ರೂ.೧೪೫ ಕೋಟಿ ರೂ. ಪ್ರಸ್ಥಾವನೆ | ಮೊದಲ ಹಂತದಲ್ಲಿ ರೂ.೪೦ ಕೋಟಿ ಮಂಜೂರಾಗಿ ರೂ.೧೦ ಕೋಟಿ ಬಿಡುಗಡೆ B*
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪಟ್ಟಣದಲ್ಲಿ ಮಂಜೂರಾಗಿರುವ ತೋಟಗಾರಿಕೆ ಕಾಲೇಜು ಆರಂಭಕ್ಕೆ ೧೪೫ ಕೋಟಿ ರೂ. ಸರ್ಕಾರಕ್ಕೆ ಪ್ರಸ್ಥಾವನೆ ಮಾಡಿದ್ದು, ಮೊದಲ ಹಂತದಲ್ಲಿ ರೂ.೪೦ ಕೋಟಿ ಮಂಜೂರಾಗಿ ರೂ.೧೦ ಕೋಟಿ ಬಿಡುಗಡೆಗೊಳಿಸಿದ್ದಾರೆ, ಆದಷ್ಟು ಬೇಗ ಕಾಮಗಾರಿ ಆರಂಭಿಸಲಾಗುವುದು ಎಂದು ಬಾಗಲಕೋಟ ತೋಟಗಾರಿಕೆ ವಿಶ್ವ ವಿದ್ಯಾಲಯದ ಉಪ ಕುಲಪತಿ ವಿಷ್ಟುವರ್ಧನ ಹೇಳಿದರು.
ಬುಧವಾರ ತೋಟಗಾರಿಕೆ ವಿಶ್ವ ವಿದ್ಯಾಲಯದ ಉಪ ಕುಲಪತಿ ಹಾಗೂ ಅಧಿಕಾರಿಗಳು ಆಲಮೇಲದಲ್ಲಿ ಸ್ಥಳ ಪರಿಶೀಲಿಸಿ ನಂತರ ಮಾತನಾಡುತ್ತ ಹೇಳಿದರು.
ಕಾಲೇಜು ಆರಂಭಿಸಲು ಸರ್ಕಾರ ಅವಕಾಶ ನೀಡಿದ್ದರಿಂದ ತಾತ್ಕಾಲಿಕವಾಗಿ ಆಲಮೇಲ ತೋಟಗಾರಿಕೆ ಕಾಲೇಜಿನ ಹೆಸರಿನಲ್ಲಿ ಇದೆ ತಿಂಗಳು ಅಕ್ಟೋಬರ ೨೧ ರಂದು ಬಾಗಲಕೋಟ ತೋಟಗಾರಿಕೆ ಕಾಲೇಜಿನಲ್ಲಿ ತರಗತಿ ಆರಂಭವಾಗಲಿದೆ. ಅದಕ್ಕೆ ಮೊದಲ ವರ್ಷದಲ್ಲಿ ೨೫ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ನೀಡಿದ್ದು ವಿದ್ಯಾರ್ಥಿಗಳನ್ನು ಮೆರಿಟ್ ಮೇಲೆ ಪ್ರವೇಶ ಪಡೆದುಕೊಳ್ಳಲಿದ್ದಾರೆ ಎಂದರು.
ಆಲಮೇಲದಲ್ಲಿ ತೋಟಗಾರಿಕೆ ಕಾಲೇಜು ನಿರ್ಮಾಣಕ್ಕೆ ಸ್ಥಳಿಯ ಕೃಷಿ ಇಲಾಖೆಯಲ್ಲಿನ ೭೭.೩೩ ಎಕರೆ ಜಮಿನು ತೋಟಗಾರಿಕೆ ಇಲಾಖೆಗೆ ಹಸ್ತಾಂತರಿಸಿದ್ದು. ಆದಷ್ಟು ಬೇಗ ಕಟ್ಟಡ ಸೇರಿದಂತೆ ಮೂಲಭೂತ ಸೌಲಬ್ಯದ ಕಾಮಗಾರಿ ಆರಂಬಿಸಲಾಗುವದು. ಕಾಲೇಜು ನಿರ್ಮಾಣಕ್ಕೆ ಸರ್ಕಾರ ಸಮಯಕ್ಕೆ ಸರಿಯಾಗಿ ಅನುದಾನ ಬಿಡುಗಡೆಗೊಳಿಸಿದರೆ ೨ ವರ್ಷದಲ್ಲಿ ಆಲಮೇಲದಲ್ಲಿಯೇ ಕಾಲೇಜು ಆರಂಭಗೊಳ್ಳುವುದು ಎಂದು ಹೇಳಿದರು.
ತೋಟಗಾರಿಕೆ ವಿಶ್ವ ವಿದ್ಯಾಲಯದ ಅಧಿಕಾರಿಗಳಾದ ಮಹಾದೇವ ಮುರಗಿ, ಎಲ್.ಡಿ.ಆರ್ ಶಾಂತಪ್ಪ ಅಗಸಬಾಳ, ಇಂಡಿ ಉಪ ವಿಭಾಗಾಧಿಕಾರಿ ಅಭಿದ ಗದ್ಯಾಳ, ತಾಲೂಕು ತೋಟಗಾರಿಕೆ ಅಧಿಕಾರಿ ಎಸ್.ಎಸ್. ಪಾಟೀಲ, ಶರಣಗೌಡ ಪಾಟೀಲ, ತಹಶೀಲ್ದಾರ ವಿಜಯಕುಮಾರ, ಕೃಷಿ ಅಧಿಕಾರಿ ಇಂಗಳೆ, ಪ.ಪಂ ಅಧ್ಯಕ್ಷ ಸಾಧೀಕ ಸುಂಬಡ ಮುಂತಾದವರು ಇದ್ದರು.

” ಆಲಮೇಲ ಪಟ್ಟಣದಲ್ಲಿ ನಮ್ಮ ತಂದೆ ದಿ. ಎಂ.ಸಿ ಮನಗೋಳಿ ತೋಟಗಾರಿಕೆ ಸಚಿವರಾಗಿ ಆಲಮೇಲದಲ್ಲಿ ತೋಟಗಾರಿಕೆ ಕಾಲೇಜು ಮಂಜೂರು ಮಾಡಿಸಿದ್ದರು. ಅವರ ನಿಧನದಿಂದ ಮತ್ತು ಸರ್ಕಾರ ಬದಲಾಗಿದ್ದರಿಂದ ಕಾಲೇಜು ಸ್ತಗಿತಗೊಂಡಿತ್ತು. ಈ ಬಾಗದ ಜನತೆಯ ಒತ್ತಾಯದ ಮೇರೆಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ವಿನಂತಿಸಿದಾಗ ಎರಡನೇ ಬಾರಿಗೆ ಆಲಮೇಲದಲ್ಲಿ ತೋಟಗಾರಿಕೆ ಕಾಲೇಜು ಮಂಜುರು ಮಾಡಿ ಅದಕ್ಕೆ ಬೇಕಾದ ಅನುದಾನವು ಮಂಜುರು ಮಾಡಿದ್ದಾರೆ. ಆಲಮೇಲ ಭಾಗದಿಂದ ಮುಖ್ಯ ಮಂತ್ರಿಗಳಿಗೆ ಅಭಿನಂದಿಸುತ್ತೆನೆ.”
ಅಶೋಕ ಮನಗೂಳಿ
ಶಾಸಕರು, ಸಿಂದಗಿ

