ಜನೇವರಿ ೦೩ ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಇವರ ಜಯಂತಿ. ಅವರ ಸ್ಮರಣೆಗಾಗಿ ಈ ವಿಶೇಷ ಲೇಖನ
ಲೇಖನ
– ಕಬೂಲ್ ಕೊಕಟನೂರ
ಶಿಕ್ಷಕರು, ದೇವರಹಿಪ್ಪರಗಿ, ವಿಜಯಪುರ ಜಿಲ್ಲೆ.
ಮೊ: ೯೯೭೨೧೧೫೫೦೨
ಉದಯರಶ್ಮಿ ದಿನಪತ್ರಿಕೆ
“ನಹೀಜ್ಞಾನೇನ ಸದೃಶಂ” ಎನ್ನುವಂತೆ ಜ್ಞಾನಕ್ಕಿಂತ ಮಿಗಿಲಾದುದು ಈ ಜಗತ್ತಿನಲ್ಲಿ ಬೇರೊಂದಿಲ್ಲ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ವಾಣಿಯಂತೆ ಮಹಿಳೆ ಅಬಲೆಯಲ್ಲ ಸಬಲೆಯಾಗಿದ್ದು, ಪರುಷ ಪ್ರದಾನ ಸಮಾಜದಲ್ಲಿ ಸರಿಸಮಾನವಾಗಿ ಬೆಳೆಯಲು ಶಿಕ್ಷಣದಿಂದಲೇ ಮಾತ್ರ ಸಾಧ್ಯವೆಂದು ಸಾರಿದ ಸಾವಿತ್ರಿಬಾಯಿ ಫುಲೆ ಭಾರತದ ಮೊದಲ ಶಿಕ್ಷಕಿಯಾಗಿದ್ದಾರೆ. ಇಂಡಿಯಾಸ ಫಸ್ಟ್ ಲೆಡಿಸ್ ಟೀಚರ್ ಎಂದು ಬ್ರೀಟಿಷರಿಂದ ಬಿರುದು ಪಡೆದು ಸ್ತ್ರೀ ಶಿಕ್ಷಣಕ್ಕಾಗಿ ಇಡೀ ಜೀವಮಾನ ಸವೆಸಿದವರಲ್ಲಿ ಪ್ರಥಮರಾಗಿದ್ದು, ಜನೇವರಿ ೦೩ ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಇವರ ಜಯಂತಿಯೆಂದು ನಾವೆಲ್ಲ ಸ್ಮರಣೆ ಮಾಡುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ.
ಸಾವಿತ್ರಿಬಾಯಿ ಪುಲೆಯವರ ಬಾಲ್ಯ ಜೀವನ

ಮಹಿಳಾ ಲೋಕದ ಮಾಣಿಕ್ಯವೆಂದೆನಿಸಿಕೊಂಡ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಹತ್ತೊಂಬತ್ತನೇ ಶತಮಾನದ ಭಾರತದ ಪ್ರಸಿದ್ಧ ಸಮಾಜ ಸುಧಾರಕಿ, ಕವಿ ಮತ್ತು ಶಿಕ್ಷಣತಜ್ಞರಾಗಿದ್ದರು. ಮಹಿಳಾ ಶಿಕ್ಷಣ, ಲಿಂಗ ಮತ್ತು ಜಾತಿ ಸಮಸ್ಯೆಗಳ ವಿರುದ್ಧ ಹೋರಾಡುವ ಅಪಾರ ಕೊಡುಗೆಗಳಿಗೆ ಹೆಸರುವಾಸಿಯಾಗಿದ್ದರು. ಪುರುಷ ಸಮಾಜದಲ್ಲಿ ಮೆಟ್ಟಿ ನಿಂತು ಮಹಿಳಾ ಶಿಕ್ಷಣಕ್ಕಾಗಿ ಹೋರಾಡಿದವರಲ್ಲಿ ಮೊದಲಿಗರಾಗಿದ್ದು, ಭಾರತೀಯ ಸ್ತ್ರೀವಾದದ ತಾಯಿ ಎಂದು ಪರಿಗಣಿಸಲಾಗುತ್ತದೆ. ಮಹಿಳಾ ಶಿಕ್ಷಣ ಮತ್ತು ವಿಮೋಚನೆಗೆ ಅವರ ಕೊಡುಗೆಗಳು ಶ್ಲಾಘನೀಯ ಮತ್ತು ಇಂದಿಗೂ ಸ್ತ್ರೀಕುಲಕ್ಕೆ ಸ್ಫೂರ್ತಿಯಾಗಿದೆ. ೧೮೩೧ ಜನೇವರಿ ೩, ರಂದು ಮಹಾರಾಷ್ಟçದ ಸಾತಾರ ಜಿಲ್ಲೆಯಲ್ಲಿ ಜನಿಸಿದ ಸಾವಿತ್ರಿಬಾಯಿ ಪುಲೆ, ತಮ್ಮ ಹತ್ತನೇ ವಯಸ್ಸಿನಲ್ಲಿ ೧೩ ವರ್ಷದ ಜ್ಯೋತಿರಾವ್ ಫುಲೆಯವರನ್ನು ವಿವಾಹವಾದರು. ತಮ್ಮ ಮನೆಯಲ್ಲಿಯೇ ಜ್ಯೋತಿರಾವ್ ತಮ್ಮ ಪತ್ನಿಗೆ ಉತ್ಕೃಷ್ಟ ಶಿಕ್ಷಣ ನೀಡಿದರು. ಅವರಿಗೆ ಮನೆಯೇ ಮೊದಲ ಪಾಠಶಾಲೆ, ಪತಿ ಜ್ಯೋತಿಬಾ ಅವರೇ ಗುರುಗಳು. ೧೮೪೭ರಲ್ಲಿ ಸಾವಿತ್ರಿಬಾಯಿ ಶ್ರೀಮತಿ ಮಿಚಲ್ ಅವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕಿಯ ತರಬೇತಿ ಪಡೆದರು. ಆಗ ಅವರಿಗೆ ೧೭ ವರ್ಷ. ಹೀಗಾಗಿ ಮಹಾರಾಷ್ಟ್ರದಲ್ಲಿ ತರಬೇತಿ ಆದ ಮೊದಲ ಶಿಕ್ಷಕಿಯಾದರು.
ಸಂಕಷ್ಟದ ಮದ್ಯ ಶಾಲೆ ತೆರೆದ ಸಾವಿತ್ರಿಬಾಯಿ ಪುಲೆ
ಹಿಂದಿನ ಕಾಲದಲ್ಲಿ ಸ್ರ್ರೀಯೊಬ್ಬಳು ಶಿಕ್ಷಕಿಯಾಗುವುದು ಧರ್ಮಕ್ಕೂ, ಸಮಾಜಕ್ಕೂ ದ್ರೋಹ ಬಗೆದಂತೆ ಎನ್ನುವ ಸಮಯದಲ್ಲಿ ಸಾವಿತ್ರಿಬಾಯಿ ಶ್ರೀ ಭಿಡೆಯವರ ಮನೆಯಲ್ಲಿ ಆರಂಭಗೊಂಡ ಕನ್ಯಾಶಾಲೆಯ ಪ್ರಧಾನ ಶಿಕ್ಷಕಿಯಾಗಿ ನೇಮಕಗೊಂಡರು. ಕಷ್ಟ ನಷ್ಟಗಳ ಮದ್ಯ ಬೋಧನೆ ಪ್ರಾರಂಭ ಮಾಡಿದರು. ಸ್ತ್ರೀವಿರೋಧಿ ಸಮಾಜ ಸಾವಿತ್ರಿಬಾಯಿ ಪುಲೆಯವರ ಕೆಲಸ ಕಂಡು ಗಹಗಹಿಸಿ ನಗಲು ಪ್ರಾರಂಭಿಸಿದರು. ಅಪಹಾಸ್ಯ ಮಾಡಿದರು. ಅವರನ್ನು ಪಾಠಶಾಲೆಗೆ ಹೋರಟಾಗ ಕೆಲವರು ಕೇಕೇ ಹಾಕಿ ನಗುತ್ತಿದ್ದರು, ಅವರ ಮೇಲೆ ಕೆಸರು, ಸಗಣಿ ಎರಚಿ, ಕಲ್ಲನ್ನು ತೂರುತ್ತಿದ್ದರು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಎದೆಗುಂದೆ ಸಾವಿತ್ರಿಬಾಯಿಯವರು ಮುನ್ನಡೆದರು. ಯಶಸ್ವಿಯೂ ಆದರು. ಕುಹಕ ಸಮಾಜಕ್ಕೆ ತಿರುಗಿ ಬೀಳು ಗೋಜಿಗೆ ಹೋಗದೆ ತನ್ನ ಕೆಲಸದಲ್ಲಿ ತಲ್ಲಿನರಾದರು. ಪುಲೆ ದಂಪತಿಗಳು ಸೇರಿ ೧೮೪೮ ರಿಂದ ೧೮೫೨ರ ಅವಧಿಯಲ್ಲಿ ೧೮ ಶಾಲೆಗಳನ್ನು ತೆರೆದರು. ಈ ಪಾಠಶಾಲೆಗಳ ಆಡಳಿತದ ಜವಾಬ್ದಾರಿಯನ್ನು ಸಾವಿತ್ರಿಬಾಯಿ ನಿರ್ವಹಿಸಬೇಕಾಗಿತ್ತು. ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯಿನಿ ಮುಂತಾದ ಕೆಲಸಗಳನ್ನು ಇವರು ಸಮರ್ಪಕವಾಗಿ ನಿಭಾಯಿಸುವುದರ ಮೂಲಕ ಜ್ಯೋತಿಬಾ ಫುಲೆ ಅವರಿಗೆ ನೆರವಾದರು.
ಭಾರತದ ಮೊದಲ ಅಕ್ಷರದ ಅವ್ವ ಸಾವಿತ್ರಿಬಾಯಿ ಪುಲೆ
ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆ ಮುಂದೆ ಬರಲು ಸಾವಿತ್ರಿಬಾಯಿ ಪುಲೆ ಮಾದರಿಯಾಗಿದ್ದರು. ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ವಿಶೇಷ ಪ್ರಯತ್ನ ಮಾಡುತ್ತ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದರು. ಸಮಾಜದ ಅನಿಷ್ಠ ಪದ್ದತಿಗಳಾದ ಬಾಲ್ಯ ವಿವಾಹ, ಸತಿ ಸಹಗಮನ ಪದ್ದತಿ, ಕೇಶ ಮುಂಡನೆ ವಿರುದ್ದ ಹೋರಾಟ ಮಾಡಿ, ಮಹಿಳೆಯರಿಗೋಸ್ಕರ ಹಗಲಿರುಳು ಶ್ರಮಿಸಿದವರಾಗಿದ್ದಾರೆ. ಹತ್ತಾರು ಶಾಲೆಗಳನ್ನು ಸ್ಥಾಪಿಸಿ ಮನೆ ಮಾತಾಗಿದ್ದರು. ಇವರ ಸಾಧನೆಯ ಹಾದಿ ಗಮನಿಸಿ ಅಂದಿನ ಬ್ರಿಟಿಷ್ ಸರಕಾರ ಇವರಿಗೆ “ಇಂಡಿಯಾಸ್ ಫಸ್ಟ್ ಲೇಡಿ ಟೀಚರ್” ಎಂದು ಬಿರುದು ಗೌರವಿಸಿತ್ತು. ನೂರಾರು ಸಮಸ್ಯೆಗಳ ಸಂಕೋಲೆಯಲ್ಲಿ ಸಿಲುಕಿದರೂ ಎದೆಗುಂದದೆ ಸ್ತ್ರೀ ಶಿಕ್ಷಣಕ್ಕಾಗಿ ಭಾರತದಲ್ಲಿ ನಾಂದಿ ಹಾಡಿದವರು. ಮನಕುಲ ಬೆಳಗಲು ಮಹಿಳೆಯ ಪಾತ್ರ ಹಿರಿದೆನ್ನುವದನ್ನು ಅರಿತಿದ್ದ ಸಾವಿತ್ರಿಬಾಯಿ ಪುಲೆ ಸ್ತ್ರೀ ಶಿಕ್ಷಣವಂತರಾದರೆ ಮನೆ ಬೆಳಗಲಿದೆ ಎಂಬ ಕನಸು ಹೊತ್ತಿದ್ದರು. ಈ ಮೂಲಕ ಭಾರತದ ಮೊದಲ ಶಿಕ್ಷಕಿಯಾಗಿ ಹೊರಹೊಮ್ಮಿ ಇಂದಿನ ಗುರು ಕುಲಕ್ಕೆ ಮಾದರಿಯಾಗಿದ್ದಾರೆ. ಶಿಕ್ಷಣ ಜ್ಯೋತಿಯ ಮೂಲಕ ಮಹಿಳೆಯರ ಮನ ಬೆಳಗಿದ ನಂದಾಜ್ಯೋತಿಯ ಜನ್ಮದಿನ ಇಂದು ನಾವೆಲ್ಲ ಸಾವಿತ್ರಿಬಾಯಿ ಪುಲೆಯವರಿಗೆ ಗುರು ನಮನ ಸಲ್ಲಿಸೋಣ.


