ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣದ ಕಡೆಗೆ ಪಥ ಬದಲಿಸುತ್ತಾನೆ. ಆದ್ದರಿಂದ, ಮಕರ ಸಂಕ್ರಾಂತಿಯನ್ನು ಉತ್ತರಾಯಣ ಸಂಕ್ರಮಣ ಎಂದೂ ಕರೆಯುತ್ತೇವೆ. ಮಕರ ಸಂಕ್ರಾಂತಿಯಂದು ದೇಗುಲಗಳಲ್ಲಿ ವಿಶೇಷ ಪೂಜೆ ನಡೆಸಲಾಗುತ್ತದೆ. ಸಂಕ್ರಾಂತಿ ರೈತವರ್ಗದ ಜನರ ಹಬ್ಬ. ತಾವು ಬೆಳೆದ ದವಸ, ಧಾನ್ಯಗಳನ್ನು ಪೂಜಿಸುವ ಹಬ್ಬ. ಸಂಕ್ರಾಂತಿ, ಹೊಸ ಬೆಳೆಗಳು ಬೆಳೆದು ರೈತಾಪಿ ವರ್ಗಕ್ಕೆ ಸಿಗುವ ಕಾಲವಾಗಿದೆ ಎಂದು ಶ್ರೀಪದ್ಮರಾಜ ಮಹಿಳಾ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ಉಪನ್ಯಾಸಕ ಗಿರೀಶ ಎಸ್.ಕುಲಕರ್ಣಿ ಹೇಳಿದರು.
ಸಿಂದಗಿ ಪಟ್ಟಣದ ಸಾರಂಗಮಠದ ಆವರಣದಲ್ಲಿ ಪೂಜ್ಯ ಶ್ರೀಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ ಸಾರಂಗಮಠ-ಗಚ್ಚಿನಮಠದ ವತಿಯಿಂದ ಹಮ್ಮಿಕೊಂಡ ೩೩೮ನೆಯ ಸದ್ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಮಕರ ಸಂಕ್ರಾಂತಿ ಹಬ್ಬದ ಮಹತ್ವವನ್ನು ಕುರಿತಾಗಿ ಮಾತನಾಡಿದ ಅವರು, ಮಕರ ಸಂಕ್ರಾಂತಿಯ ದಿನ ಪವಿತ್ರ ಸ್ನಾನಕ್ಕೆ ಬಹಳ ಮಹತ್ವ. ಅಂದು ಸಾಕಷ್ಟು ಜನ ಪವಿತ್ರ ನದಿಗಳಲ್ಲಿ ಸ್ನಾನ ಮಾಡಿ ಹಬ್ಬವನ್ನು ಆಚರಿಸುತ್ತಾರೆ. ಇದು ಶುದ್ಧೀಕರಣದ ಸಂಕೇತ. ಬರೀ ದೇಹವಷ್ಟೇ ಅಲ್ಲ, ಮನಸ್ಸನ್ನೂ ಶುದ್ಧೀಕರಿಸುವ ಸಂಕೇತವಾಗಿ ಪವಿತ್ರ ನದಿ ಸ್ನಾನಕ್ಕೆ ಮಹತ್ವವಿದೆ. ಮಕರ ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಧಾರ್ಮಿಕ, ಸಾಂಸ್ಕೃತಿಕ ಹಬ್ಬ. ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಎಂದೂ, ತಮಿಳುನಾಡಿನಲ್ಲಿ ಪೊಂಗಲ್ ಎಂದೂ, ಆಂಧ್ರದಲ್ಲಿ ಸಂಕ್ರಮಣ ಕಾಲಾಲು ಎಂದೂ ಕರೆಯಲ್ಪಡುವ ಈ ಹಬ್ಬಕ್ಕೆ ವಿಶೇಷ ಅರ್ಥ, ಸಂಭ್ರಮ ಇದೆ. ಆಚರಣೆಯಲ್ಲಿ ಹಲವು ಪದ್ಧತಿಗಳಿವೆ ಎಂದರು.
ಈ ವೇಳೆ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ ಸಾರಂಗಮಠದ ಪೀಠಾಧಿಪತಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು. ಈ ವೇಳೆ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಬಿ.ಎಸ್.ಡಬ್ಲೂö್ಯ ಪರೀಕ್ಷೆಯಲ್ಲಿ ರ್ಯಾಂಕ ಬಂದ ಶ್ರೀಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದ ೩ನೆಯ ರ್ಯಾಂಕ ಪಡೆದ ಐಶ್ವರ್ಯ ತಮದೊಡ್ಡಿ, ೪ನೆಯ ರ್ಯಾಂಕ ಪಡೆದ ವಿದ್ಯಾಶ್ರೀ ಪಡಶೆಟ್ಟಿ ಅವರನ್ನು ಶ್ರೀಮಠದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ದಾಸೋಹ ಸೇವೆಯನ್ನು ಲಿಂ.ಹೊನ್ನಪ್ಪಗೌಡ ಬಿರಾದಾರ ಅವರ ಸ್ಮರಣಾರ್ಥ ದಯಾನಂದಗೌಡ ಬಿರಾದಾರ, ಲಿಂ.ಬಸಪ್ಪ ಲೋಣಿ ಅವರ ಸ್ಮರಣಾರ್ಥ ಬಂಡೆಪ್ಪ ಲೋಣಿ, ಲಿಂ.ಶಂಭುಲಿಂಗಯ್ಯ ಮಠ ಹಾಗೂ ಧರ್ಮಪತ್ನಿ ವಿಮಲಾ ಮಠ ಅವರ ಸ್ಮರಣಾರ್ಥ ಸುಧಾರಾಣಿ ಮಠ ಅವರು ನೆರವೇರಿಸಿದರು.
ಕಾರ್ಯಕ್ರದಲ್ಲಿ ಶಕುಂತಲಾ ಹಿರೇಮಠ, ಚನ್ನಪ್ಪ ಕತ್ತಿ, ಮುಕ್ತಾಯಕ್ಕ ಕತ್ತಿ, ಹೇಮಾ ಹಿರೇಮಠ, ಮಂಗಳಾ ಈಳಗೇರ, ಉಮೇಶ ಪೂಜೇರಿ, ಜಿ.ಎ.ನಂದಿಮಠ, ಮಹಾಂತೇಶ ನೂಲಾನವರ, ಬಸಮ್ಮ ಧರಿ, ವಿರೇಶ ಜೋಗುರ, ಚನ್ನು ಕತ್ತಿ ಸೇರಿದಂತೆ ಶ್ರೀಮಠ ಭಕ್ತರು ಉಪಸ್ಥಿತರಿದ್ದರು.

