ಕಡಿವಾಣಕ್ಕೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘ & ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆ ಜಂಟಿ ಪ್ರತಿಭಟನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರೈತರ ಜಮೀನುಗಳನ್ನು ವಕ್ಪ ಆಸ್ತಿಯೆಂದು ವಕ್ಪ್ ಕಮೀಟಿಗೆ ವರ್ಗಾಯಿಸುವ ಹುನ್ನಾರ ನಡೆಸುತ್ತಿದ್ದು ಇದಕ್ಕೆ ತಕ್ಷಣ ಕಡಿವಾಣ ಹಾಕಿ ಈ ಪ್ರಕರಣವನ್ನು ಸಿ.ಬಿ.ಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಇವರ ಮುಖಾಂತರ ಕಂದಾಯ ಸಚಿವ ಕೃಷ್ಣ ಬೈರೇಗೌಡರಿಗೆ ಹಾಗೂ ಜಿಲ್ಲಾಧಿಕಾರಿಗೆ ಪ್ರತ್ಯೇಕವಾಗಿ ಅಖಂಡ ಕರ್ನಾಟಕ ರೈತ ಸಂಘ, ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಂಟಿಯಾಗಿ ಪ್ರತಿಭಟನೆ ಹಮ್ಮಿಕೊಂಡು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ರೈತರ ಜಮೀನುಗಳು ಹಿಂದಿನ ಕಾಲದಿಂದಲೂ ಹಿರಿಯರ ಮುಖಾಂತರ ವಾರ್ಸಾ ನಾತಿಯಿಂದ ಬಂದಂತಹ ಜಮೀನುಗಳಾಗಿದ್ದು, ಇಂತವುಗಳನ್ನು ಉದ್ದೇಶ ಪೂರ್ವಕವಾಗಿ ಹಾಳು ಮಾಡುವ ಹುನ್ನಾರ ವಕ್ಪ್ ಕಮೀಟಿ ಮಾಡುತ್ತಿದ್ದು, ಇದರ ಹಿಂದೆ ಯಾವುದೋ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಹೊನವಾಡ ಗ್ರಾಮದ ರೈತರು ನಮಗೆ ನೋಟಿಸ್ ಕೊಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ಜಮೀನುಗಳು ವಕ್ಪ್ ಕಮೀಟಿಗೆ ಸಂಬಂಧಿಸಿವೆ ಎಂದು ಹೇಳುತ್ತಿದ್ದಾರೆ. ರೈತರಾದ ನೀವು ಜಮೀನುಗಳಲ್ಲಿ ಕಾಲು ಹಾಕಬೇಡಿ ಕಬ್ಜಾದಿಂದ ಹೊರಹೋಗಿ ಎಂದು ಬೆದರಿಕೆ ಬರುತ್ತಿವೆ ಎಂದು ರೈತರು ತಮ್ಮ ಅಳಲು ತೊಡಿಕೊಳ್ಳುತ್ತಿದ್ದಾರೆ. ಇದೆ ರೀತಿ ಪರಿಸ್ಥಿತಿ ಮುಂದುವರೆದರೆ ಜಿಲ್ಲೆಯ ಎಲ್ಲ ರೈತರ ಜಮೀನುಗಳು ವಕ್ಪ್ ಆಸ್ತಿ ಎಂದು ತಿಳಿದರೆ ರೈತರು ಆತ್ಮಹತ್ಯೆಗೆ ಶರಣಾಗಬೇಕಾಗುತ್ತದೆ. ಸರ್ಕಾರ ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿ ಎಚ್ಚೆತ್ತುಕೊಂಡು ಇದಕ್ಕೆ ಕಡಿವಾಣ ಹಾಕಬೇಕು. ರೈತರ ಆಸ್ತಿಯನ್ನು ಕಬಳಿಸಲು ಹುನ್ನಾರ ನಡೆಸಿದ ವಕ್ಪ್ ಕಮೀಟಿಯನ್ನೆ ರದ್ದು ಪಡಿಸಬೇಕು. ಒಂದು ವೇಳೆ ಇದರ ಬಗ್ಗೆ ಗಂಭೀರವಾಗಿ ಪರಿಗಣಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವಿಠ್ಠಲ ಬಿರಾದಾರ, ಎಮ್.ಜಿ. ಯಂಕಂಚಿ, ತಾಳಿಕೋಟಿ ತಾಲೂಕಾಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ, ಸೋಮನಗೌಡ ಪಾಟೀಲ, ಗುರುಲಿಂಗಪ್ಪ ಪಡಸಲಗಿ, ಮಹೇಶ ಯಡಹಳ್ಳಿ, ಬಾಗಪ್ಪ ನಾಟೀಕಾರ, ದಾವಲಸಾಬ ನದಾಪ, ಬಸವರಾಜ ಜಂಗಮಶೆಟ್ಟಿ, ಸಂಗಪ್ಪ ಕಾಗಿ, ಲಾಲಸಾಬ ಹಳ್ಳೂರ, ರ್ಯಾವಪ್ಪಗೌಡ ಪೋಲೇಸಿ, ಗೊಲ್ಲಾಳಪ್ಪ ಚೌಧರಿ, ಚನ್ನಬಸಪ್ಪ ಸಿಂಧೂರ, ರಾಮನಗೌಡ ಹಾದಿಮನಿ, ಶಿವರಾಜಗೌಡ ಬಿರಾದಾರ, ನಾಗರಾಜ ತೋಟದ, ಶ್ರೀಶೈಲ ಬಂಡಿ, ಅಶೋಕ ಉಪ್ಪಲದಿನ್ನಿ, ಸೇರಿದಂತೆ ಇನ್ನಿತರರು ಇದ್ದರು.
ಉದ್ದೇಶ ಪೂರ್ವಕ ರೈತರನ್ನು ವಕ್ಕಲ್ಲೆಬ್ಬಿಸುವ ಪಿತೂರಿ
ರೈತರ ಕುಟುಂಬಕ್ಕೆ ಸೇರಿದ ಜಮೀನುಗಳು ಹಿರಿಯರ ಕಾಲದಿಂದಲೂ ಬಂದಂತವುಗಳು. ಇಂತಹ ಜಮೀನುಗಳನ್ನು ವಕ್ಪ್ ಆಸ್ತಿ ಎಂದು ಹೇಳಲು ಹೇಗೆ ಸಾಧ್ಯ? ವಕ್ಪ್ ಕಮೀಟಿಯವರ ಬಳಿ ತಮ್ಮದೆಂಬುದು ಏನಾದರೂ ದಾಖಲೆಗಳಿದ್ದರೆ ಎಷ್ಟನೇ ಶತಮಾನಗಳ ಹಿಂದೆ ತಮ್ಮದ್ದಾಗಿದ್ದವು ಎಂದು ಆಧಾರ ಸಮೇತ ತೋರಿಸಿ ಸಾಬೀತುಪಡಿಸಲಿ. ಇದು ಉದ್ದೇಶ ಪೂರ್ವಕವಾಗಿ ರೈತರನ್ನು ವಕ್ಕಲ್ಲೆಬ್ಬಿಸುವ ಪಿತೂರಿ ನಡೆದಿದೆ. ಇದಕ್ಕೆ ಸರ್ಕಾರ ಹಾಗೂ ಜಿಲ್ಲಾಡಳಿತ ಉತ್ತರ ನೀಡಬೇಕು. ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ ೧೨೦೦ ಎಕರೆ ಜಮೀನು ವಕ್ಪ್ ಆಸ್ತಿ ಎಂದು ಸುಮಾರು ೮೯ ರೈತರಿಗೆ ನೋಟಿಸ್ ನೀಡಿದ್ದಾರೆಂಬುದು ತಿಳಿದು ಬಂದಿದೆ. ಅದರಂತೆ ಬಸವನ ಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಹೋಬಳಿಯಲ್ಲಿಯು ಕೂಡಾ ಅಂದಾಜು ೧೫ ರೈತರಿಗೆ ಇದೆ ಪರಿಸ್ಥಿತಿ ಎದುರಾಗಿದೆ. ಇಂಗಳೇಶ್ವರ ಗ್ರಾಮದಲ್ಲಿಯೂ ಕೂಡಾ ೪ ರೈತರಿಗೆ ನಿಮ್ಮದು ವಕ್ಪ್ ಆಸ್ತಿ ಎಂದು ಹೇಳುತ್ತಿದ್ದಾರೆಂದು ಗ್ರಾಮದ ರೈತರು ಅಳಲು ತೊಡಿಕೊಳ್ಳುತ್ತಿದ್ದಾರೆ. ಈ ರೀತಿ ನಡೆಸುತ್ತಿರುವ ಹುನ್ನಾರಕ್ಕೆ ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಕೆಲವೊಂದು ಹಳ್ಳಿಗಳಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬಂದಿವೆ. ಇದರ ಹಿಂದೆ ಸರ್ಕಾರದ ಹುನ್ನಾರ ಅಡಗಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.

