ಅಂತರಸಂತೆ ಯುವಪಡೆಯ ಸಮಾಜಸೇವೆಗೆ ಡಿ.ಸುಂದರ್ ದಾಸ್ ಮೆಚ್ಚುಗೆ
ಉದಯರಶ್ಮಿ ದಿನಪತ್ರಿಕೆ
ಎಚ್ ಡಿ ಕೋಟೆ: ಅಂತರಸಂತೆ ಯುವಪಡೆಯು 4 ವರ್ಷಗಳಲ್ಲಿ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದೆ. ಅದರಲ್ಲಿಯೂ ಸಾವಿನ ಮನೆಗೆ ಸಾಂತ್ವನ ಎಂಬ ಕಾರ್ಯಕ್ರಮ ಆಯೋಜಿಸಿ ಗ್ರಾಮದಲ್ಲಿ ಯಾರ ಮನೆಯಲ್ಲಾದರೂ ಸಾವಾದರೆ ಆ ಮನೆಗೆ ಹೋಗಿ ಅಲ್ಲಿ ಒಂದಿಷ್ಟು ಸೇವಾ ಕಾರ್ಯದ ಜತೆಗೆ ಊಟದ ವ್ಯವಸ್ಥೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯ. ನಾನು ಇಂತಹ ಕಾರ್ಯಕ್ರಮವನ್ನು ಬೇರೆಲ್ಲೂ ನೋಡಿಲ್ಲ. ಇದು ಉತ್ತಮ ಕೆಲಸ ಎಂದು ಕರ್ನಾಟಕ ರಾಜ್ಯ ಬೀಜ ಹಾಗೂ ಸಾವಯವ ಪ್ರಮಾಣನ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ಕೆಪಿಸಿಸಿ ಸದಸ್ಯ ಡಿ.ಸುಂದರ್ ದಾಸ್ ಹೇಳಿದರು.
ತಾಲೂಕಿನ ಅಂತರಸಂತೆ ಗ್ರಾಮದಲ್ಲಿ ನಡೆದ ಅಂತರಸಂತೆ ಯುವಪಡೆಯ 5ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಯುವ ಸಂಘಟನೆ ಒಂದು ವಿಶೇಷ ಪಡೆಯಾಗಿದೆ. ಇಂತಹ ಸಂಘಟನೆ ಮತ್ತಷ್ಟು ವರ್ಷ ಮುಂದುವರಿಯಲಿ, ಜತೆಗೆ ಊರಿನ ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿರಲಿ ಎಂದು ಆಶಿಸಿದರು.
ನಿವೃತ್ತ ಮುಖ್ಯ ಶಿಕ್ಷಕ ಹೆತ್ತೇಗೌಡ ಮಾತನಾಡಿ, ಗ್ರಾಮದಲ್ಲಿ ಯುವಪಡೆ ಸಂಘಟನೆ ಸಕ್ರಿಯವಾಗಿರುವುದು ನಿಜಕ್ಕೂ ಹೆಮ್ಮೆಯ ವಿಚಾರ ಎಂದರು.
ಇದೇ ವೇಳೆ ಡಿ.ಸುಂದರ್ ದಾಸ್, ಹೆತ್ತೇಗೌಡ ಹಾಗೂ ಶ್ರೀ ಮಹದೇಶ್ವರಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷರಾದ ವಿ.ರಾಜಪ್ಪ ಅವರನ್ನು ಯುವಪಡೆಯ ವತಿಯಿಂದ ಸನ್ಮಾನಿಸಲಾಯಿತು.
ಬಳಿಕ 1ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಧಾರವಾಡ ಕರ್ನಾಟಕ ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮ ವಿಭಾಗದ ನಿವೃತ್ತ ಮುಖ್ಯಸ್ಥರಾದ ಡಾ.ಎ.ಎಸ್.ಬಾಲಸುಬ್ರಹ್ಮಣ್ಯ ಅವರು ತಮ್ಮ ತಂದೆ-ತಾಯಿ ದಿ.ಎ.ಎಸ್.ಸುಬ್ಬಣ್ಣ-ದಿ.ನಾಗಮ್ಮ ಹೆಸರಿನಲ್ಲಿ ಪ್ರತಿಭಾ ಪುರಸ್ಕಾರ ನೀಡಿದರು.
ಸಿಎ ವ್ಯಾಸಂಗ ಪೂರ್ಣಗೊಳಿಸಿದ ದರ್ಶನ್ ಹಾಗೂ ಬಾಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ವಿನಯ್ ಅವರನ್ನು ಅಭಿನಂದಿಸಲಾಯಿತು.
ಈ ಸಂದರ್ಭ ಯುವ ಮುಖಂಡ ನವೀನ್ ದಾಸ್, ಮೈಸೂರು ಜಿಲ್ಲಾ ಅಮರ ಶಿಲ್ಪಿ ವೇದಿಕೆ ಜಿಲ್ಲಾಧ್ಯಕ್ಷ ಮಹೇಶ್, ಮಹದೇಶ್ವರ ದೇವಸ್ಥಾನ ಸಮಿತಿ ಸಂಚಾಲಕ ಎ.ಪಿ.ಕೃಷ್ಣ, ರಾಜಣ್ಣ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವಿ.ನಾಗರಾಜು, ಬಿಜೆಪಿ ಮುಖಂಡ ಎಲ್ಐಸಿ ಸುಬ್ರಹ್ಮಣ್ಯ, ಪುಟ್ಟಸ್ವಾಮಪ್ಪ, ಎಸ್ ಡಿಎಂಸಿ ಅಧ್ಯಕ್ಷ ಸುಬ್ರಹ್ಮಣ್ಯ, ಅಭಾವೀಲಿಂ ಮಹಾಸಭಾ ಯುವಘಟಕದ ಮಾಜಿ ಅಧ್ಯಕ್ಷ ಅಭಿ ಅಂತರಸಂತೆ, ಮೋಹನ್ ಕುಮಾರ್, ದೇವಣ್ಣ, ಅರ್ಚಕ ಲೋಕೇಶ್, ಬಸವರಾಜು, ಸುರೇಂದ್ರ, ಸತೀಶ್, ಕುಮಾರ್, ಎಂ.ಜಯಣ್ಣ, ನಂದೀಶ್, ಆನಂದ, ಸುಬ್ರಹ್ಮಣ್ಯ ಸೇರಿದಂತೆ ಯುವಪಡೆಯ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.

