2400 ಜನರಿಗೆ ಸ್ವಂತ ಖರ್ಚಿನಲ್ಲಿ ಉಚಿತ ಕಾಶಿ ಯಾತ್ರೆ ಮಾಡಿಸಿದ ಮುತ್ತಿನ ಸಹೋದರರು
ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಟಣದ ಪ್ರಸಿದ್ಧ ಜವಳಿ ವರ್ತಕರಾದ ಅಜಿತ ಮುತ್ತಿನ ಅವರು ಕಳೆದ ವಾರ 2400 ಜನರನ್ನು 1 ವಾರದ ಕಾಲ ತಮ್ಮ ಸ್ವಂತ ಖರ್ಚಿನಲ್ಲಿ ಕಾಶಿ ಯಾತ್ರೆಗೆ ಕರೆದುಕೊಂಡು ಯಶಸ್ವಿಯಾಗಿ ಹೋಗಿ ಬಂದ ಹಿನ್ನಲೆಯಲ್ಲಿ ಮುತ್ತಿನ ಸಹೋದರರ ಈ ಮಹತರ ನಿಸ್ವಾರ್ಥ ಸೇವೆಯನ್ನು ಕೊಂಡಾಡಿದ ಬ್ಯಾಂಕ್ ಆಫ್ ಬರೋಡ ಶಾಖೆ ನಿವರಗಿ ಸಿಬ್ಬಂದಿ ಅಜಿತ್ ಮುತ್ತಿನ ದಂಪತಿಗೆ ಸನ್ಮಾನಿಸಿ, ಗೌರವಿಸಿದರು.
ಕಳೆದ ಏಳೆಂಟು ವರ್ಷಗಳಿಂದ ಪ್ರಸಿದ್ಧ ಜವಳಿ ವ್ಯಾಪಾರಸ್ಥರಾದ ಮುತ್ತಿನ ಸಹೋದರರು ಉಚಿತ ಯಾತ್ರೆ ಕೈಗೊಳ್ಳುತ್ತಿದ್ದು, ಈ ಬಾರಿಯೂ ತಮ್ಮ ಸ್ವಂತ ಆದಾಯದಲ್ಲಿನ ಸುಮಾರು 2 ಕೋಟಿ ರೂ. ವೆಚ್ಚವನ್ನು ಭರಿಸಿ, ಉಚಿತವಾಗಿ ಒಂದು ವಾರದ ಕಾಶಿ ಯಾತ್ರೆ ಆಯೋಜಿಸಿದ್ದರು.
ಈ ಸಂದರ್ಭದಲ್ಲಿ ನಿವರಗಿಯ ಬ್ಯಾಂಕ್ ಆಫ್ ಬರೋಡ ಶಾಖಾ ವ್ಯವಸ್ಥಾಪಕರಾದ ಸಂತೋಷ ಹಿಟ್ನಳ್ಳಿ ಮಾತನಾಡಿ, ಇವರ ಸಮಾಜಮುಖಿ ಸೇವೆ ಎಲ್ಲರಿಗೂ ಮಾದರಿಯಾಗಿದೆ. ಅವರ ಸೇವಾ ಮನೋಭಾವ ಹೀಗೆ ಮುಂದುವರಿಯಲಿ ಎಂದರು.
ಈ ವೇಳೆ ಬ್ಯಾಂಕಿನ ಸಿಬ್ಬಂದಿ ವಿಜಯಕುಮಾರ್, ಜಗನ್ನಾಥ್, ಸಿದ್ದು ಆಲಮೇಲಕರ ಸೇರಿದಂತೆ
ಯಾತ್ರೆಯಲ್ಲಿ ಭಾಗವಹಿಸಿದ್ದ ಅನೇಕ ಯಾತ್ರಿಕರು ಉಪಸ್ಥಿತರಿದ್ದರು.

