ವಿಜಯಪುರದಲ್ಲಿ ಸಿದ್ದೇಶ್ವರ ಜಾನುವಾರು ಜಾತ್ರೆ | ಬಹುಮಾನ ವಿತರಣಾ ಸಮಾರಂಭ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಗೋ ಸಂಪತ್ತು ಮುಗಿದರೆ, ಅಲ್ಲಿಗೆ ಒಕ್ಕಲುತನ ಮುಗಿಯುತ್ತೆ. ಈ ಕಳವಳಕಾರಿ ಸಂಗತಿ ರೈತರಿಗೆ ಅರ್ಥವಾಗುತ್ತಿಲ್ಲ. ಇದರಲ್ಲಿ ರೈತರದಷ್ಟೆ ತಪ್ಪಿಲ್ಲ, ಸರ್ಕಾರದ ನೀತಿಗಳು ತಪ್ಪಿವೆ. ತೊಗರಿಗೆ ನೀಡಿದಂತೆ ಜೋಳಕ್ಕೆ ಹೆಚ್ಚಿನ ಬೆಂಬಲ ಬೆಲೆ ನೀಡಿದರೆ, ಜೋಳದ ಬೆಳೆ ಪ್ರಮಾಣ ಹೆಚ್ಚಾಗಿ, ಕಣಕಿ, ಹೊಟ್ಟು ಸಿಗುತ್ತದೆ. ಆಗ ದನಕರುಗಳ ನಿರ್ವಹಣೆಗೆ ನೆರವಾಗಲಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ತೊರವಿ ಗ್ರಾಮದ ಹೊರವಲಯದಲ್ಲಿ ಶ್ರೀ ಸಿದ್ದೇಶ್ವರ ಸಂಕ್ರಮಣ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ಶ್ರೀ ಸಿದ್ದೇಶ್ವರ ಜಾನುವಾರ ಜಾತ್ರೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಯಾಂತ್ರಿಕೃತ ಜಗತ್ತು, ದನಗಳ ನಿರ್ವಹಣೆ ಕಷ್ಟದಿಂದ ಒಳ್ಳೆಯ ಗೋವುಗಳು, ಎತ್ತುಗಳು ಕಟುಕರ ಪಾಲಾಗುತ್ತಿವೆ. ಈ ಹಿಂದೆ ಸಿದ್ದೇಶ್ವರ ಜಾನುವಾರ ಜಾತ್ರೆ ಬಹುದೊಡ್ಡ ಜಾತ್ರೆ ಆಗಿತ್ತು. ಮಹಾರಾಷ್ಟ್ರ, ಆಂದ್ರ ರಾಜ್ಯಗಳಿಂದಲೂ ಖರೀದಿಗೆ ಬರುತ್ತಿದ್ದರು. 110 ಎಕರೆ ವಿಶಾಲ ಪ್ರದೇಶದಲ್ಲಿ ಎಲ್ಲಿ ನೋಡಿದರೂ ಜಾನುವಾರುಗಳು ಕಾಣುತ್ತಿದ್ದವು. ಈಗಿನ ದನದ ಜಾತ್ರೆಯ ಪರಿಸ್ಥಿತಿ ನೊಡಿದರೆ, ಮುಂದಿನ ಐದಾರು ವರ್ಷಗಳಲ್ಲಿ ದನದ ಜಾತ್ರೆಗಳೇ ದೇಶದಲ್ಲಿ ಬಂದಾಗುವ ಆತಂಕವಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮನೆ ಮನೆಯಲ್ಲೂ ಗೋವಿನ ಹಾಲು ಸಿಗುತ್ತಿತ್ತು. ಈಗ ಹಳ್ಳಿಗಳಲ್ಲಿಯೂ ಪಾಕಿಟ್ ಹಾಲು ಬಂದಿವೆ. ಗೋ ಸಂಪತ್ತು ಉಳಿಸದಿದ್ದರೆ ಮುಂದೆ ದೊಡ್ಡ ಸಂಕಷ್ಟ ಎದುರಿಸಬೇಕಾಗುತ್ತದೆ. ಪ್ರತಿಯೊಬ್ಬರ ಮನೆಗಳಲ್ಲಿ ಕನಿಷ್ಟ ಒಂದು ಗೋವಾನ್ನದರೂ ಸಾಕಬೇಕು. ಜಾನುವಾರುಗಳ ನಿರ್ವಹಣೆ ಸಾಧ್ಯವಾಗದವರು ಕಟುಕರಿಗೆ ನೀಡಬೇಡಿ, ನಮ್ಮ ಗೋಶಾಲೆಗೆ ನೀಡಿದರೆ ನಾವು ಸಾಕುತ್ತೇವೆ. ನಮ್ಮಲ್ಲಿ ಒಳ್ಳೆಯ ಎತ್ತುಗಳಿವೆ ಕೃಷಿ ಚಟುವಟಿಕೆಗಳಿಗೆ ಬೇಕೆನ್ನುವರು ಉಚಿತವಾಗಿ ತೆಗೆದುಕೊಂಡು ಹೋಗಬಹುದು. ಸಾಕು ಎನಿಸಿದಾಗ ಮತ್ತೆ ನಮಗೆ ಕೊಡಬೇಕು ಎಂಬ ಷರತ್ತು ಮಾತ್ರ ರೈತರಿಂದ ಪಡೆಯುತ್ತೇವೆ ಎಂದರು.
ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಕೆ ಹೆಚ್ಚಿದಂತೆ ವಿಷಕಾರಿ ಆಹಾರ ಸೇವನೆಯಿಂದ ಕ್ಯಾನ್ಸರ್ ಆಸ್ಪತ್ರೆಗಳ ಸಂಖ್ಯೆಯು ಹೆಚ್ಚುತ್ತಿದ್ದು, ಪ್ರತಿ ಜಿಲ್ಲೆಗೊಂದು ಮಾಡುವಂತಹ ದುಸ್ಥಿತಿ ಬಂದಿದೆ. ಇದರಿಂದ ಮಕ್ತವಾಗಲು ಸಾವಯವ ಕೃಷಿಗೆ ಉತ್ತೇಜನದ ಅಗತ್ಯವಿದೆ. ಅದಕ್ಕೆ ಗೋ ಸಾಕಾಣಿಕೆ ಅತ್ಯಗತ್ಯ. ಸಾವಯವ ಮಾಡುವವರು ನಮ್ಮ ಗೋಶಾಲೆಯಲ್ಲೇ ಮಜ್ಜಿಗೆ, ಗೋಮೂತ್ರ ಕೊಂಡೊಯ್ಯುತ್ತಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಅತ್ಯುತ್ತಮ ಜಾನುವಾರುಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳು, ಸಿಬ್ಬಂದಿಗಳು, ರೈತರು ಉಪಸ್ಥಿತರಿದ್ದರು.

