ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸರ್ವಕಾಲಕ್ಕೂ ವಿಶ್ವ ಸಂಗೀತ ಇತಿಹಾಸದಲ್ಲಿ ಅಜರಾಮರವಾಗಿ ನಿಲ್ಲುವಂತಹ ಗಾಯಕಿ ಗಾನಕೋಗಿಲೆ ಎಸ್.ಜಾನಕಿ ಕಂಠ ಮಾಧುರ್ಯಕ್ಕೆ ಎಂತಹವರನ್ನು ಮಂತ್ರಮುಗ್ಧರನ್ನಾಗಿ ಮಾಡುವಂತಹ ಶಕ್ತಿ ಇದೆ. ಅವರು ದೈಹಿಕವಾಗಿ ದೂರವಾಗಿರಬಹುದು. ಆದರೆ ಅವರ ಗಾಯನ ಪ್ರತಿನಿತ್ಯ ಎಲ್ಲರ ಮನಸ್ಸಿನಲ್ಲೂ ಮಿಗುನುಗುತ್ತಿರುತ್ತವೆ ಎಂದು ತಾಪಂ ಇಒ ರಾಮು ಅಗ್ನಿ ಹೇಳಿದರು.
ಸಿಂದಗಿ ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಈಚೆಗೆ ನಿಧನರಾದ ಬಹುಭಾಷೆ ಸಿನಿಮಾ ಹಿನ್ನೆಲೆ ಗಾಯಕಿ ಗಾನಕೋಗಿಲೆ ಎಸ್.ಜಾನಕಿ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತ ಸೇರಿದಂತೆ ವಿಶ್ವ ಕಂಡ ಈ ಶತಮಾನದ ಶ್ರೇಷ್ಠ ಗಾಯಕಿಯರಲ್ಲಿ ಎಸ್. ಜಾನಕಿ ಅಗ್ರಸ್ಥಾನದಲ್ಲಿದ್ದಾರೆ. ಸುಮಾರು ೧೬ಕ್ಕೂ ಅಧಿಕ ಭಾಷೆಗಳಲ್ಲಿ ೪೮ ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಅವರು, ಲತಾ ಮಂಗೇಶ್ಕರ್ ಅವರ ನಂತರ ವಿವಿಧ ಭಾಷೆಗಳಲ್ಲಿ ಅತಿ ಹೆಚ್ಚು ಹಾಡುಗಳನ್ನು ಹಾಡಿದ ಅಪರೂಪದ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ ಎಂದರು.
ಈ ವೇಳೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಸಿಂಪೀರ್ ವಾಲಿಕಾರ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಆನಂದ ಶಾಬಾದಿ ಹಾಗೂ ಸಾಹಿತಿ ಎಸ್.ಎಸ್.ಸಾತಿಹಾಳ ಮಾತನಾಡಿದರು. ಇದೇ ಸಮಯದಲ್ಲಿ ತಾಲೂಕು ಕಸಾಪ ಅಧ್ಯಕ್ಷ ವಾಯ್.ಸಿ.ಮಯೂರ ಪ್ರಾಸ್ತಾವಿಕ ಮಾತನಾಡಿದರು.
ಸಾಹಿತಿ ಶಾಂತ ಮೌಸಲಗಿ ಕವಿತೆ ವಾಚಿಸಿದರು. ಶಿಕ್ಷಕಿ ಶೈನಾಭಿ ಮಸಳಿ ಹಾಗೂ ಡಾ.ಪ್ರಕಾಶ ರಾಗರಂಜನಿ ಎಸ್.ಜಾನಕಿ ಅವರ ಗೀತೆಗಳನ್ನು ಹಾಡುವ ಮೂಲಕ ಭಾವಪೂರ್ಣ ನುಡಿ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ರಾಜಶೇಖರ ನರಗೋದಿ, ಸುನಂದಾ ಯಂಪುರೆ, ಅನುಸೂಯ ಪಾರಗೊಂಡ, ವರ್ಷಾ ಪಾಟೀಲ, ಶಾಂತು ರಾಣಾಗೋಳ, ಎಸ್.ಜಿ.ಪಾಟೀಲ, ಶಿವಕುಮಾರ ಶಿವಶಂಪಿಗೇರ, ಎಂ.ಆರ್.ಡೋಣಿ, ಜೈ ಭೀಮ್ ತಳಕೇರಿ ಸೇರಿದಂತೆ ಇತರರು ಇದ್ದರು.

