ಇಂದು ಬೆಳಗಾವಿ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನಕ್ಕೆ (೧೯೨೪ ಡಿಸೆಂಬರ್ ೨೬ – ೨೭) ಶತಮಾನೋತ್ಸವದ ಹಿನ್ನೆಲೆಯಲ್ಲಿ ಈ ಕುರಿತ ವಿಶೇಷ ಲೇಖನ
ಲೇಖನ
– ಡಾ.ಪೂರ್ಣಿಮಾ ಧಾಮಣ್ಣವರ
ಕನ್ನಡ ಅತಿಥಿ ಉಪನ್ಯಾಸಕರು
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ
ಪಿ.ಜಿ ಸೆಂಟರ್, ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ೩೯ನೇ ಅಧಿವೇಶನಕ್ಕೆ ಸಾಕ್ಷಿಯಾದ ನೆಲ ಬೆಳಗಾವಿ. ೧೯೨೪ ರಲ್ಲಿ ನಡೆದ ಐತಿಹಾಸಿಕ ಅಧಿವೇಶನಕ್ಕೆ ಈಗ ಶತಮಾನದ ಸಂಭ್ರಮ. ಮಹಾತ್ಮಾ ಗಾಂಧೀಜಿಯವರು ಬೆಳಗಾವಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮದ ನೇತೃತ್ವವಹಿಸಿ ೧೦೦ ವರ್ಷಗಳಾಗಿರುವ ಶುಭಗಳಿಗೆ ಇವತ್ತು ನಮ್ಮದಾಗಿದೆ.
ಬೆಳಗಾವಿಯು ಪುರಾತನವಾದ, ಸಾಂಸ್ಕೃತಿಕವಾಗಿ ವೈಭವಯುತವಾದ ಹಾಗೂ ಐತಿಹಾಸಿಕ ಸ್ಥಳವಾಗಿದೆ. ಪಶ್ಚಿಮ ಘಟ್ಟದ ಮಡಿಲಿನಲ್ಲಿರುವ ಈ ನಗರ ಕರ್ನಾಟಕ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಒಂದು. ಶೈಕ್ಷಣಿಕವಾಗಿ, ರಾಜಕೀಯವಾಗಿ ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ತನ್ನದೇ ಆದ ಮಹತ್ವವನ್ನು ಹೊಂದಿದೆ. ಅದೇ ರೀತಿ ಐತಿಹಾಸಿಕವಾಗಿ ಗುರುತಿಸುವುದಾದರೆ ೧೯೨೪ರಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ಒಂದೇ ಘಟನೆ ಸಾಕು ಇಡೀ ಪ್ರಪಂಚ ಹಿಂದೆ ತಿರುಗಿ ನೋಡುವಂತೆ ಮಾಡಿದ್ದು ಬೆಳಗಾವಿಯನ್ನ.
ಬೆಳಗಾವಿಗೂ ಮತ್ತು ಗಾಂಧೀಜಿಯವರಿಗೂ ಅವಿನಾಭಾವ ಸಂಬಂಧವಿದ್ದು, ಕುಂದಾನಗರಿಗೆ ಬರೋಬ್ಬರಿ ೬ ಬಾರಿ ಬಂದಿದ್ದಾರೆ. ೧೯೧೫ರಲ್ಲಿ ಅಗಷ್ಟದಲ್ಲಿ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿ ಭಾರತ ದೇಶಕ್ಕೆ ಮರಳಿದರು. ಅದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟ ಭುಗಿಲೆದ್ದಿತ್ತು. ಗುರುಗಳಾದ ಗೋಪಾಲಕೃಷ್ಣ ಗೋಖಲೆ ಗಾಂಧೀಜಿಗೆ ದೇಶ ಸುತ್ತಿ, ಜನರನ್ನು ಬಡಿದೆಚ್ಚರಿಸುವಂತೆ ಕರೆ ನೀಡಬೇಕು ಅಂತ ಹೇಳಿದರು. ಗುರುಗಳ ಮಾತನ್ನೇ ಧ್ಯೇಯ ವಾಕ್ಯವನ್ನಾಗಿ ಮಾಡಿಕೊಂಡಿದ್ದ ಗಾಂಧೀಜಿ ೧೯೧೬ರಲ್ಲಿ ಬಾಲಗಂಗಾಧರ ತಿಲಕರ ಜೊತೆಗೆ ಬೆಳಗಾವಿಗೆ ಬರಲು ನಿರ್ಧರಿಸುತ್ತಾರೆ.
೧೯೧೬ರ ಎಪ್ರೀಲ್ ೨೭ರಂದು ಮೇ ೧ ರವರೆಗೆ ತಿಲಕರ ಜೊತೆಗೂಡಿ ಬೆಳಗಾವಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಜನರನ್ನು ಹುರಿದುಂಬಿಸಿದರು. ಆಗ ಅವರಿಗೆ ಬೆಂಬಲ ನೀಡಿದವರು ಕರ್ನಾಟಕದ ಕೇಸರಿ ಎಂದೇ ಖ್ಯಾತಿಯಾದ ಗಂಗಾಧರ ದೇಶಪಾಂಡೆ ಮತ್ತು ಗೋವಿಂದರಾವ್ ಯಾಳಗಿ ಹಾಗೂ ಸ್ಥಳೀಯ ಹೋರಾಟಗಾರರು.
ಇದರ ನಂತರ ೧೯೨೦ರ ನವೆಂಬರ ೮ ಮತ್ತು ೯ ರಂದು ೨ ದಿನಗಳ ಕಾಲ ಬೆಳಗಾವಿಗೆ ಸ್ವಾತಂತ್ರ್ಯ ಹೋರಾಟದ ರೂಪರೇಷೆ ಸಿದ್ದಪಡಿಸಲು ಗಾಂಧೀಜಿಯವರು ವಾಸ್ತವ್ಯ ಹೂಡಿದರು. ಇಷ್ಟಕ್ಕೆ ಗಾಂಧೀಜಿಯವರ ಬೆಳಗಾವಿಯ ನಂಟು ಮುಗಿಯುವುದಿಲ್ಲ.

೧೯೨೪ ಡಿಸೆಂಬರ ೨೬-೨೭ರಂದು ಎರಡು ದಿನಗಳ ಕಾಲ ಬೆಳಗಾವಿಯಲ್ಲಿ ನಡೆದ ೩೯ನೇ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಬಾಪೂಜಿಯವರು ವಹಿಸಿಕೊಂಡರು. ಇದು ಚರಿತ್ರೆಯಲ್ಲಿ ಒಂದು ದಾಖಲಾರ್ಹ ಸಂಗತಿ. ಏಕೆಂದರೆ ಮತ್ತೆಂದೂ ಗಾಂಧೀಜಿಯವರು ಕಾಂಗ್ರೇಸ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿಲ್ಲ. ಹೀಗಾಗಿ ಬೇಳಗಾವಿ ಗಾಂಧೀಜಿಯವರ ಜೀವನದಲ್ಲಿ ಎಂದು ಮರೆಯದ ಪೂಣ್ಯಭೂಮಿ ಎಂದರೆ ಅತಿಶಯೊಕ್ತಿ ಆಗಲಾರದು. ಈ ಸಂದರ್ಭದಲ್ಲಿ ಗಾಂಧೀಜಿಯವರು ಸ್ಮರಣೀಯ ಭಾಷಣ ಮಾಡಿದರು. ಧಾರ್ಮಿಕ ಮತ್ತು ಭಾಷಿಕ ಸಮುದಾಯಗಳ ನಡುವೆ ಸೌಹಾರ್ದತೆ ಕಾಪಾಡಬೇಕು ಎಂದು ಕರೆ ನೀಡಿದರು. ಶೀಘ್ರದಲ್ಲೇ ಭಾರತಕ್ಕೆ ಸ್ವಾತಂತ್ರ್ಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಸ್ಪೃಶ್ಯರಂತೆ ವಂಚಿತ ಸಮುದಾಯಗಳ ಉನ್ನತಿಯ ಕುರಿತು ಮಾತನಾಡಿದರು. ಅವರು ಮುಖ್ಯವಾಹಿನಿಯ ಸಾಮಾಜಿಕ ಸೇವೆ ಮತ್ತು ಸಮಾಜದ ಸೇವೆ ನಿಸ್ವಾರ್ಥ ಭಕ್ತಿಯನ್ನು ಕೇಂದ್ರೀಕರಿಸಿದರು. ಖಾದಿ ಮತ್ತು ಗ್ರಾಮೋದ್ಯೋಗಗಳು ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವ ಸಾಮರ್ಥ್ಯವನ್ನು ಹೇಗೆ ಹೊಂದಿವೆ ಎಂದು ಅವರು ಮಾತನಾಡಿದರು.
ಜಾತಿ ವರ್ಗ ಅಥವಾ ಲಿಂಗ ತಾರತಮ್ಯದಿಂದ ಬಳಲದ ಸಮಾಜವನ್ನು ಪುನರ್ನಿರ್ಮಾಣ ಮಾಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಅಧಿವೇಶನಕ್ಕೆ ಬಂದ ಗಾಂಧೀಜಿಯವರು ಬರೋಬ್ಬರಿ ೧೫ ದಿನಗಳ ಕಾಲ ಇದ್ದು ಅಲ್ಲಿನ ಸುತ್ತಮುತ್ತಲಿನ ಗ್ರಾಮಗಳಿಗೆ ಭೇಟಿ ನೀಡಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಜನರನ್ನು ಹುರಿದುಂಬಿಸಿದರು. ಅಷ್ಟೇ ಅಲ್ಲದೇ ‘ಸ್ವರಾಜ್ಯ’ ಬಣ ಮತ್ತು ‘ಬದಲಾವಣೆ ಇಲ್ಲ’ ಬಣದ ನಡುವೆ ಏಕತೆಯನ್ನು ರೂಪಿಸಲು ಗಾಂಧೀಜಿಯವರು ಕಾಂಗ್ರೆಸ್ ಅಧಿವೇಶನಕ್ಕೆ ಆರು ದಿನಗಳ ಮೊದಲೇ ಆಗಮಿಸಿದರು. ಐತಿಹಾಸಿಕ ೩೯ನೇ ಕಾಂಗ್ರೆಸ್ ಅಧಿವೇಶನದ ನೆನಪಿಗಾಗಿ ರಾಜ್ಯ ಸರ್ಕಾರವು ಟಿಳಕವಾಡಿಯಲ್ಲಿ ವೀರಸೌಧ, ಗಾಂಧಿ ಸ್ಮಾರಕವನ್ನು ನಿರ್ಮಿಸಿದೆ.
ಅಧಿವೇಶನದ ಸಂದರ್ಭದಲ್ಲಿ ಕೆಲವೊಂದು ಅವಶೇಷಗಳನ್ನು ಇವತ್ತಿಗೂ ಉಳಿಸಿಕೊಂಡು ಬಂದಿವೆ. ಕಾಂಗ್ರೆಸ್ ಅಧಿವೇಶನಕ್ಕೆ ಅಂತಾನೆ ಬೆಳಗಾವಿಯ ಟಿಳಕವಾಡಿಯಲ್ಲಿ ಹೊಸ ಬಾವಿಯನ್ನೇ ತೋಡಿದರು. ಗಾಂಧೀಜಿಯವರು ಆ ಬಾವಿಯ ನೀರು ಕುಡಿದರು. ಅಧಿವೇಶನ ನಡೆದು ನೂರು ವರ್ಷಗಳಾದಂತೆ ಆ ಬಾವಿಗೂ ಇವಾಗ ನೂರರ ವಸಂತ. ಇದು ಅಧಿವೇಶನಕ್ಕೆ ಸಾಕ್ಷಿಯಾಗಿದೆ.
ಅದೇರೀತಿ ಇನ್ನೊಂದು ಘಟನೆ ಗಾಂಧೀಜಿಯವರಿಗೆ ವಸತಿಗಾಗಿ ೩೦೦ರೂ ಖರ್ಚು ಮಾಡಿ ವ್ಯಾಕ್ಸಿನ್ ಡಿಪೋದಲ್ಲಿ ಬಿದಿರು ಮತ್ತು ಖಾದಿ ಬಟ್ಟೆಯಿಂದ ಗುಡಿಸಲು ತಯಾರಿಸಿದ್ದರು. ಇದರಲ್ಲಿ ನಾನು ಇರಲ್ಲ, ಇಷ್ಟೊಂದು ಖರ್ಚು ಮಾಡುವ ಅವಶ್ಯಕತೆ ಏನಿತ್ತು? ಎಂದು ಗಾಂಧೀಜಿಯವರು ಪ್ರಶ್ನಿಸಿದ್ದರು. ಆಗ ಗಂಗಾಧರ ದೇಶಪಾಂಡೆಯವರು ಅಧಿವೇಶನ ಮುಗಿದ ನಂತರ ಆ ಗುಡಿಸಿಲಲ್ಲಿರುವ ವಸ್ತುಗಳನ್ನು ಹರಾಜು ಹಾಕುತ್ತೇವೆ ಎಂದು ಮನವೊಲಿಸಿದ ಬಳಿಕ ಅಲ್ಲಿ ಇರಲು ಒಪ್ಪಿದರು.
ನೂರು ವರ್ಷದ ಸವಿನೆನಪನ್ನು ಇವತ್ತು ನಾವೆಲ್ಲರೂ ನೆನಪಿಸಿಕೊಳ್ಳುವ ದಿನ. ಈ ಅಧಿವೇಶನದಲ್ಲಿ ಸಾವಿರಾರು ಹೋರಾಟಗಾರರ ಶ್ರಮವನ್ನು ನಾವೆಲ್ಲರೂ ಸ್ಮರಿಸಿಕೊಳ್ಳೊಣ..


