ಜಯ್ ನುಡಿ (ವ್ಯಕ್ತಿತ್ವ ವಿಕಸನ ಲೇಖನ ಮಾಲಿಕೆ)
ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ, ಮೊ:೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಒಂದು ಸಂಜೆ ಗುರು ತಮ್ಮ ಎಲ್ಲ ಶಿಷ್ಯಂದಿರನ್ನು ಕರೆದು ಹೀಗೆ ಹೇಳುತ್ತಾರೆ: ನಾಳೆ ಬೆಳಿಗ್ಗೆ ನದಿಯಲ್ಲಿ ಸ್ನಾನ ಮಾಡಿ ತಕ್ಷಣ ಆಶ್ರಮದ ಮುಂದೆ ಇರಿ. ಆಗ ಶಿಷ್ಯಂದಿರು ಆಶ್ಚರ್ಯಗೊಳ್ಳುತ್ತಾರೆ. ನಾವೇನಾದರೂ ತಪ್ಪು ಮಾಡಿದ್ದೇವಾ? ಇಲ್ಲವೇ ಗುರುಗಳು ಹೊಸ ವಿಷಯವನ್ನೇನಾದರೂ ಹೇಳಬಹುದಾ? ಎಂದು ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತಾರೆ. ಅಂದು ರಾತ್ರಿ ನಾಳೆ ಗುರುಗಳು ಆಶ್ರಮದ ಮುಂದೆ ಇರಲು ಯಾಕೆ ಹೇಳಿರಬಹುದು? ಎಂದು ಯೋಚಿಸುತ್ತ ಮಲಗುತ್ತಾರೆ. ಬೆಳಿಗ್ಗೆ ಬೇಗ ಎದ್ದು ನದಿಯಲ್ಲಿ ಸ್ನಾನ ಮಾಡಿ ಆಶ್ರಮದ ಮುಂದೆ ಸೇರುತ್ತಾರೆ. ಆಗ ಗುರುಗಳು ಶಿಷ್ಯರನ್ನುದ್ದೇಶಿಸಿ ಹೀಗೆ ಹೇಳುತ್ತಾರೆ: ಇಂದು ನಾನು ನಿಮಗೆಲ್ಲ ಮೌನವಾಗಿರುವುದರಿಂದ ಏನೆಲ್ಲ ಲಾಭಗಳಿವೆ? ಎನ್ನುವುದನ್ನು ಹೇಳುತ್ತೇನೆ. ಶಾಂತವಾಗಿರುವುದರಿಂದ ನೀವೇನನ್ನು ಬಯಸುತ್ತೀರೋ ಅದು ದೊರೆಯುತ್ತದೆ. ಕೆಲವು ಸಂದರ್ಭಗಳಲ್ಲಿ ಮಾತನಾಡುವುದರಿಂದ ನಷ್ಟ ಆಗುತ್ತದೆ. ಮಾತನಾಡುವ ಕ್ಷಣಗಳು ಬೆಂಕಿಗೆ ಇಂಧನವಾಗಬಹುದು. ಮೌನ ಅತ್ಯಂತ ಪರಿಣಾಮಕಾರಿ ಆಯ್ಕೆಯಾಗುತ್ತದೆ. ಹೆಚ್ಚು ಮಳೆಯಿಂದ ಹೆಚ್ಚು ಬಿಸಿಲಿನಿಂದ ಹೇಗೆ ನಷ್ಟವಾಗುವುದೋ ಹಾಗೆಯೇ ಹೆಚ್ಚು ಮಾತನಾಡುವುದು ಮತ್ತು ಹೆಚ್ಚು ಮೌನವಾಗಿರುವುದು ಹಾನಿಯನ್ನು ಉಂಟುಮಾಡುತ್ತದೆ. ಹಾಗಾದರೆ ಮೌನಕ್ಕೆ ಜಾರಬೇಕಾದ ಬುದ್ಧಿವಂತಿಕೆಯ ಲಕ್ಷಣಗಳ ಸಂದರ್ಭಗಳು ಯಾವವು ತಿಳಿಯೋಣ ಬನ್ನಿ.
ಸಂಬಂಧವಿಲ್ಲದ ವಿಷಯದಲ್ಲಿ
ಬೇರೆಯವರ ವಿಷಯದಲ್ಲಿ, ಸಂಬಂಧವಿರದ ವಿಷಯದಲ್ಲಿ ನನ್ನದು ಎರಡು ಅಕ್ಕಿ ಕಾಳು ಇರಲಿ ಎಂದು ಮೂಗು ತೂರಿಸಿ ಮಾತನಾಡುವುದರಿಂದ ಸುಖಾಸುಮ್ಮನೇ ಅಸಹ್ಯ ಮಾಡಿಸಿಕೊಳ್ಳಬೇಕಾಗುತ್ತದೆ. ಬೇರೆಯವರ ವೈಯಕ್ತಿಕ ವಿಷಯಗಳಲ್ಲಿ ಮಧ್ಯೆ ಭಾಗವಹಿಸುವುದು, ತಕರಾರು ತೆಗೆಯುವುದು ಸುತಾರಾಂ ಒಳ್ಳೆಯದಲ್ಲ. ಬೇರೆಯವರ ವಿಷಯದಲ್ಲಿ ತಲೆ ಬುಡವಿಲ್ಲದೇ ಮಾತನಾಡುವುದು ಶುದ್ಧ ಅವಿವೇಕದ ನಡೆಯೇ ಸರಿ. ಇದರಿಂದ ಮಾನ ಮರ್ಯದೆ ಕಳೆದುಕೊಳ್ಳುವ ಪ್ರಸಂಗ ಎದುರಾಗುತ್ತವೆ. ಆದ್ದರಿಂದ ಸಂಬಂಧವಿರದ ವಿಷಯಗಳಲ್ಲಿ ಮೌನವಹಿಸುವುದು ಮೌಲ್ಯಯುತವಾದುದು.
ಅವಮಾನಗಳಿಗೆ
ಅವಮಾನಗಳಿಗೆ ಪ್ರತಿಕ್ರಿಯಿಸುವುದು ಸಾಮಾನ್ಯವಾಗಿ ಕೋಪದ ಬೆಂಕಿಯನ್ನು ಉಗಳಿಸುತ್ತದೆ. ಇತರರಿಂದ ಸುಲಭವಾಗಿ ಪ್ರಭಾವಿತರಾಗುವಂತೆ ಮಾಡುವ ಮೂಲಕ ನಮ್ಮ ವಿರುದ್ಧ ಸಮರ್ಥವಾಗಿ ಕೆಲಸ ಮಾಡುತ್ತದೆ. ಇದು ನಮ್ಮ ಬಗ್ಗೆ ನಮಗೆ ವಿಶ್ವಾಸವಿಲ್ಲ ಎಂಬ ಅನಿಸಿಕೆಯನ್ನು ನೀಡುತ್ತದೆ. ಯಾರಾದರೂ ನಮ್ಮನ್ನು ಗೇಲಿ ಮಾಡುವ ಅಥವಾ ಪಿತೂರಿ ಮಾಡಿ ನಮ್ಮನ್ನು ಪ್ರಚೋದಿಸುವ ಸಂದರ್ಭಗಳಲ್ಲಿ ಅವರು ಯಶಸ್ವಿಯಾಗಲು ಬಿಡಬಾರದು. ಅದನ್ನು ನಿಭಾಯಿಸಲು ಅತ್ಯುತ್ತಮ ಮಾರ್ಗವೆಂದರೆ ಮೌನಕ್ಕೆ ಮೊರೆ ಹೋಗುವುದು. ಅವರ ನಡತೆ ಇತರರಿಗೆ ಗೊತ್ತಿರುತ್ತದೆ ಹೀಗಾಗಿ ಸಮರ್ಥಿಸಿಕೊಳ್ಳುವುದು ಸಮಂಜಸವಲ್ಲ.
ದುರ್ಬಲರೊಂದಿಗೆ
ತಮ್ಮ ಕೆಲ ದೌರ್ಬಲ್ಯಗಳಿಂದ ಹೊರಬರಲಾಗದ ಕೆಲವರು ತಮ್ಮ ಮುಂದಿನವರ ಬಗ್ಗೆ ಕೀಳಾಗಿ ಮಾತನಾಡುತ್ತಾರೆ. ಅವರಿಗೆ ಬೆಲೆಯೇ ಇಲ್ಲ ಅನ್ನುವ ತರ ನಡೆದುಕೊಳ್ಳುತ್ತಾರೆ. ಬಾಯಿಗೆ ಬಂದಂತೆ ಮಾತನಾಡುತ್ತಾರೆ. ದುರ್ಬಲ ವ್ಯಕ್ತಿಗಳನ್ನು ಕೀಳು ಮಾಡಿ ಮಾತನಾಡುವುದರಿಂದ ಅವರಿಗೆ ಮಾನಸಿಕ ನೋವು ಉಂಟಾಗುತ್ತದೆ. ಸಾಮಾನ್ಯ ವ್ಯಕ್ತಿಯ ದೌರ್ಬಲ್ಯದ ಕುರಿತು ಮಾತನಾಡುವುದರಿಂದ ನಾವು ದೊಡ್ಡರಾಗುವುದಿಲ್ಲ. ದೊಡ್ಡವರಾಗಬೇಕೆಂದರೆ ನಮಗಿಂತ ಚಿಕ್ಕವರಿಗೆ ಮರ್ಯಾದೆ ಕೊಡುವುದನ್ನು ಕಲಿಯಬೇಕು. ಚಿಕ್ಕವರನ್ನು ಕೀಳಾಗಿ ನೋಡುವುದರಿಂದ ದೊಡ್ಡವರಾಗುವ ಬದಲಾಗಿ ಇನ್ನೂ ಚಿಕ್ಕವರಾಗುತ್ತೇವೆ. ಮುಂದಿನವರು ಆರ್ಥಿಕವಾಗಿ ಇಲ್ಲವೇ ಶೈಕ್ಷಣಿಕವಾಗಿ ಹಿಂದುಳಿದಿರಬಹುದು ಅವರು ನಮ್ಮ ಮಾತುಗಳನ್ನು ಕೇಳಿಸಿಕೊಂಡು ಸುಮ್ಮನಿರುತ್ತಾರೆ. ಅವರ ದೃಷ್ಟಿಯಲ್ಲಿ ನಾವು ಗೌರವ ಕಳೆದುಕೊಳ್ಳುತ್ತೇವೆ. ನಾಳೆ ಏನು ಅಂತ ಯಾರಿಗೂ ಗೊತ್ತಿಲ್ಲ. ಮುಂದೊಂದು ದಿನ ಅವರು ಹುದ್ದೆಯಲ್ಲಿ ನಮಗಿಂತ ದೊಡ್ಡವರಾದರೆ ಆಗ ಅವಮಾನ ನಮ್ಮ ಪಾಲಿಗೆ ಬರುತ್ತದೆ. ಆದ್ದರಿಂದ ಮಾತಿನಲ್ಲಿ (ಅಣ್ಣ, ಅಕ್ಕ, ಬನ್ನಿ, ಹೋಗಿ) ಇಂತಹ ನಯ-ವಿನಯ ತುಂಬಿದ, ಗೌರವಪೂರ್ವಕವಾದ ಪದಗಳನ್ನು ಬಳಸಬೇಕು. ಇದರಿಂದ ಜನರ ದೃಷ್ಟಿಯಲ್ಲಿ ನಮಗೆ ಗೌರವ ತಾನೇ ತಾನಾಗಿ ಹೆಚ್ಚುತ್ತದೆ.
ಸತ್ಯ ಗೊತ್ತಿಲ್ಲದಿರುವಾಗ
ಯಾವ ಸಂದರ್ಭದಲ್ಲಿ ಸತ್ಯ ನಮಗೆ ಗೊತ್ತಿಲ್ಲವೋ, ನಮ್ಮ ಬಳಿ ನಿಜ ರೂಪದ ಆಧಾರವಿಲ್ಲವೋ ಆಗ ಬಾಯಿಗೆ ಬೀಗ ಹಾಕಿ ಮೌನವಹಿಸುವುದು ಒಳ್ಳೆಯದು. ಸುಮ್ಮನೇ ಕುಳಿತುಕೊಳ್ಳುವುದರಿಂದ ತಲೆಯಲ್ಲಿ ಹೊಸ ಆಲೋಚನೆಗಳು ಹೊರಹೊಮ್ಮುತ್ತವೆ. ಜ್ಞಾನವೂ ಹೆಚ್ಚುತ್ತದೆ. ಯಾವಾಗ ನಮಗೆ ವಿಷಯದ ಮೇಲೆ ಜ್ಞಾನವಿಲ್ಲವೋ ಆಗ ಸುಮ್ಮನಿರುವುದೇ ಒಳಿತು. ವಿಷಯ ಜ್ಞಾನವಿಲ್ಲದೆ ಮಾತನಾಡಿದರೆ ಅವಮಾನ ಕಟ್ಟಿಟ್ಟ ಬುತ್ತಿ ಆದಕ್ಕೆ ಸತ್ಯ ಗೊತ್ತಿಲ್ಲದ ಸಂದರ್ಭದಲ್ಲಿ ಬಾಯಿ ತೆರೆಯದೇ ಇರುವುದು ಸೂಕ್ತ. ಸಂಗತಿ ಸರಿಯಾಗಿ ಗೊತ್ತಿಲ್ಲದೇ ನಮ್ಮ ಉಪಸ್ಥಿತಿಯ ಬಗ್ಗೆ ಗಮನ ಸೆಳೆಯಲು ಏನಾದರೊಂದು ಮಾತನಾಡಿದರೆ ತಮಾಷೆಗೆ ವಿಷಯವಾಗಿ ಬಿಡ್ತಿವಿ. ನೈಜತೆಯ ಬಗ್ಗೆ ಗೊತ್ತಿರದೇ ಇದ್ದರೆ ಸುಮ್ಮನಿರುವುದು ಬುದ್ಧಿವಂತಿಕೆಯ ಕ್ಷಣ
ಕುಟುಂಬದೊಂದಿಗೆ

‘ಕೋಪ ತನ್ನ ವೈರಿ ಶಾಂತಿ ಪರರ ವೈರಿ’ ಎಂಬ ನುಡಿಯಂತೆ ಯಾವುದೇ ಸಂದರ್ಭದಲ್ಲಿ ಮನೆಮಂದಿ, ಗೆಳೆಯರು, ಆತ್ಮೀಯರು, ಕೋಪದಿಂದ ಹರಿ ಹಾಯುವಾಗ, ಅವಮಾನ ಮಾಡುವಾಗ ಮೌನವಹಿಸಬೇಕು. ದೊಡ್ಡವರು ನಮ್ಮ ಮೇಲೆ ಕೋಪಿಸಿಕೊಂಡಾಗ ನಾವು ಸುಮ್ಮನಿದ್ದರೆ ಅದು ನಾವು ಅವರಿಗೆ ತೋರುವ ಗೌರವ ಆಗಿರುತ್ತದೆ. ಅದನ್ನು ಬಿಟ್ಟು ಕೋಪದ ಕೈಗೆ ಬುದ್ಧಿ ಕೊಟ್ಟರೆ ತೊಂದರೆ ಆಗುವುದು ನಮಗೆ. ಕೋಪ ನೆತ್ತಿಗೇರಿದರೆ ಅಲ್ಲಿಂದ ಜಾಗ ಖಾಲಿ ಮಾಡುವುದು ಒಳ್ಳೆಯದು. ಹೀಗೆ ದೂರ ಹೋಗುವುದರಿಂದ ಕೋಪ ಕಡಿಮೆಯಾಗುತ್ತ ಬರುತ್ತದೆ. ಅವಮಾನಿಸಿದವರಿಗೆ ಇಲ್ಲವೇ ರೇಗಿದವರಿಗೆ ತಮ್ಮ ತಪ್ಪಿನ ಅರಿವಾದಾಗ ಅವರೇ ಬಂದು ಕ್ಷಮೆ ಕೇಳುತ್ತಾರೆ.
ಪ್ರಾಮಾಣಿಕವಾಗಿ ಕೇಳಿ
ಜನರು ಸಾಮಾನ್ಯವಾಗಿ ಉಪದೇಶ ಬಯಸುವುದಿಲ್ಲ. ಮಾರ್ಗದರ್ಶನ ಬಯಸುತ್ತಾರೆ. ಯಾರಾದರೂ ನಮ್ಮ ಬಳಿ ಬಂದಾಗ ಅವರ ಮಾತುಗಳನ್ನು ಎಚ್ಚರಿಕೆಯಿಂದ ಆಲಿಸಿಕೊಳ್ಳಬೇಕು. ಬೆಂಬಲ ಮತ್ತು ಸಹಾನುಭೂತಿ ವಿಷಯಗಳನ್ನು ಹೇಳುವ ಮೂಲಕ ಬೆಂಬಲವನ್ನು ನೀಡಬೇಕು. ಅವರು ನಮ್ಮನ್ನು ಪ್ರಾಮಾಣಿಕವಾಗಿ ಕೇಳದ ಹೊರತು ಮತನಾಡಬಾರರದು. ಕೆಲವು ಸಂದರ್ಭಗಳಲ್ಲಿ ಸರಿಯಾಗಿ ಆಲಿಸುವುದು ಮುಖ್ಯ ಎಂಬುದನ್ನು ತಿಳಿಯಬೇಕು.
ಗೆಳೆಯರೊಂದಿಗೆ
ಸಣ್ಣ ಪುಟ್ಡ ವಿಷಯಗಳನ್ನು ಸಣ್ಣದರಲ್ಲಿ ಮುಗಿಸುವ ಹಂತವನ್ನು ರೂಢಿಸಿಕೊಳ್ಳಬೇಕು. ಗೆಳೆಯರೊಂದಿಗೆ ಬಾಯಿಗೆ ಬಂದಂತೆ ಬೈಯ್ಯುವುದು ಕಡ್ಡಿಯನ್ನು ಗುಡ್ಡ ಮಾಡುವುದು ಒಳ್ಳೆಯದಲ್ಲ. ಹೀಗೆ ಮಾಡುವುದರಿಂದ ಗೆಳೆತನದಲ್ಲಿ ಬಿರುಕು ಮೂಡುತ್ತದೆ. ಬೈದು ಮಾನ ಮರ್ಯಾದೆ ಕಳೆದುಕೊಳ್ಳುವುದಕ್ಕಿಂತ ಸ್ನೇಹದ ಕೊಂಡಿಯನ್ನು ಬೆಸೆದುಕೊಂಡಿರಲು ಮೌನವಾಗಿರಬೇಕು.
ರಹಸ್ಯವಾಗಿಡಲು ಕೇಳಿದಾಗ
ಗೌಪ್ಯ ಅಥವಾ ರಹಸ್ಯವನ್ನು ಹಂಚಿಕೊಳ್ಳಲು ಯಾರಾದರೂ ನಮ್ಮನ್ನು ಸಾಕಷ್ಟು ನಂಬಿದಾಗ ಅವರ ನಂಬಿಕೆಯನ್ನು ಮುರಿಯದಂತೆ ನಡೆದುಕೊಳ್ಳಬೇಕು. ವೈಯುಕ್ತಿಕ ಅಥವಾ ವೃತ್ತಿಪರ ಸಂಬಂಧಗಳಲ್ಲಿ ರಹಸ್ಯವನ್ನು ಇಟ್ಟುಕೊಳ್ಳುವುದು ಅಥವಾ ಹಂಚಿಕೊಳ್ಳುವ ಮಾಹಿತಿಯನ್ನು ತಿಳಿದುಕೊಳ್ಳುವುದು ನಮಗೆ ಅನುಕೂಲಕರವಾಗಿಲ್ಲದಿದ್ದರೆ ಸ್ಪಷ್ಟವಾದ ಗಡಿಗಳನ್ನು ಹೊಂದಿಸಬೇಕು. ಮತ್ತು ಅವರಿಗೆ ತಿಳಿಸುವುದು ಮುಖ್ಯ. ಪ್ರಮುಖವಾದ ಸಮಯದಲ್ಲಿ ಜನರು ತಮ್ಮ ಮಾತುಗಳು ಇತರ ವ್ಯಕ್ತಿಯ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದರ ಕುರಿತು ಸ್ಪಷ್ಟವಾಗಿ ಯೋಚಿಸುವುದಿಲ್ಲ. ಅಂತಹ ಸಮಯದಲ್ಲಿ ಮೌನವಾಗಿರುವುದು ಮತ್ತು ವಾದದಲ್ಲಿ ಸಿಲುಕಿಕೊಳ್ಳುವುದನ್ನು ತಪ್ಪಿಸುವುದು ಮುಖ್ಯ. ಪ್ರತಿಕ್ರಿಯಿಸುವ ಮೊದಲು ಯೋಚಿಸಲು ಸಮಯ ತೆಗೆದುಕೊಳ್ಳಿ.
ಕೊನೆ ಹನಿ
ಇಂದಿನ ದಿನಮಾನದಲ್ಲಿ ಎಲ್ಲಿ ಹೋದರೂ ಸದ್ದು ಗದ್ದಲ ಇದ್ದೇ ಇರುತ್ತದೆ. ಇದರಿಂದ ಒತ್ತಡ ಮೈ ಮನದಲ್ಲಿ ಮನೆ ಮಾಡುವುದಂತು ಖಚಿತ. ಸದ್ದು ಗದ್ದಲದಿಂದ ದೂರವಿರಲು ಸಾಧ್ಯವಿಲ್ಲ. ಆದರೆ, ಬಹಳಷ್ಟು ಸಮಯದಲ್ಲಿ ಮೌನವಹಿಸುವುದನ್ನು ಕಲಿತರೆ ಒತ್ತಡವನ್ನು ಶಮನಗೊಳಿಸಬಹುದು. ಹೀಗೆ ಮೌನವಾಗಿರುವುದರಿಂದ ಕೋಪ ನಿಯಂತ್ರಣದಲ್ಲಿರುತ್ತದೆ. ಒತ್ತಡವೂ ಕಡಿಮೆಯಾಗುತ್ತದೆ. ಒತ್ತಡವನ್ನುಂಟು ಮಾಡುವ ಹಾರ್ಮೋನ್ಗಳ ಸ್ರವಿಸುವಿಕೆಯ ಮಟ್ಟವೂ ಕಡಿಮೆಯಾಗುತ್ತದೆ. ಯಾವ ಸಮಯದಲ್ಲಿ ಶಾಂತರಾಗಿರಬೇಕು. ಮತ್ತು ಯಾವ ಸಂದರ್ಭದಲ್ಲಿ ಮಾತನಾಡಬೇಕೆಂಬುದನ್ನು ತಿಳಿದು ನಡೆಯುವುದು ಅಗತ್ಯವಿದೆ. ಸಂವಹನ ಕೌಶಲ್ಯವು ಅಮೂಲ್ಯವೆಂದು ಪರಿಗಣಿಸುವ ಈ ಯುಗದಲ್ಲಿ ಮೇಲಿನ ಸಂದರ್ಭಗಳಲ್ಲಿ ಮಾತನಾಡದಿರುವುದು ಪ್ರಯೋಜನಕಾರಿ ಮತ್ತು ಬುದ್ಧಿವಂತಿಕೆಯಿಂದ ಆರಿಸಿಕೊಳ್ಳುವ ಉತ್ತಮ ಆಯ್ಕೆ. ಆಡುವ ಮಾತುಗಳನ್ನು ಕೇಳಿಸಿಕೊಳ್ಳುತ್ತ ಚೆಂದದ ಬದುಕು ಆವರಿಸಿಕೊಳ್ಳುವಂತೆ ಮಾಡಿಕೊಳ್ಳೋಣವಲ್ಲವೇ?


