ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಶಿವಾಜಿ ಗಲ್ಲಿಯಲ್ಲಿರುವ ಅಂಬಾಭವಾನಿ ದೇವಸ್ಥಾನದಲ್ಲಿ ನವರಾತ್ರಿ,ದಸರಾ ಹಬ್ಬದಂಗವಾಗಿ ಪ್ರತಿಷ್ಠಾಪಿಸಲಾಗುವ ದುರ್ಗಾಮಾತೆಯ ಮೂರ್ತಿ, ಅಂಬಾಭವಾನಿ ದೇವಿಯ ಪಲ್ಲಕ್ಕಿ ಉತ್ಸವ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗುರುವಾರ ಸಂಭ್ರಮ, ಸಡಗರದಿಂದ ಜರುಗಿತು.
ಪಟ್ಟಣದ ಅಂಬಾಭವಾನಿ ದೇವಸ್ಥಾನದ ಮುಂಭಾಗ ಬೆಳಗ್ಗೆ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿಯವರು ಪಲ್ಲಕ್ಕಿ ಉತ್ಸವ, ದುರ್ಗಾಮಾತೆಯ ಮೂರ್ತಿ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಸುರೇಶ ಹಾರಿವಾಳ, ರವಿಗೌಡ ಚಿಕ್ಕೊಂಡ, ಸಂಗಮೇಶ ಓಲೇಕಾರ, ಜಟ್ಟಿಂಗರಾಯ ಮಾಲಗಾರ, ರವಿ ಪಡಶೆಟ್ಟಿ, ಅಶೋಕ ಗುಳೇದ ಇತರರು ಇದ್ದರು.
ದೇವಸ್ಥಾನದಿಂದ ಆರಂಭವಾದ ಪಲ್ಲಕ್ಕಿ ಉತ್ಸವ, ದೇವಿ ಮೂರ್ತಿಯ ಮೆರವಣಿಗೆಯು ಗೌರಿ-ಶಂಕರ ದೇವಸ್ಥಾನ ರಸ್ತೆ, ಬಸವ ಜನ್ಮಸ್ಮಾರಕ ರಸ್ತೆ, ಪತ್ತಾರ ಗಲ್ಲಿ ಮೂಲಕ ಅಗಸಿ, ಬಸವೇಶ್ವರ ವೃತ್ತದ ಮಾರ್ಗವಾಗಿ ಬಸವೇಶ್ವರ ದೇವಸ್ಥಾನದ ಬಾವಿಯಲ್ಲಿ ಗಂಗ ಸ್ಥಳಕ್ಕೆ ತೆರಳಿತು. ಗಂಗಸ್ಥಳ ಪೂಜೆ ನೆರವೇರಿದ ನಂತರ ಉತ್ಸವದ ಮೆರವಣಿಗೆಯು ಬಸವೇಶ್ವರ ವೃತ್ತ, ಅಗಸಿ,ಗ್ರಾಮದೇವತೆ ದೇವಸ್ಥಾನದ ರಸ್ತೆ ಮಾರ್ಗವಾಗಿ ಶಿವಾಜಿ ಗಲ್ಲಿಯಲ್ಲಿರುವ ಅಂಬಾಭವಾನಿ ದೇವಸ್ಥಾನಕ್ಕೆ ಮರಳಿತು. ಪಲ್ಲಕ್ಕಿ ಉತ್ಸವ, ದೇವಿಯ ಮೂರ್ತಿಯ ಮೆರವಣಿಗೆಯಲ್ಲಿ ಕುಂಭ ಹೊತ್ತ ಮಹಿಳೆಯರು, ಆರತಿ ಹಿಡಿದ ಮಹಿಳೆಯರು ಸೇರಿದಂತೆ ಬದಾಮಿ ತಾಲೂಕಿನ ಸೋಮನಕೊಪ್ಪದ ಡೊಳ್ಳಿನ ಮೇಳ, ಕೊಣ್ಣೂರಿನ ಗೊಂಬೆ ಕುಣಿತ ಮೆರವಣಿಗೆಗೆ ಮೆರಗು ತಂದವು. ಮೆರವಣಿಗೆಯಲ್ಲಿ ಶಿವಾಜಿ ಮೂರ್ತಿ, ಬಸವೇಶ್ವರರ ಮೂರ್ತಿಗಳು ಇದ್ದವು.
ನವರಾತ್ರಿ, ದಸರಾ ಹಬ್ಬದಂಗವಾಗಿ ಅಂಬಾಭವಾನಿ ದೇವಸ್ಥಾನದಲ್ಲಿ ಬೆಳಗ್ಗೆ ರುದ್ರಾಭಿಷೇಕ, ವಿಶೇಷ ಪೂಜೆ ನೆರವೇರಿಸಲಾಯಿತು. ಜನರು ತಮ್ಮ ಕುಟುಂಬ ಸದಸ್ಯರೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ಅಂಬಾಭವಾನಿ ದೇವಿಯ ದರ್ಶನ ಪಡೆದುಕೊಂಡರು. ದಸರಾ ಹಬ್ಬದಂಗವಾಗಿ ರಾತ್ರಿ ದೇವಸ್ಥಾನದಲ್ಲಿ ಘಟ್ಟ ಸ್ಥಾಪಿಸಲಾಯಿತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನದಲ್ಲಿ ನಾಳೆಯಿಂದ ಸಂಜೆ 7 ಗಂಟೆಯಿಂದ ವಿವಿಧ ಸಾಂಸ್ಕ್ರತಿಕ, ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ದೇವಸ್ಥಾನ ಪದಾಧಿಕಾರಿಗಳು ಹೇಳಿದರು.
ಪಲ್ಲಕ್ಕಿ ಉತ್ಸವ, ದೇವಿ ಮೂರ್ತಿ ಮೆರವಣಿಗೆಯಲ್ಲಿ ಅಂಬಾಭವಾನಿ ದೇವಸ್ಥಾನದ ಕಮೀಟಿ ಅಧ್ಯಕ್ಷ ಯಮನೂರಿ ಬಿದರಕುಂದಿ, ಮರಾಠಾ ಸಮಾಜದ ತಾಲೂಕಾಧ್ಯಕ್ಷ ಬಸವರಾಜ ಬಿಜಾಪುರ, ಅಂಬೋಜಿ ಪವಾರ, ಅಂಬೋಜಿ ಬಿದರಕುಂದಿ, ಬಾಬು ನಿಕ್ಕಂ, ಅಶೋಕ ಬಿಜಾಪುರ, ಜಟ್ಟಿಂಗರಾಯ ಮಾಲಗಾರ, ಶಿವಾಜಿ ಜಗತಾಪ, ಶಿವಾನಂದ ಚವ್ಹಾಣ, ದಾಮಾಜಿ ಜಾಧವ, ಶಿವಾಜಿ ಹವಾಲ್ದಾರ, ಬಸವರಾಜ ತುಪ್ಪದ, ಮೋಹನ ಬಿಜಾಪುರ, ಮಾರುತಿ ಘಾಟಗೆ, ವಿಶಾಲ ಗಾಯಕವಾಡ, ಶಶಿ ದೇವಕರ, ಅರ್ಜುನ ಜಾಧವ, ಜಗದೀಶ ಬಿಜಾಪುರ, ಈರಪ್ಪ ಒಣರೊಟ್ಟಿ, ತುಕರಾಂ ಪವಾರ, ಪ್ರಕಾಶ ಮಾಲಗಾರ, ಶೇಖು ಪವಾರ, ಸುನೀಲ ಬೇದರಕರ, ಅಂಬವ್ವ ಬಿಜಾಪುರ, ಮಿತ್ರವ್ವ ಬಿದರಕುಂದಿ, ಚಂದ್ರವ್ವ ಸಿಂಧೆ, ತುಳಜಾಬಾಯಿ ಸಿಂಧೆ, ಶಕುಂತಲಾ ಬಿಜಾಪುರರ, ಪ್ರಿಯಾ ರಜಪೂತ, ರೂಪಾ ಜಾಧವ, ಸುಜಾತಾ ವಂದಾಲ, ಶೋಭಾ ಜಗತಾಪ, ಶಕುಂತಲಾ ನಿಕ್ಕಂ, ಶಾರದಾ ನಿಕ್ಕಂ, ಗೀತಾ ಪವಾರ, ಸುರೇಖಾ ಹುಣಶ್ಯಾಳ, ಭಾಗೀರಥಿ ಘಾಟಗೆ, ಶಾಂತಾಬಾಯಿ ಬಿಜಾಪುರ,ದೀಪಾ ಘಾಟಗೆ ಸೇರಿದಂತೆ ಇತರರು ಭಾಗವಹಿಸಿದ್ದರು.

