ಉದಯರಶ್ಮಿ ದಿನಪತ್ರಿಕೆ
ಇಂಡಿ: ಉತ್ತರ ಕರ್ನಾಟಕದ ದಸರಾ ಎಂದೇ ಈ ಭಾಗದಲ್ಲಿ ಖ್ಯಾತಿಯಾಗಿರುವ ತಾಲ್ಲೂಕಿನ ತಾಂಬಾ ನಾಡದೇವಿ ಉತ್ಸವಕ್ಕೆ ಅಪಾರ ಜನಸ್ತೋಮದ ಸಮ್ಮುಖ, ಗುರುವಾರ ಸಿಂದಗಿ ಶಾಸಕ ಅಶೋಕ ಮನಗೂಳಿ ಅಧ್ಯಕ್ಷತೆಯಲ್ಲಿ ಬಹು ವಿಜೃಂಭಣೆಯಿಂದ ಜರುಗಲಿದೆ.
ಜಿಲ್ಲೆಯ ಗ್ರಾಮೀಣ ಪರಿಸರದಲ್ಲಿ ನಡೆಯುವ ವೈಭವದ ದಸರಾ ಉತ್ಸವಗಳಲ್ಲಿ ತಾಂಬಾ ನಾಡದೇವಿ ಉತ್ಸವ ಮೊದಲ ಸ್ಥಾನ ಪಡೆದಿದೆ. ೫೩ ವರ್ಷ ಗಳಿಂದ ಈ ಉತ್ಸವ ಗ್ರಾಮದಲ್ಲಿ ಆಯೋಜನೆಗೊಳ್ಳುತ್ತಿರುವುದು ವಿಶೇಷ. ಶ್ರೀ ಜಗದಂಬಾ ವಿದ್ಯಾವರ್ಧಕ ಸಂಘ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ದಿ. ಪೂಲಸಿಂಗ್ ಚವ್ಹಾಣ ಆರಂಭಿಸಿದ ನಾಡದೇವಿ ಉತ್ಸವವನ್ನು ಇದೀಗ ಪುತ್ರರಾದ ನಾಗಠಾಣ ಮಾಜಿ ಶಾಸಕ ದೇವಾನಂದ ಎಫ್ ಚವ್ಹಾಣ ಮತ್ತು ಜಗದಂಬಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರವಿಕುಮಾರ ಚವ್ಹಾಣಮುಂದುವರೆಸಿಕೊಂಡು ಬಂದಿದ್ದಾರೆ. ವರ್ಷದಿಂದ ವರ್ಷಕ್ಕೆ ಉತ್ಸವದ ವಿಜೃಂಭಣೆ ಹೆಚ್ಚುತ್ತಿದೆ. ಮೈಸೂರ ದಸರಾ ವೀಕ್ಷಿಸಲು ಸಾಧ್ಯವಾಗದ ಗ್ರಾಮೀಣ ಜನರು ತಾಂಬಾ ನಾಡದೇವಿ ಉತ್ಸವವನ್ನೇ ಕಣ್ತುಂಬಿಕೊಳ್ಳುವುದು ವಿಶೇಷ.
ಕಲಾವಿದರ ಮೆರುಗು ಇದೇ ೦೩ರದ್ದು ಗುರುವಾರ ನಡೆಯಲಿರುವ ನಾಡದೇವಿ ದಸರಾ ಉತ್ತವದ ಉದ್ಘಾಟನಾ ಸಮಾರಂಭದ ಮೆರವಣಿಗೆಯಲ್ಲಿ ನಾಡಿನ ವಿವಿಧ ಭಾಗದ ಕಲಾವಿದರು ಭಾಗಿಯಾಗಿ ತಮ್ಮ ಕಲೆ ಪ್ರದರ್ಶಿಸಿಲಿದ್ದಾರೆ. ೧೫೦೧ ಕ್ಕೂ ಹೆಚ್ಚು ಮಹಿಳೆಯರು ಪೂರ್ಣ ಕುಂಭ ಹೊತ್ತು ಮೆರವಣೆಗೆಯ ಮೆರುಗು ಹೆಚ್ಚಿಸಲಿದ್ದಾರೆ. ಇದಕ್ಕೆ ಪೂರಕವಾಗಿ ಕುದುರೆ ಮೆರವಣಿಗೆ, ಯಕ್ಷಗಾನ, ಡೊಳ್ಳು ವಾದನ, ಗೊಂಬೆಗಳ ಕುಣಿತ, ಕೀಲು ಕುದುರೆ ಕುಣಿತ, ಬಂಜಾರಾ ಕಲೆಯ ನೃತ್ಯ, ಡೊಳ್ಳು ಕುಣಿತ, ಝಂಜ್ ಮೇಳ, ಲೇಜಿಮ್ ಸೇರಿದಂತೆ ವಿವಿಧ ಕಲೆ ಪ್ರದರ್ಶಿಸುವ ತಂಡಗಳು ಈಗಾಗಲೇ ಗ್ರಾಮದಲ್ಲಿ ಬೀಡು ಬಿಟ್ಟಿವೆ. ಎರಡು ಕಿ.ಮೀ. ದೂರದ ಮೆರವಣಿಗೆ ಕಣ್ತುಂಬಿಕೊಳ್ಳುವುದೇ ಒಂದು ಅನಂದ.

” ನಂಬಿದ ಭಕ್ತರನ್ನು ನಿತ್ಯವೂ ಪರಿಪಾಲಿಸಿ ಇಷ್ಟಾರ್ಥಗಳನ್ನು ಈಡೇರಿಸಿ ಕಾಪಾಡುವ ಜಗನ್ಮಾತೆಯ ನವರಾತ್ರಿ ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಜಗನ್ಮಾತೆಯ ಕೃಪಾಶೀರ್ವಾದಕ್ಕೆ ಪಾತ್ರರಾಗಲು ವಿನಂತಿ.”
– ದೇವಾನಂದ ಚವ್ಹಾಣ
ನಾಗಠಾಣ ಮಾಜಿ ಶಾಸಕರು
” ಈ ನವರಾತ್ರಿಯ ಒಂಭತ್ತು ದಿನಗಳ ಕಾಲ ಅನ್ನ ಸಂತರ್ಪಣೆ, ಪ್ರತಿನಿತ್ಯವೂ ಅಂತರಾಜ್ಯ ಮಟ್ಟದ ಪುರುಷ ಮತ್ತು ಮಹಿಳೆಯರ ಕಬಡ್ಡಿ ಪಂದ್ಯಾವಳಿ, ಜಿಲ್ಲಾ ಮಟ್ಟದ ಮುಕ್ತ ಪುರುಷ ಮತ್ತು ಮಹಿಳೆಯರ ಖೋ ಖೋ ಪಂದ್ಯಾವಳಿ, ಕೋಲಾಟ ಸ್ಪರ್ದೆ, ಪುರುಷರಿಗಾಗಿ ಹಗ್ಗ ಜಗ್ಗಾಟ ಮತ್ತು ಸ್ಲೋ ಸೈಕ್ಲಿಂಗ್ ಸ್ಪರ್ದೆಗಳು, ರಂಗೋಲಿ ಸ್ಪರ್ಧೆ, ಚತ್ರಕಲೆ, ನೃತ್ಯ ಸ್ಪರ್ಧೆ ಸಹ ನಡೆಯಲಿವೆ. ಈ ಸಂದರ್ಭದಲ್ಲಿ ಕೃಷಿ ಮೇಳವೂ ಜರುಗಲಿದೆ. ಜಿಲ್ಲೆಯಲ್ಲಿ ಹಲವಾರು ಕ್ಷೇತ್ರಗಳಲ್ಲಿ ಸಾಧನೆಗೈದ ವಿವಿಧ ಮಹನಿಯರಿಗೆ ಗೌರವ ದ್ಯೋತಕವಾಗಿ ಸನ್ಮಾನ ಮಾಡಿದ ಕೀರ್ತಿ ನಾಗಠಾಣ ಮಾಜಿ ಶಾಸಕ ದೇವಾನಂದ ಎಫ್ ಚವ್ಹಾಣ ಹಾಗೂ ಶ್ರೀ ಜಗದಂಬಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರವಿಕುಮಾರ ಚವ್ಹಾಣ ರವರಿಗೆ ಸಲ್ಲುತ್ತದೆ. ಅವರ ಸಾಮಾಜಿಕ ಕಳಕಳಿ ಜನಪರ ಕೆಲಸ ಕಾರ್ಯಗಳನ್ನು ಮಾಡುತ್ತಾ ಎಲ್ಲ ಸಮುದಾಯಗಳ ಪ್ರೀತಿಗೆ ಪಾತ್ರರಾಗಿದ್ದಾರೆ.”
ಸಿದ್ದು ಹತ್ತಳ್ಳಿ
ತಾಂಬಾ ಗ್ರಾಮದ ನಿವಾಸಿ

