ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಇವಣಗಿ ಗ್ರಾಮದ ಆರಾಧ್ಯದೈವ ಲಕ್ಕಮ್ಮದೇವಿ ದೇವಸ್ಥಾನದ ಆವರಣದಲ್ಲಿ ಬುಧವಾರ ಇವಣಗಿ ಗ್ರಾಮದಲ್ಲಿ ನವೆಂಬರ್ ೧೩ ರಂದು ಜರುಗುವ ತಾಲೂಕು ೧೦ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಾಲಯವನ್ನು ಬಸವನಬಾಗೇವಾಡಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಕನ್ನಡ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ ನುಡಿಗಾಗಿ ಅನೇಕರು ಕೊಡುಗೆ ನೀಡಿದ್ದಾರೆ. ಕನ್ನಡ ಸಾಹಿತ್ಯವನ್ನು ಬೆಳೆಸುವ ಉದ್ದೇಶದಿಂದ ನಾಡಿನಲ್ಲಿ ಸಾಹಿತ್ಯ ಸಮ್ಮೇಳನಗಳು ನಿರಂತರವಾಗಿ ನಡೆಯುತ್ತಿವೆ. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಗ್ರಾಮೀಣ ಭಾಗದಲ್ಲಿ ತಾಲೂಕು ೧೦ ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಿದ್ದು ಶ್ಲಾಘನೀಯ. ನವೆಂಬರ್ ೧೩ ರಂದು ಜರುಗುವ ಈ ಸಮ್ಮೇಳನವನ್ನು ಎಲ್ಲ ಕನ್ನಡ ಮನಸ್ಸುಗಳು, ಸಾಹಿತಿಗಳು, ಗ್ರಾಮಸ್ಥರು ಸೇರಿಕೊಂಡು ಸಮ್ಮೇಳನವನ್ನು ಅಚ್ಚುಕಟ್ಟಾಗಿ ಐತಿಹಾಸಿಕ ಸಮ್ಮೇಳನವಾಗುವಂತೆ ಇಂದಿನಿಂದಲೇ ಸನ್ನದ್ಧರಾಗಬೇಕು. ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಯು ಪಾರದರ್ಶಕವಾಗಿರಬೇಕೆಂಬ ಆಶಯ ನಮ್ಮದಾಗಿದೆ. ಈ ಸಮ್ಮೇಳನದ ಯಶಸ್ವಿಗೆ ಎಲ್ಲರೂ ಸಹಕಾರ ನೀಡಬೇಕೆಂದರು.
ನರಲಸಗಿ ಗ್ರಾಮ ಪಂಚಾಯಿತಿ ಸದಸ್ಯ ಕಾಂತು ಹಿರೇಕುರಬರ ಮಾತನಾಡಿ, ಸಮ್ಮೇಳನದ ಯಶಸ್ವಿಗೆ ಎಲ್ಲ ರೀತಿಯ ಸಹಾಯ-ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ ಮಾತನಾಡಿದರು.
ಈ ಸಂದರ್ಭದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಡೋಣೂರ, ಸಿ.ಎಸ್.ಸುಭಾನಪ್ಪನವರ, ಶಿವಯ್ಯ ಹಿರೇಮಠ, ಎಂ.ಎನ್.ಅಂಗಡಗೇರಿ, ಬಸವರಾಜ ಮೇಟಿ, ಶರಣು ದಳವಾಯಿ, ಎಸ್.ಎಲ್.ಓಂಕಾರ, ಸಿದ್ದು ಬಾಗೇವಾಡಿ, ವೈ.ಎನ್.ಮಿಣಜಗಿ, ಶ್ರೀಶೈಲ ಶಿರಗುಪ್ಪಿ, ಬಂದೇನವಾಜ ವಾಲೀಕಾರ, ಬಿ.ಪಿ.ನಾಗಾವಿ, ಸುಭಾಸ ಹಡಪದ, ಕೊಟ್ರೇಶ ಹೆಗ್ಡಾಳ,ಸಿದ್ದಪ್ಪ ಅವಜಿ, ಬಿ.ಬಿ.ಚಿಂಚೋಳ್ಳಿ ಇತರರು ಇದ್ದರು. ಬಿ.ವ್ಹಿ.ಚಕ್ರಮನಿ ಸ್ವಾಗತಿಸಿ, ನಿರೂಪಿಸಿದರು. ಎಚ್.ಬಿ.ಬಾರಿಕಾಯಿ ವಂದಿಸಿದರು.
ಸಮ್ಮೇಳನದ ಸರ್ವಾಧ್ಯಕ್ಷತೆಗೆ ಅರ್ಜಿ ಆಹ್ವಾನ
ಇವಣಗಿ ಗ್ರಾಮದಲ್ಲಿ ನ.೧೩ ರಂದು ಜರುಗುವ ತಾಲೂಕು ೧೦ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನು ಪಾರದರ್ಶಕವಾಗಿ ಆಯ್ಕೆ ಮಾಡುವ ಉದ್ದೇಶದಿಂದ ತಾಲೂಕಿನಲ್ಲಿರುವ ಎಲ್ಲ ಸಾಹಿತಿಗಳಿಂದ, ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ ಮಹನೀಯರು ತಮ್ಮ ಪ್ರಕಟಿತ ಪುಸ್ತಕಗಳ ವಿವರ ಮಾಹಿತಿಯೊಂದಿಗೆ ಲಿಖಿತವಾಗಿ ತಮ್ಮ ಆಧಾರ ಕಾರ್ಡ್ ನಕಲು ಪ್ರತಿಯೊಂದಿಗೆ ಅಕ್ಟೋಬರ್ ೧೫ ರೊಳಗೆ ಶಿವಾನಂದ ಡೋಣೂರ, ತಾಲೂಕು ಕಸಾಪ ಅಧ್ಯಕ್ಷರು, ತಾಲೂಕು ೧೦ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಾಲಯ, ಇವಣಗಿ ಈ ವಿಳಾಸಕ್ಕೆ ಕಳುಹಿಸಬೇಕು.
ಹೆಚ್ಚಿನ ವಿವರಗಳಿಗೆ ಮೊ-೯೯೭೨೭೦೭೧೮೫,೯೯೦೦೭೬೨೧೪೬,೯೪೮೧೬೯೬೦೫,೯೭೪೨೬೫೨೦೪೩,೭೮೨೯೪೧೮೬೫೬,೯೯೦೦೯೮೪೮೫೬ ಸಂಖ್ಯೆಗಳಿಗೆ ಸಂಪರ್ಕಿಸಬೇಕೆಂದು ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಡೋಣೂರ ತಿಳಿಸಿದ್ದಾರೆ.

