳ ನಂತರ ಇಗ ಪ್ರಾಯೋಗಿಕವಾಗಿ ಕಾರ್ಯ ಪ್ರಾರಂಭಿಸಿರುವದು ರೈತರಿಗೆ ಒಂದು ರೀತಿ ಆನಂದವನ್ನು ಉಂಟುಮಾಡಿದೆ. ಚಡಚಣ ತಾಲೂಕಿನ ೯೨೧೫ ಹೆಕ್ಟೆರ ಪ್ರದೇಶದ ರೈತರ ಜಮೀನುಗಳಿಗೆ ಈ ಯೋಜನೆಯ ಮುಖಾಂತರ ನೀರು ಹರಿಯಲಿದೆ ಎನ್ನುತ್ತಾರೆ ಅಧಿಕಾರಿಗಳು. ಈ ಯೋಜನೆಯ ಅಡಿಯಲ್ಲಿ ಚಡಚಣದ ೨೭೨೦, ಹಾವಿನಾಳದ ೧೫೭೦, ಗೋಡಿಹಾಳದ ೯೧೩, ಹಾಲಹಳ್ಳಿಯ ೧೩೦೧, ಬರಡೋಲದ ೧೯೨೪, ಶಿರಾಡೋಣದ ೪೮೪,, ರೇವತಗಾಂವದ೨೦೮, ಮತ್ತು ನೀವರಗಿಯ ೯೫ ಹೆಕ್ಟೇರ ಪ್ರದೇಶದ ರೈತರ ಜಮೀನುಗಳಿಗೆ ನೀರು ಹರಿಯಲಿದೆ ಎಂದು ಅಧಿಕಾರಿಗಳ ತಿಳಿಸಿದರು.
ಈ ಸಂದರ್ಭದಲ್ಲಿ ಚಡಚಣ ತಹಶೀಲದಾರ ಸಂಜಯ ಇಂಗಳೆ, ಉಕೆಪಿ ಎಇಇ ಸೋನಾವಣೆ ಮತ್ತು ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
“ಇಂದು ನನ್ನ ಜೀವನದ ಅತ್ಯಂತ ಸಂತೋಷದ ದಿನ. ಚಡಚಣ ಭಾಗ ಯಾವಾಗಲು ಬರಗಾಲ ಪೀಡಿತ ಪ್ರದೇಶ ಎಂದು ಹಣೆಪಟ್ಟಿ ಕಟ್ಟಿಕೊಂಡಿದೆ. ಆದರೆ ಇಂದು ರೈತರ ಜಮೀನುಗಳಲ್ಲಿ ನೀರು ಹರಿಯುತ್ತಿರುವದನ್ನು ನೋಡಿ ಮನಸ್ಸಿಗೆ ನೆಮ್ಮದಿಯಾಯಿತು. ಇದು ಈ ಯೋಜನೆಯ ಪ್ರಾಯೋಗಿಕ ಹಂತ. ಅಧಿಕಾರಿಗಳು ನೀರು ಹರಿಯುವಾಗ ಆಗುವ ಸಮಸ್ಯೆಗಳನ್ನು ಇತ್ಯರ್ಥಪಡಿಸಲಿದ್ದಾರೆ. ರೈತರು ಆತಂಕಪಡುವ ಅವಶ್ಯಕತೆ ಇಲ್ಲ. ಈಗ ಹರಿಯುವ ನೀರು ಕೆಲವೆ ರೈತರ ಜಮೀನುಗಳಿಗೆ ಹೋಗುತ್ತಿವೆ ಎಂದು ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ. ಒಂದು ಔಟಲೆಟ್ ಮುಖಾಂತರ ನಾಲ್ಕು ಜಮೀನುಗಳಿಗೆ ನೀರು ಹರಿಯಲಿದೆ. ಯಾವ ಔಟಲೆಟ್ ನಿಂದ ಯಾವ ರೈತರಿಗೆ ನೀರು ಸಿಗಲಿದೆ ಅಧಿಕಾರಿಗಳ ಸ್ವತ ರೈತರ ಜಮೀನುಗಳಿಗೆ ಆಗಮಿಸಿ ಮಾಹಿತಿ ನೀಡಲಿದ್ದಾರೆ. ಆದ್ದರಿಂದ ಯಾವುದೆ ರೈತರು ಆತಂಕ ಪಡದೆ ಕೆಲವು ದಿನ ಕಾಯಬೇಕು.”
– ವಿಠ್ಠಲ ಕಟಕಧೋಂಡ
ಶಾಸಕರು, ನಾಗಠಾಣ
“ಇಂದು ಚಡಚಣ ಏತ ನೀರಾವರಿಯ ನೀರನ್ನು ರೈತರ ಜಮೀನುಗಳಿಗೆ ಪ್ರಾಯೋಗಿಕವಾಗಿ ಹರಿಸಿದ್ದೆವೆ. ಮುಂಬರುವ ದಿನಗಳಲ್ಲಿ ರೈತರಿಂದ ಬರುವ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಲಾಗುವದು. ಈ ಯೋಜನೆಯ ಅಡಿಯಲ್ಲಿ ಈಗಾಗಲೆ ರೈತರ ಜಮೀನುಗಳಲ್ಲಿ ಗುರುತಿಸಲಾಗಿದೆ. ಆ ಜಮೀನುಗಳಿಗೆ ನಿರ್ಧಿಷ್ಟ ಔಟ್ ಲೆಟ್ಗಳ ಮುಖಾಂತರ ನೀರು ಹರಿಸಲಾಗುವದು. ರೈತರು ಆತಂಕ ಪಡಬಾರದು. ಈ ನೀರು ಒಂದು ವಾರ ಹರಿಯುವದರಿಂದ ಕೆಲವೊಂದು ರೈತರಿಗೆ ಸಮಸ್ಯೆ ಆಗಬಹುದು. ರೈತರು ಸಹಕರಿಸಬೇಕು.”
– ಜಿ.ಎ.ನಾಗರಾಳ
ಇಇ ಯುಕೆಪಿ, ರಾಂಪೂರ

