ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ನಡಹಳ್ಳಿ ವಿರುದ್ಧ ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ವಾಗ್ದಾಳಿ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಸೆಗಣಿ ತುಂಬಾ ಪವಿತ್ರ, ಅಮೃತ ಅಂತಾ ಹೇಳಿರುವ ಮಾಜಿ ಶಾಸಕ ನಡಹಳ್ಳಿ ಅವರು ಅದೇ ಅಮೃತವನ್ನು ಪ್ರತಿದಿನ ತಮ್ಮ ಮುಖಕ್ಕೆ ಬಳೆದುಕೊಂಡು ತಿರುಗಾಡಲಿ ಎಂದು ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಮತ್ತು ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಹರಿಹಾಯ್ದರು.
ಚಾಮರಾಜ ಪೇಟೆಯಲ್ಲಿ ನಡೆದ ಹಸುವಿನ ಕೆಚ್ಚಲು ಕತ್ತರಿಸಿದ ಪ್ರಕರಣದಲ್ಲಿ ಯಾವುದೇ ಧ್ವನಿ ಎತ್ತಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಮಂಗಳವಾರ ತಮ್ಮ ನಿವಾಸದ ಕಂಪೌಂಡ್ ಗೆ ಸೆಗಣಿ ಬಳೆದ ಹಿನ್ನೆಲೆ ಅಂದೇ ಸಂಜೆ ಅದೇ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಯಾವುದನ್ನು ಹೇಗೆ ಬಳಕೆ ಮಾಡಿದರೆ ಅಮೃತವಾಗುತ್ತದೆ ಎಂದು ನನಗೂ ಗೊತ್ತಿದೆ. ನಾನೂ ಬೆಳಿಗ್ಗ ಎದ್ದು ಸ್ನಾನ ಮಾಡಿ, ವಿಭೂತಿ ಕುಂಕುಮ ಕಚ್ಚಿಕೊಂಡು ಎಲ್ಲ ಶರಣರನ್ನು, ಗೋ ಮಾತೆಯನ್ನು ನೆನೆದೇ ಹೊರಗಡೆ ಬರೋದು. ಎಲ್ಲೋ ನಡೆದ ಪ್ರಕರಣಕ್ಕೆ ಶಾಸಕರ ನಿವಾಸದ ಎದುರು ಗಲಾಟೆ ಮಾಡುವದೆಂದರೆ ಇದು ಯಾವ ನ್ಯಾಯ? ಪ್ರತಿಭಟನೆ ಮಾಡುವದಾದರೆ, ಮನವಿ ಕೊಡುವದಾದರೆ ಮೊದಲು ನೊಟೀಸು ಕೊಡಬೇಕಿತ್ತು. ಇದಾವುದನ್ನೂ ಮಾಡದೇ ಏಕಾಏಕಿ ಶಾಸಕ ಮನೆ ಮುಂದೆ ಬಂದು ಗಲಾಟೆ ಮಾಡಿದರೆ ಹೇಗೆ? ಪ್ರತಿಭಟನೆ ಮಾಡುವವರು ಕುಡಿದು ಬರುತ್ತಾರಾ? ಬಂದವರಾರು ಬಿಜೆಪಿ ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿರುವವರಲ್ಲಾ. ಇವರೆಲ್ಲ ನಡಹಳ್ಳಿ ಅವರ ಚೇಲಾಗಳು. ಉದ್ದೇಶ ಪೂರ್ವಕವಾಗಿ ಪ್ರಚಾರ ಗಿಟ್ಟಿಸಲು ನಮ್ಮ ಮನೆ ಮುಂದೆ ಗಲಾಟೆ ಮಾಡಲು, ಗುಂಡಾಗಿರಿ ಮಾಡಲು ಹಚ್ಚಿದ್ದಾರೆ. ಇಂಥದ್ದೆಲ್ಲ ಮಾಡಿದರೆ ಅಧಿಕಾರಕ್ಕೆ ಬರುವ ಹಗಲುಗನಸು ಕಾಣುತ್ತಿದ್ದೀರಿ. ನಿಮ್ಮ ಹಿರಿಯ ನಾಯಕರು ಮೆಚ್ಚುತ್ತಾರೆ ಎಂದು ಅಂದುಕೊಂಡಿದ್ದರೆ ಅದರಿಂದ ಹೊರಗಡೆ ಬನ್ನಿ. ನಮ್ಮ ತಾಲೂಕಿನಲ್ಲಿ ಒಂದು ಸಂಸ್ಕೃತಿ ಇದೆ. ಹಿಂದಿನಿಂದ ಈ ವರೆಗೆ ನಮ್ಮಲ್ಲಿ ಇಂತಹ ಅಸಹ್ಯದ ರಾಜಕಾರಣ ಯಾರೂ ಮಾಡಿಲ್ಲ. ನೀವು ಮಾಡುತ್ತಿದ್ದೀರಿ. ಇದಕ್ಕೆಲ್ಲ ಜನ ನಿಮಗೆ ಪಾಠ ಕಲಿಸುತ್ತಾರೆ ಎಂದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಪುರಸಭೆ ಸದಸ್ಯ ಮಹೆಬೂಬ ಗೊಳಸಂಗಿ, ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುದೇವ ಕಲಬುರ್ಗಿ, ಪ್ರಮುಖರಾದ ಚನ್ನಪ್ಪ ವಿಜಯಕರ, ಬಾಪುರಾವ್ ದೇಸಾಯಿ, ವಾಯ್.ಎಚ್.ವಿಜಯಕರ, ಸಂಗನಗೌಡ ಬಿರಾದಾರ(ಜಿಟಿಸಿ), ಸತೀಶ ಓಸ್ವಾಲ್, ಯಲ್ಲಪ್ಪ ನಾಯಕಮಕ್ಕಳ, ಸುರೇಶಗೌಡ ಪಾಟೀಲ, ಸಿಕಂದರ ಜಾನ್ವೇಕರ, ಯುಸೂಫ ನಾಯ್ಕೋಡಿ ಸೇರಿದಂತೆ ಮತ್ತೀತರರು ಇದ್ದರು.

