ಅವಳಿ ಜಿಲ್ಲೆಯ ರೈತರು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಹೋರಾಟ
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ತಾಲೂಕಿನ ಮಟ್ಟಿಹಾಳ ಕ್ರಾಸ್ನಲ್ಲಿರುವ ಮುಳವಾಡ ಏತ ನೀರಾವರಿಯ ಕಾರ್ಯಾಲಯಗಳ ಮುಂದೆ ಏತನೀರಾವರಿ ಯೋಜನೆಯ ಮೂಲಕ ಕಾಲುವೆಗಳಿಗೆ ಕೃಷ್ಣಾ ನದಿ ನೀರನ್ನು ಹರಿಸಬೇಕೆಂದು ಆಗ್ರಹಿಸಿ ಅವಳಿ ಜಿಲ್ಲೆಯ ರೈತರು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಅವರ ನೇತೃತ್ವದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹೋರಾಟ ಯಶಸ್ವಿಯಾಯಿತು.
ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆಯು ಅವಳಿ ಜಿಲ್ಲೆಯಲ್ಲಿ ಸಮರ್ಪಕವಾಗಿ ಮಳೆ ಪ್ರಮಾಣ ಅಧಿಕವಾಗದೇ ಇರುವದನ್ನು ಗಮನಿಸಿ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ ಎನ್ನುವ ಮುಂದಾಲೋಚನೆಯಿಂದ ಕಳೆದ ಒಂದು ವಾರದ ಹಿಂದೆ ಜುಲೈ ೧೪ ರೊಳಗಾಗಿ ಆಲಮಟ್ಟಿ ಆಣೆಕಟ್ಟಿನ ಹಿನ್ನೀರಿನಲ್ಲಿ ಬರುವ ಎಡದಂಡೆ ಮತ್ತು ಬಲದಂಡೆ ಕಾಲುವೆ ಮುಳವಾಡ ಏತ ನೀರಾವರಿಯ ಮೂರು ಹಂತದ ಕಾಲುವೆಗಳಲ್ಲಿ ಕೃಷ್ಣೆಯು ತುಂಬಿ ಹರಿಯುತ್ತಿರುವದರಿಂದ ಜನ ಜಾನುವಾರುಗಳಿಗೆ ರೈತರಿಗೆ ಅನುಕೂಲವಾಗಲು ನೀರನ್ನು ಬಿಡಬೇಕೆಂದು ಕರೆಕೊಟ್ಟಿದ್ದರು.
ಆದರೆ ೧೪ ರೊಳಗಾಗಿ ಸರಕಾರ ನೀರು ಬಿಡಲು ಹಿಂದೇಟು ಹಾಕಿದ ಪ್ರಯುಕ್ತ ಸಾವಿರಾರು ರೈತರೊಂದಿಗೆ ಮಟ್ಟಿಹಾಳ ಕ್ರಾಸ್ನಲ್ಲಿ ಸಭೆ ಸೇರಿದಾಗ ಸಭೆಯ ಉದ್ದೇಶವನ್ನು ಅರಿತ ಅಧಿಕಾರಿಗಳು ಮೇಲಾಧಿಕಾರಿಗಳ ಗಮನಕ್ಕೆ ತಂದು ಸರಕಾರದಿಂದ ಒಪ್ಪಿಗೆ ಪಡೆದು ಬಳೂತಿ ಜಾಕ್ವೆಲ್ನಿಂದ ಎರಡು ಪಂಪ್ಗಳ ಮೂಲಕ ಕಾಲುವೆಗೆ ನೀರನ್ನು ಹರಿಸಿದರು. ಅದರಂತೆ ಎಲ್ಲ ಕಾಲುವೆಗಳ ಮೂಲಕ ನೀರು ಬಿಡಲು ಸರಕಾರ ಸಮ್ಮತಿಯನ್ನು ಸೂಚಿಸಿದ್ದು ಸಂತಸದಾಯಕವಾದ ವಿಷಯವಾಗಿದೆ ಎಂದು ರೈತರು ಬೆಳ್ಳುಬ್ಬಿಯವರ ನೇತೃತ್ವದಲ್ಲಿ ನೀರು ಹರಿಯುವ ಕಾಲುವೆಗೆ ತೆರಳಿ ಗಂಗಾಮಾತೆಗೆ ಪೂಜೆ ಸಲ್ಲಿಸಿದರು.
ಕೃಷ್ಣಾ ನದಿಗೆ ತಡವಾಗಿ ನೀರು ಬಂದರೂ ಕಾಲುವೆಗೆ ನೀರು ಬಾರದೇ ಇರುವದು ರೈತರಲ್ಲಿ ಆತಂಕ ಮೂಡಿಸಿತ್ತು ಬೆಳೆದ ಬೆಳೆಗೆಳಿಗೆ ನೀರು ಇಲ್ಲದೇ ಇತ್ತ ಮಳೆಯೂ ಇಲ್ಲದೇ ಬೆಳೆಗಳು ಒಣಗುವ ಹಂತಕ್ಕೆ ಬಂದರೆ ಬಿತ್ತನೆ ಮಾಡಲು ಹದವಾದ ಭೂಮಿಗೆ ಮುಂದಾದ ರೈತರಿಗೆ ಕಾಲುವೆಯ ನೀರು ಆಸರೆಯಾಗಿತ್ತು. ಅಲ್ಲದೇ ಕುಡಿಯುವ ನೀರಿಗೂ ತೊಂದರೆ ಉಂಟಾಗುವದನ್ನು ಗಮನಿಸಿ ಭುಮಿ ಕಳೆದುಕೊಂಡ ರೈತರಿಗೆ ಅನ್ಯಾಯವಾಗುವದನ್ನು ತಪ್ಪಿಸಲು ಸ್ವತಃ ರೈತರಾದ ಎಸ್.ಕೆ. ಬೆಳ್ಳುಬ್ಬಿಯವರು ಮುಂದಾಳತ್ವ ವಹಿಸಿ ಕಾಲುವೆಗಳಿಗೆ ನೀರು ಬರುವಂತೆ ಮಾಡಿರುವದಕ್ಕೆ ರೈತರ ಮೊಗದಲ್ಲಿ ಮಂದಹಾಸ ಮೂಡಿತು.
ಉನ್ನತ ಮಟ್ಟದ ಅಧಿಕಾರಿಗಳು ಸರಕಾರ ಕಾಲುವೆಗಳಿಗೆ ನೀರು ಬಿಡಲು ಸಮ್ಮತಿ ಸೂಚಿಸಿ ಬಿಡುವ ನಿರ್ಧಾರ ಕೈಗೊಂಡಿರುವದಕ್ಕೆ ಎಸ್.ಕೆ. ಬೆಳ್ಳುಬ್ಬಿಯವರು ಸ್ವಾಗತಿಸಿದರು. ನೀರು ನಿರ್ವಹಣಾ ಸಲಹಾ ಸಮೀತಿಯ ಒಪ್ಪಿಗೆಯನ್ನು ಪಡೆದು ಕಾಲುವೆಗಳಿಗೆ ನೀರು ಹರಿಸುವ ನಿರ್ಧಾರದಿಂದ ಸರಕಾರ ಹಿಂದೆ ಸರಿಯಬೇಕು ಏಕೆಂದರೆ ಸಂತ್ರಸ್ತರ ತ್ಯಾಗದ ಪರಿಣಾಮವಾಗಿ ಭೂಮಿ ಕಳೆದುಕೊಂಡ ರೈತರ ವರದಾನದಿಂದ ಆಣೆಕಟ್ಟು ನೆಲೆ ನಿಂತಿದ್ದು ಇದಕ್ಕೆ ಈ ಭಾಗದ ರೈತರ ನಿರ್ಣಯ ಕೈಗೊಳ್ಳುವಂತಹ ಆದೇಶವಾಗಬೇಕು ನಿರ್ವಹಣಾ ಸಮೀತಿಯನ್ನು ಹೊರಗಿಟ್ಟಾಗ ಮಾತ್ರ ಅವಳಿ ಜಿಲ್ಲೆಯ ರೈತರಿಗೆ ಅನುಕೂಲವಾಗುವದು. ಇಲ್ಲದಿದ್ದರೆ ಸರಕಾರ ಯಾವಾಗ ನೀರು ಬಿಡುತ್ತದೆ ಎನ್ನುವದನ್ನು ಜಾತಕ ಪಕ್ಷಿಯಂತೆ ಕಾಯಬೇಕಾಗುತ್ತದೆ ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.
ಈ ಸಂದರ್ಭದಲ್ಲಿ ಆಸಂಗಿಯ ಜಗದೀಶ ಹಿರೇಮಠ, ಕೊಲ್ಹಾರದ ದಿಗಂಬರೇಶ್ವರ ಸಂಸ್ಥಾನ ಮಠದ ಕಲ್ಲಿನಾಥ ದೇವರು, ಶೀಲವಂತಹಿರೇಮಠದ ಕೈಲಾಸನಾಥ ಶ್ರೀಗಳು, ಬಿಜೆಪಿ ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿ, ಬಸವನ ಬಾಗೇವಾಡಿ ಮಂಡಲ ಅಧ್ಯಕ್ಷ ಸಿದ್ದರಾಮ ಕಾಖಂಡಕಿ, ಮಲ್ಲಿಕಾರ್ಜುನ ಬಿರಾದಾರ, ಶ್ರೀಶೈಲ ಓಡಗಲ್, ಸಂಗು ಪೂಜಾರಿ, ಜಿಲ್ಲಾ ನ್ಯಾಯವಾಧಿಗಳ ಸಂಘದ ಅಧ್ಯಕ್ಷ ಎ.ಟಿ. ಬಿರಾದಾರ, ಸಗರೆಪ್ಪ ಮುರನಾಳ, ಟಿ.ಟಿ. ಹಗೇದಾಳ, ಹಣಮಂತ ಕುಬಕಡ್ಡಿ, ಬಸವರಾಜ ಬಾಗೇವಾಡಿ, ಮುತ್ತು ಕಾಜಗಾರ, ರಾಜೇಶ್ವರಿ ಆಸಂಗಿ, ನಾಗರದಿನ್ನಿ, ಬಳೂತಿ, ಮಟ್ಟಿಹಾಳ, ಕೊಲ್ಹಾರ ಸುತ್ತಮುತ್ತಲಿನ ಗ್ರಾಮಗಳ ರೈತಮುಖಂಡರು ಭಾಗವಹಿಸಿದ್ದರು.

