ವಿಜಯಪುರ ಜಿಲ್ಲೆಯಲ್ಲಿ ಕಳೆದ ಒಂದೂವರೆ ವರ್ಷದಲ್ಲಿ `ಕೋಟಿ’ ಮೌಲ್ಯದ ಮಾದಕ ದ್ರವ್ಯ ಜಪ್ತಿ | ಬೆಳಗಾವಿ ಉತ್ತರ ವಲಯದ ಪೊಲೀಸ್ ಮಹಾ ನಿರೀಕ್ಷಕ ಸಂದೀಪ ಪಾಟೀಲ ಮಾಹಿತಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಾದಕ ದ್ರವ್ಯ ಮುಕ್ತ ಸಮಾಜಕ್ಕೆ ಆರಕ್ಷಕರು ಸಂಕಲ್ಪ ಮಾಡಿದ್ದು, ವಿಜಯಪುರ ಜಿಲ್ಲೆಯಲ್ಲಿ ಮಾದಕ ದ್ರವ್ಯ ವಸ್ತುಗಳ ಮಾರಾಟ ಜಾಲಗಳನ್ನು ಮಟ್ಟ ಹಾಕಲು ಶ್ರಮಿಸಲಾಗುತ್ತಿದ್ದು, ಕಳೆದ ವರ್ಷ ಹಾಗೂ ಪ್ರಸಕ್ತ ವರ್ಷದ ಜೂನ್ ಮಾಸಾಂತ್ಯದವರೆಗೆ ೯೮,೭೬,೭೨೦ ರೂ. ಮೌಲ್ಯದ ಮಾದಕ ದ್ರವ್ಯಗಳನ್ನು ಜಪ್ತು ಮಾಡಿ ೭೩ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬೆಳಗಾವಿ ವಿಭಾಗದಲ್ಲಿ ಡ್ರಗ್ಸ್ ಭೇದಿಸುವ ಪ್ರಕರಣದಲ್ಲಿ ವಿಜಯಪುರ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದು ಬೆಳಗಾವಿ ಉತ್ತರ ವಲಯದ ಪೊಲೀಸ್ ಮಹಾ ನಿರೀಕ್ಷಕ ಸಂದೀಪ ಪಾಟೀಲ ಮಾಹಿತಿ ನೀಡಿದರು.
ವಿಜಯಪುರದಲ್ಲಿ ಡ್ರಗ್ ಫ್ರೀ ಕರ್ನಾಟಕ ಅಂಗವಾಗಿ ಕೈಗೊಳ್ಳಲಾಗುತ್ತಿರುವ ಅಭಿಯಾನ ಹಾಗೂ ಕಾರ್ಯಚಟುವಟಿಕೆಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ವಿವರಣೆ ನೀಡಿದ ಅವರು, ಮಾದಕ ದ್ರವ್ಯ ಮಾರಾಟ ಜಾಲವನ್ನು ಬೇಧಿಸಲು ಪ್ರಯತ್ನಿಸಲಾಗುತ್ತಿದೆ, ಹೀಗಾಗಿ ಕಳೆದ ವರ್ಷ ನಡೆಸಿದ ಕಾರ್ಯಾಚರಣೆಯ ಫಲವಾಗಿ ೭೩ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ, ಕಳೆದ ೨೦೨೫ ನೇ ವರ್ಷದಲ್ಲಿ ೭೪,೭೩,೧೪೦ ರೂ. ಮೌಲ್ಯದ ಮಾದಕ ದ್ರವ್ಯವನ್ನು ಜಪ್ತು ಮಾಡಿ ೩೬ ಜನರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ೨೩ ಜನ ಗ್ರಾಹಕರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಅದೇ ತೆರನಾಗಿ ಪ್ರಸಕ್ತ ವರ್ಷದ ಜೂನ್ ಮಾಸಾಂತ್ಯದವರೆಗೆ ೨೪,೦೩,೫೮೦ ರೂ. ಮೌಲ್ಯದ ಮಾದಕ ದ್ರವ್ಯ ಜಪ್ತು ಮಾಡಿಕೊಂಡು, ೩೭ ಜನ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ೧೭ ಜನ ಗ್ರಾಹಕರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ೯೮,೭೬,೭೨೦ ರೂ. ಮೌಲ್ಯದ ಮಾದಕ ದ್ರವ್ಯ ಜಪ್ತು ಮಾಡಿ ನಾಶಪಡಿಸಲಾಗಿದೆ ಎಂದು ವಿವರಣೆ ನೀಡಿದರು.
ಮಾದಕ ವಸ್ತುಗಳ ಬಗ್ಗೆ ಈಗಾಗಲೇ ಗಂಭೀರವಾಗಿ ಪರಿಗಣಿಸಿ ಪೊಲೀಸ್ ಇಲಾಖೆಯಿಂದ ಸಾಕಷ್ಟು ಕ್ರಮಗಳಾಗಿದ್ದು ಸಾಕಷ್ಟು ಪ್ರಕರಣ ದಾಖಲು ಮಾಡಲಾಗಿದೆ, ಡ್ರಗ್ ಪೆಡ್ಲರ್ಗಳ ಮೇಲೆ ದಾಳಿ ನಡೆಸಲಾಗುತ್ತಿದೆ, ಗಾಂಜಾ ಬೆಳೆಯುವವರ ಮೇಲೆ ನಿಗಾ ಇರಿಸಿ ಅವರನ್ನು ವಶಪಡಿಸಿಕೊಳ್ಳಲಾಗುತ್ತಿದೆ ಎಂದರು.
ಈಗಾಗಲೇ ಅನೇಕ ಶಾಲೆ ಕಾಲೇಜುಗಳು ಸೇರಿದಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಸಂಘಟಿಸಲಾಗುತ್ತಿದ್ದು ಆಪರೇಷನ್ ರೈಸ್ ಹಾಗೂ ಮಾದಕ ವಸ್ತುಗಳು ಬೇಡ ಎನ್ನುವ ಸಂದೇಶದ ತಾತ್ಪರ್ಯಯುಳ್ಳ `ಬೇಡ ಬ್ರೋ’ ಎಂಬ ಅಭಿಯಾನ ವಿಜಯಪುರ ಸೇರಿದಂತೆ ಎಲ್ಲ ಕಡೆ ನಡೆಸಲಾಗುತ್ತಿದೆ,
ಆಪರೇಷನ್ ರೈಸ್ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಅವರೇ ಮಾದಕ ವಸ್ತುಗಳ ನಿರಾಕರಿಸುವುದು ಸೇರಿದಂತೆ ಹಲವು ಕಾರ್ಯಕ್ರಮಮಾಡಲಾಗುತ್ತಿದೆ. ಅಲ್ಲದೇ ಈ ಕಾರ್ಯಕ್ರಮಕ್ಕೆ ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳ ಸಹಯೋಗದಲ್ಲಿ ನಡೆಸಲಾಗುತ್ತಿದೆ. ಬೇಡ ಬ್ರೋ ಕಾರ್ಯಕ್ರಮದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಜನರಿಗೆ ಅರ್ಥವಾಗುವ ಹಾಗೆ ಜನಸ್ನೇಹಿ ಯುವ ಸ್ನೇಹಿ ಸಂದೇಶ ನೀಡಿ ಮಾದಕ ದ್ರವ್ಯಗಳಿಂದ ದೂರವಿರುವ ಸಂದೇಶ ಸಾರುವ ಕಾರ್ಯ ಮಾಡಲಾಗುತ್ತಿದೆ ಎಂದು ಸಂದೀಪ ಪಾಟೀಲ ವಿವರಿಸಿದರು.

