ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ರೈತರನ್ನು ಅಕ್ರಮ ಬಂಧನದಲ್ಲಿರಿಸಿರುವ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಧಿಕ್ಕಾರ, ಗೋವುಗಳ ಕೆಚ್ಚಲನ್ನು ಕೊಯ್ದ ರಾಕ್ಷರನ್ನು ರಕ್ಷಿಸುತ್ತಿರುವ ಕಾಂಗ್ರೇಸ್ ಸರ್ಕಾರಕ್ಕೆ ಧಿಕ್ಕಾರ ಧಿಕ್ಕಾರ, ಈ ಆಕ್ರೋಷದ ಪ್ರತಿಧ್ವನಿ ಕೇಳಿಸಿದ್ದು ಪಟ್ಟಣದ ಪೊಲೀಸ್ ಠಾಣೆಯಲ್ಲಿ.
ಚಾಮರಾಜಪೇಟೆಯಲ್ಲಿ ನಡೆದಿದೆ ಎನ್ನಲಾದ ಹಸುವಿನ ಕೆಚ್ಚಲು ಕೊಯ್ದ ಪ್ರಕರಣದ ಕುರಿತು ಸ್ಥಳೀಯ ಶಾಸಕ ಸಿ.ಎಸ್.ನಾಡಗೌಡರು ಯಾವುದೇ ಧ್ವನಿ ಎತ್ತಿಲ್ಲ ಎಂದು ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಅವರ ನಿವಾಸದ ಎದುರು ಸೆಗಣಿ ಬಳೆದು ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ಆಕ್ರೋಷ ಹೊರಹಾಕಿದ್ದಕ್ಕೆ ಪೊಲೀಸರು ಕೆಲ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಕೂಡಲೇ ಅವನನ್ನು ಬಿಡುಗಡೆಗೊಳಿಸಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಮತ್ತು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಪಟ್ಟಣದ ಪೊಲೀಸ್ ಠಾಣೆಗೆ ತೆರಳಿ ತಮ್ಮ ಕಾರ್ಯಕರ್ತರನ್ನು ಬಿಡುಗಡೆಗೊಳಿಸುವಂತೆ ಹೋರಾಟ ನಡೆಸಿದರು.
ಈ ವೇಳೆ ಪಿಎಸ್ಐ ಸಂಜಯ ತಿಪರೆಡ್ಡಿ ಮತ್ತು ಮಾಜಿ ಶಾಸಕ ನಡಹಳ್ಳಿ ಅವರ ಮಧ್ಯೆ ಕೆಲ ಹೊತ್ತು ವಾಹ್ವಾದ ನಡೆಯಿತು. ಕಾರ್ಯಕರ್ತರನ್ನು ಬಿಡೋವರೆಗೂ ಇಲ್ಲಿಂದ ಕದಲೋದಿಲ್ಲ ಎಂದು ಪಟ್ಟು ಹಿಡಿದ ಮಾಜಿ ಶಾಸಕ ನಡಹಳ್ಳಿ ಹೋರಾಟ ಮುಂದುವರೆಸಿದ್ದರು.
ಘಟನೆಯ ಮಾಹಿತಿ ತಿಳಿದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ ಭೇಟಿ ನೀಡಿ ಮನವೊಲಿಸಲು ಪ್ರಯತ್ನಿಸಿದರೂ ತಮ್ಮ ಪಟ್ಟು ಬಿಡಲಿಲ್ಲ. ಪ್ರಕರಣದ ಸಂಪೂರ್ಣ ಮಾಹಿತಿ ಪಡೆದೇ ಅಲ್ಲಿಂದ ತೆರಳಿದರು.

