ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಯರಗಲ್ ಕೆಡಿ ಗ್ರಾಮದಲ್ಲಿ ೨ ಸಾವಿರಕ್ಕೂ ಅಧಿಕ ಜನರು ವಾಸಿಸುತ್ತಾರೆ. ಸುತ್ತಲಿನ ಹತ್ತಾರು ಹಳ್ಳಿಯ ಮಕ್ಕಳು ಶಾಲಾ-ಕಾಲೇಜಿಗೆ ಕಲಿಯಲು ಆಗಮಿಸುತ್ತಾರೆ. ಗ್ರಾಮದಿಂದ ನಿತ್ಯ ನೂರಾರು ಕೂಲಿ ಕಾರ್ಮಿಕರು ಬೇರೆಡೆಗೆ ದುಡಿಯಲು ಹೋಗುತ್ತಾರೆ ಎಂದು ರೈತ ಸಂಘ ರಾಜ್ಯ ಕಾರ್ಯದರ್ಶಿ ಪೀರು ಕೆರೂರ ಹೇಳಿದರು.
ಸಿಂದಗಿ ತಾಲೂಕಿನ ಯರಗಲ್ ಕೆ.ಡಿ.ಗ್ರಾಮಸ್ಥರು ಬಸ್ ನಿಲುಗಡೆಗೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ವಿಜಯಪುರ ವಿಭಾಗದ ಬಸ್ಗಳು ಮಾತ್ರ ಗ್ರಾಮದಲ್ಲಿ ನಿಲುಗಡೆಯಾಗುತ್ತಿದ್ದು, ಕಲಬುರಗಿ ವಿಭಾಗದ ಬಸ್ಗಳನ್ನು ನಿಲ್ಲಿಸುತ್ತಿಲ್ಲ. ಈಗಾಗಲೇ ಸಿಂದಗಿ, ವಿಜಯಪುರ, ಲಬುರಗಿ ಸಾರಿಗೆ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿ ಅನೇಕ ದಿನಗಳಾಗಿವೆ. ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದೇ ಇರುವುದರಿಂದ ಪ್ರತಿಭಟನೆ ಅನಿವಾರ್ಯವಾಗಿದೆ. ತಮಗೆ ಒಂದು ವಾರ ಗಂಡುವು ನೀಡುತ್ತೇವೆ. ಅಷ್ಟರಲ್ಲಿ ನಮ್ಮ ಸಮಸ್ಯೆ ಪರಿಹರಿಸದಿದ್ದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಸಾರಿಗೆ ಬಸ್ ನಿಲುಗಡೆಗೆ ಆಗ್ರಹಿಸಿ ಸಿಂದಗಿ ತಾಲೂಕಿನ ಯರಗಲ್ ಕೆ.ಡಿ.ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ ೫೦ರಲ್ಲಿ ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಿ ಘೋಷಣೆ ಕೂಗಿದರು.
ವಿಷಯ ತಿಳಿದ ಬಳಿಕ ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ ನಿಲುಗಡೆ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡುವವರೆಗೆ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ನೂರಾರು ಗ್ರಾಮಸ್ಥರು, ಮಹಿಳೆಯರು ಸಾರಿಗೆ ಇಲಾಖೆ ವಿರುದ್ಧ ಹರಿಹಾಯ್ದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಿಂದಗಿ ಪಿಎಸ್ ಆರೀಫ್ ಮುಶಾಫಿರ್, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿದರು.
ತಮ್ಮ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿ ಶಾಂತತೆ ಕಾಪಾಡಲು ವಿನಂತಿಸಿದರು. ಸಿಪಿಐ ಕೂಡ ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರನ್ನು ನಿಯಂತ್ರಿಸಿದರು.
ಸಿಂದಗಿ ಡಿಪೋ ಮ್ಯಾನೇಜರ್ ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರಿಗೆ ಭರವಸೆ ನೀಡುತ್ತಿದ್ದಂತೆ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಚಂದ್ರಮ ಯಂಕಂಚಿ, ರಾಮಚಂದ್ರ ಸೊನ್ನದ, ಪೀರಪ್ಪ ಯಂಕಂಚಿ, ಪರುವ ಯಂಕಂಚಿ, ವಿಶ್ವಾನಾಥ ಯಂಕಂಚಿ, ರಾಮಚಂದ್ರ ಹುಡೇದ, ಮುತ್ತಣ್ಣ ಯಂಕಂಚಿ, ಸಂಜು ಹೊಸಮನಿ, ಭೀಮಣ್ಣ ಹೊಸಮನಿ, ರಾಜು ಹೊಸಮನಿ, ರೇವಪ್ಪ ಹೊಸಮನಿ, ದುಳಪ್ಪ ಹೊಸಮನಿ ಸೇರಿದಂತೆ ಗ್ರಾಮಸ್ಥರು ಇದ್ದರು.
“ತಂತ್ರಜ್ಞಾನದ ಮೂಲಕ ನಿಮ್ಮ ಗ್ರಾಮದ ಹೆಸರನ್ನು ಕೂಡಲೇ ಸಂಬಂಧಿಸಿದ ಡಿಪೋಗಳಲ್ಲಿ ಸೇರಿಸಿ ನಿಲುಗಡೆಗೆ ವ್ಯವಸ್ಥೆ ಕೈಗೊಳ್ಳಲಾಗುವುದು. ಈ ಕುರಿತು ಜಿಲ್ಲೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಒಂದು ವಾರದಲ್ಲಿ ಗ್ರಾಮಸ್ಥರ ಸಮಸ್ಯೆ ಬಗೆಹರಿಸಲಾಗುವುದು.”
– ರೇವಣಸಿದ್ದಪ್ಪ ಕೈನೂರ
ಡಿಪೋ ಮ್ಯಾನೇಜರ್

