ಅಕ್ಕಮಹಾದೇವಿ ವಿವಿ ದಲ್ಲಿ ‘ಹಿಂದಿ ಭಾಷೆ ಮತ್ತು ಉದ್ಯೋಗದ ನಿರೀಕ್ಷೆಗಳು’ ವಿಷಯದ ರಾಷ್ಟ್ರಮಟ್ಟದ ವಿಚಾರ ಸಂಕಿರಣ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹಿಂದಿ ಭಾಷೆಯು ದೇಶದಲ್ಲಿ ಪ್ರಮುಖ ಸ್ಥಾನವನ್ನು ಸಾಧಿಸಿದ್ದು, ಹಲವಾರು ಉದ್ಯೋಗಾವಕಾಶಗಳ ದಾರಿ ತೆರೆದಿದೆ. ಅನುವಾದ, ಮಾಧ್ಯಮ, ಶಿಕ್ಷಣ, ತಂತ್ರಜ್ಞಾನ, ಮತ್ತು ಬಾಹ್ಯ ಸಂಬಂಧಗಳ ಕ್ಷೇತ್ರದಲ್ಲಿ ಹಿಂದಿಯ ಜಾಗತಿಕ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಕುಲಸಚಿವ ಶಂಕರಗೌಡ ಸೋಮನಾಳ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಹಿಂದಿ ದಿನಾಚರಣೆಯ ಅಂಗವಾಗಿ ಸೋಮವಾರ ಆಯೋಜಿಸಿದ್ದ ‘ಹಿಂದಿ ಭಾಷೆ ಮತ್ತು ಉದ್ಯೋಗದ ನಿರೀಕ್ಷೆಗಳು’ ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಷ್ಟಭಾಷೆಯಾದ ಹಿಂದಿ ಮತ್ತು ಇತರ ಭಾಷೆಗಳನ್ನೂ ಗೌರವಿಸುವುದು ಅತಿ ಮುಖ್ಯ. ಭಾಷೆಯೇ ನಮ್ಮ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಐಕ್ಯತೆಯನ್ನು ಪ್ರತಿನಿಧಿಸುವುದು, ಹೀಗಾಗಿ ಇವುಗಳ ಮಹತ್ವವನ್ನು ಅರಿತುಕೊಳ್ಳಕೊಳ್ಳಬೇಕು ಎಂದರು.
ವಿಚಾರ ಸಂಕಿರಣ ಉದ್ಘಾಟಿಸಿದ ಮಹಾರಾಷ್ಟ್ರದ ಔರಂಗಬಾದನ ನಲದುರ್ಗಾ ವಿಶ್ವವಿದ್ಯಾಲಯದ ಪ್ರೊ. ಹಾಸಮ್ ಬೇಗ ಮಿರ್ಜಾ ಅವರು, ಹಿಂದಿ ಭಾಷೆ ಕೇವಲ ಸಾಹಿತ್ಯದ ಭಾಷೆಯಷ್ಟೇ ಅಲ್ಲ, ಇದು ಇಂದು ವಿಜ್ಞಾನ, ತಂತ್ರಜ್ಞಾನ, ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿಯೂ ಮಹತ್ವದ ಸ್ಥಾನ ಪಡೆದಿದೆ ಎಂದರು. ವಿದ್ಯಾರ್ಥಿಗಳು ಸ್ಥಳೀಯ ಭಾಷೆಯಲ್ಲಿಯೇ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅರಿಯಲು ಹಿಂದಿಯು ಸುಲಭವಾದ ಮಾಧ್ಯಮವಾಗಿದೆ ಎಂದು ಅವರು ಹೇಳಿದರು.
ವಿವಿಧ ವಿಶ್ವವಿದ್ಯಾನಿಲಯ ಮತ್ತು ಕಾಲೇಜುಗಳಿಂದ ವಿಷಯ ತಜ್ಞರು, ಸುಮಾರು ೪೦ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ವಿಚಾರ ಸಂಕಿರಣದಲ್ಲಿ ಪ್ರಸ್ತುತಪಡಿಸಿದರು. ಪ್ರೊ.ಬಸಿರುದ್ದಿನ್ ಎಮ್ ಮದರಿ, ಪ್ರೊ.ಆನಂದರಾವ ಸಿರೆಕರ್, ಕಲಾ ನಿಕಾಯದ ಡೀನ್ ಪ್ರೊ.ನಾಮದೇವ ಗೌಡ, ಡಾ.ಗುಲಾಬ ರಾಠೋಡ ಹಾಗೂ ಡಾ.ಅಮರನಾಥ ಪ್ರಜಾಪತಿ ಹಾಗೂ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಲಕ್ಷೀ ನಾಯಕ ಪ್ರಾರ್ಥನಾ ಗೀತೆಯನ್ನು ಹಾಡಿದರು. ಕಾರ್ಯಕ್ರಮದ ಸಂಯೋಜಕಿ ಪ್ರೊ.ರಾಜು ಎಸ್ ಬಾಗಲಕೋಟ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಸಂಶೋಧನಾ ವಿದ್ಯಾರ್ಥಿಗಳಾದ ಸ್ವಾಲಿಯಾ ಕೊಪ್ಪಳ, ಪಲ್ಲವಿ ಫತಾಟೆ, ಮಂಜುಳಾ ಬಿಸನಾಳ, ಡಾ.ಮೆಹರಾಜ ಬೇಗಂ ಸೈಯದ್ ಅವರು ಅತಿಥಿಗಳ ಪರಿಚಯಿಸಿದರು. ಸಂಶೋಧನಾ ವಿದ್ಯಾರ್ಥಿನಿ ಪದ್ಮಾಶ್ರೀ ಚೌಗಲೆ ನಿರೂಪಿಸಿದರು. ಡಾ.ಅಮರನಾಥ ಪ್ರಜಾಪತಿ ವಂದಿಸಿದರು.

