ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಶ್ರಮದಾನ ಮಾಡುವ ಮೂಲಕ ಪಟ್ಟಣದ ಸುಂದರತೆಯನ್ನು ಹೆಚ್ಚಿಸಬಹುದು ಎಂಬ ಸಂದೇಶವನ್ನು ಬುಧವಾರ ಪೊಲೀಸರು ರವಾನಿಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ ನೇತೃತ್ವದಲ್ಲಿ ಬಿಳಿಯ ಬಣ್ಣದ ಟೀ ಶರ್ಟ, ನೀಲಿ ಬಣ್ಣದ ಟ್ರ್ಯಾಕ್ ಪ್ಯಾಂಟ್ ಮತ್ತು ಶೂ ಧರಿಸಿ ಅಖಾಡಕ್ಕಿಳಿದ ಸಿಬ್ಬಂದಿ ಮೂರು ಗಂಟೆಗಳಿಗೂ ಅಧಿಕ ಕಾಲ ಶ್ರಮದಾನ ಮಾಡಿ ಸಾರ್ವಜನಿಕರಿಗೆ ತಂಗಲು ಸುಂದರ ಆಸನಗಳ ವ್ಯವಸ್ಥೆ ಕಲ್ಪಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.
ಇವರ ಶ್ರಮದಾನಕ್ಕೆ ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ಮತ್ತು ಕಚೇರಿಯ ಸಿಬ್ಬಂದಿ ಪಟ್ಟಣದ ಮುಖಂಡರು ಸಾಥ್ ನೀಡಿದರು.
ಈ ವೇಳೆ ಸಿಪಿಐ ತುಳಸಿಗೇರಿ ಮಾತನಾಡಿ, ಪಟ್ಟಣದ ಸುಂದರತೆ ಹೆಚ್ಚಿಸಲು ಮೇಲಿಂದ ಮೇಲೆ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಪುರಸಭೆಯವರೇ ಮಾಡಲಿ ಎಂದು ಕಾಯುವ ಬದಲು ನಮ್ಮ ಕಾರ್ಯವನ್ನು ನಾವೇ ಮಾಡಿಕೊಳ್ಳಬೇಕು ಎನ್ನುವ ಭಾವನೆ ಸಾರ್ವಜನಿಕರಲ್ಲಿ ಬರಬೇಕು. ಎಲ್ಲಂದರಲ್ಲಿ ಕಸ ಬಿಸಾಡುವದು, ರಸ್ತೆಯನ್ನು ಅತಿಕ್ರಮಿಸಿ ಅನಧೀಕೃತವಾಗಿ ಡಬ್ಬಾ ಅಂಗಡಿಗಳನ್ನಿಟ್ಟು ವ್ಯಾಪಾರ ನಡೆಸುವದು ಮಾಡಬಾರದು. ಇದರಿಂದ ಪಟ್ಟಣದ ಸೌಂದರ್ಯ ಹಾಳಾಗುವದು ಮಾತ್ರವಲ್ಲದೇ ಅಪಘಾತಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ವಾಹನ ಸವಾರರೂ ಸಹ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸ್ಥಳ ಇದೆ ಅಂತಾ ಎಲ್ಲಂದರಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಬಾರದು. ಸಂಚಾರಿ ನಿಯಮಗಳನ್ನು ಪಾಲಿಸದೇ ಪೊಲೀಸರು ಹಾಕುವ ದಂಡಕ್ಕೆ ಅತಿಥಿಯಾಗಬಾರದು ಎಂದರು.
ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಮಾತನಾಡಿ, ಬರೀ ರಕ್ಷಣೆ ನೀಡುವ ಕಾರ್ಯ ಮಾತ್ರ ಪೊಲೀಸರದ್ದು ಅಂದುಕೊಂಡ ಸಾರ್ವಜನಿಕರಿಗೆ ಶ್ರಮದಾನ ಮಾಡುವ ಮೂಲಕ ಸದಾ ಸಾರ್ವಜನಿಕರ ಒಳಿತನ್ನು ಬಯಸುವವರು ಪೊಲೀಸರು ಎಂಬ ಸಂದೇಶವನ್ನು ರವಾನಿಸಿದ್ದಾರೆ. ಇಲ್ಲಿ ಸಾರ್ವಜನಿಕರಿಗೆ, ವಾಹನ ಸವಾರರಿಗೆ ಸಾಕಷ್ಟು ತೊಂದರೆಯಾಗಿತ್ತು. ಮೂರು ರಸ್ತೆ ಕೂಡುವ ವೃತ್ತ ಇದಾಗಿದ್ದರಿಂದ ಇಲ್ಲಿ ಕೂರಲು ಆಸನಗಳ ವ್ಯವಸ್ಥೆ ಬಹಳ ಅವಶ್ಯವಾಗಿತ್ತು. ಕೆಲವೇ ಘಂಟೆಗಳಲ್ಲಿ ಸಾರ್ವಜನಿಕರ ಅವಶ್ಯಕತೆ ಪೂರೈಸಿದ ಪೊಲೀಸರ ಕಾರ್ಯ ಶ್ಲಾಘನೀಯ ಎಂದರು.
ನಗರಾಭಿವೃದ್ಧಿ ಹೋರಾಟ ವೇದಿಕೆಯ ಸಂಚಾಲಕ ಬಸವರಾಜ ನಂದಿಕೇಶ್ವಮಠ, ಗಣ್ಯ ವ್ಯಾಪಾರಿ ವಿಕ್ರಂ ಓಸ್ವಾಲ ಮಾತನಾಡಿದರು.
ಪಿಎಸ್ಐ ಸಂಜಯ ತಿಪರೆಡ್ಡಿ, ಕ್ರೈಂ ಪಿಎಸ್ಐ ಆರ್.ಎಲ್.ಮನ್ನಾಬಾಯಿ, ಮುಖಂಡರಾದ ಸಂಗಣ್ಣ (ಜಿಟಿಸಿ), ಸರೇಶಗೌಡ ಪಾಟೀಲ, ಗೋಪಿ ಮಡಿವಾಳರ, ಪುರಸಭೆಯ ಎಸ್ಐಗಳಾದ ಮಹಾಂತೇಶ ಕಟ್ಟಿಮನಿ, ಜಾವೇದ ನಾಯ್ಕೋಡಿ, ಸೇರಿದಂತೆ ಪೊಲೀಸ್ ಸಿಬ್ಬಂದಿ, ಪುರಸಭೆ ಸಿಬ್ಬಂದಿ ಇದ್ದರು.

