ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಹಾಗೂ ಸಾಹಿತಿ ಡಾ. ಸಿದ್ದು ಸಾವಳಸಂಗ ಅವರು ತಮ್ಮ ಮನೆಯಲ್ಲಿ ಸೋಮವಾರ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ತಮ್ಮ ಮೂರನೇ ಕವನ ಸಂಕಲನ “ಗೋಧೂಳಿ ಗಂಧ” ಕೃತಿ ಬಿಡುಗಡೆ ಮಾಡಿದರು.
ಪುಸ್ತಕ ಬಿಡುಗಡೆ ಮಾಡಿದ ಕಾವ್ಯಶ್ರೀ ಎಸ್.ಸಾವಳಸಂಗ ಮಾತನಾಡಿ, “ಗ್ರಂಥಗಳು ಅಮೂಲ್ಯ ಸಂಪತ್ತು ಇದ್ದಂತೆ. ಸಹೃದಯ ಓದುಗರು ಅವುಗಳನ್ನು ಕೊಂಡು ಓದಿ, ಲೇಖಕರಿಗೆ ಪ್ರೋತ್ಸಾಹಿಸಿ ತನ್ಮೂಲಕ ಕನ್ನಡ ಸಾಹಿತ್ಯವನ್ನು ಬೆಳೆಸಬೇಕು. ಕವಿ ಬರೆದ ಕೃತಿಗಳು ಜನಸಾಮಾನ್ಯರನ್ನು ತಲುಪಿದಾಗ ಮಾತ್ರ ಕವಿಯ ಬರವಣಿಗೆಯ ಶ್ರಮ ಸಾರ್ಥಕವಾಗುತ್ತದೆ” ಎಂದು ಹೇಳಿದರು.
ಕೃತಿಯ ಲೇಖಕ ಡಾ.ಸಿದ್ದು ಸಾವಳಸಂಗ ಸನ್ಮಾನ ಸ್ವೀಕರಿಸಿ ಮಾತನಾಡಿ, “ಗೋಧೂಳಿ ಗಂಧ ಇದು ನನ್ನ ಮೂರನೆಯ ಕವನ ಸಂಕಲನ. ಇದು ಅನೇಕ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತದೆ. ಗ್ರಂಥಗಳು ಕಪಾಟನ್ನು ಅಲಂಕರಿಸದೆ ಜನರ ಮನವನ್ನು ಮುಟ್ಟಬೇಕು ಹಾಗೂ ತಟ್ಟಬೇಕು. ಕವಿ ತನ್ನ ಮನಸ್ಸಿಗೆ ಹೊಳೆದದ್ದನ್ನು ಬರೆಯುತ್ತಾರೆ. ಆದರೆ ಅದರ ನಿಜವಾದ ವಿಮರ್ಶಕರೆಂದರೆ ಸಹೃದಯ ಓದುಗರು. ಅವರು ಓದಿ ಮೆಚ್ಚುಗೆ ಸೂಚಿಸಿದರೆ ಮಾತ್ರ ಅದು ಉತ್ತಮ ಕೃತಿ ಎನಿಸಿಕೊಳ್ಳಲು ಸಾಧ್ಯವಿದೆ” ಎಂದು ಹೇಳಿದರು.
ಶ್ರೀಮತಿ ಭಾರತಿ ಸಾವಳಸಂಗ, ಡಾ. ಸಿದ್ದು ಸಾವಳಸಂಗ, ಕಾವ್ಯಶ್ರೀ ಎಸ್. ಸಾವಳಸಂಗ, ಭೀಮರಾಯ ಸಾವಳಸಂಗ ಮತ್ತಿತರರಿದ್ದರು.

