ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶಾಸಕ ಅಪ್ಪಾಜಿ ನಾಡಗೌಡ ಸಲಹೆ
ಉದಯರಶ್ಮಿ ದಿನಪತ್ರಿಕೆ
ತಾಳಿಕೋಟಿ: ಕನ್ನಡ ಭಾಷೆ ಜೀವಂತ ಭಾಷೆಯಾಗಿದ್ದು ಬದುಕು ಕಟ್ಟಿಕೊಡುವ ಭಾಷೆಯಾಗಿದೆ. ಅದರೊಂದಿಗೆ ನಮ್ಮ ಪರಂಪರೆ ಸಂಸ್ಕೃತಿ ಬೆಸೆದುಕೊಂಡಿದೆ. ಅದು ನಮ್ಮೆಲ್ಲರ ಉಸಿರಾಗಬೇಕು. ಅದರ ಕುರಿತು ಇರುವ ಅಭಿಮಾನ ಒಂದು ದಿನಕ್ಕೆ ಸೀಮಿತ ಬೇಡ ಎಂದು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ, ಶಾಸಕ ಅಪ್ಪಾಜಿ ನಾಡಗೌಡ ಹೇಳಿದರು.
ಮಂಗಳವಾರ ಪಟ್ಟಣದ ಶ್ರೀ ಸಂಗಮೇಶ್ವರ ಸಭಾಭವನದಲ್ಲಿ ಕಸಾಪ ತಾಲೂಕ ಘಟಕ ಹಮ್ಮಿಕೊಂಡ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮ್ಮೇಳನಗಳು ಸಾಮಾಜಿಕ ಬದಲಾವಣೆಗೆ ಪೂರಕವಾಗಬೇಕು. ಸಮಾಜದಲ್ಲಿ ಹಲವಾರು ಗಂಭೀರ ಸಮಸ್ಯೆಗಳಿವೆ, ಜನರ ಮಧ್ಯೆ ಗೋಡೆಗಳನ್ನು ನಿರ್ಮಿಸುವ ಕೆಲಸ ಕೆಲವರು ಮಾಡುತ್ತಿದ್ದಾರೆ, ಈ ಸಮ್ಮೇಳನದಿಂದ ಎಲ್ಲರ ಮನಸ್ಸುಗಳನ್ನು ಜೋಡಿಸುವ ಕಾರ್ಯ ಆಗಬೇಕು ಎಂದ ಅವರು, ಐತಿಹಾಸಿಕ ಸಮ್ಮೇಳನವಾಗಿಸಲು ಶ್ರಮಿಸಿದ ಎಲ್ಲರಿಗೂ ಅಭಿನಂದಿಸುತ್ತೇನೆ ಎಂದರು.
ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಮಾತನಾಡಿ, ನಾಡಿನ ನೆಲ ಜಲ ಭಾಷೆಯ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ ಇಂಥಹ ಸಮ್ಮೇಳನಗಳನ್ನು ಹೆಚ್ಚು ಹೆಚ್ಚಾಗಿ ಹಮ್ಮಿಕೊಂಡು ಕನ್ನಡ ಭಾಷೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು ಸಮ್ಮೇಳನವನ್ನು ಅದ್ಭುತವಾಗಿ ಸಂಘಟಿಸಲಾಗಿದೆ ನಿಮಗೆಲ್ಲರಿಗೂ ಧನ್ಯವಾದಗಳು ತಿಳಿಸುತ್ತೇನೆ ಎಂದರು.
ಕಸಾಪ ತಾಲೂಕ ಅಧ್ಯಕ್ಷ ರೇವಣಸಿದ್ದಪ್ಪ ಕೊಪ್ಪದ ಪ್ರಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಸಾನಿಧ್ಯವನ್ನು ಕಲಿಕೇರಿಯ ಸಿದ್ದರಾಮ ಶಿವಾಚಾರ್ಯರು,ಹೂ.ಹಿಪ್ಪರಗಿ ಪತ್ರಿ ಮಠದ ಪೂಜ್ಯ ದ್ರಾಕ್ಷಾಯಿಣಿ ಮಾತಾಜಿ, ಮುಸ್ಲಿಂ ಧಾರ್ಮಿಕ ಮುಖಂಡ ಸಯ್ಯದ ಶಕೀಲ ಅಹಮದ್ ಖಾಜಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ತಹಸಿಲ್ದಾರ್ ಕೀರ್ತಿ ಚಾಲಕ್, ಬಿಇಓ.ಬಿ.ಎಸ್.ಸಾವಳಗಿ, ತಾಪಂ ಇಒ ಎಸ್.ಎಸ್ ಮಸಳಿ, ಸಿಒ ಮೋಹನ ಜಾಧವ, ಎಚ್.ಎಸ್.ಪಾಟೀಲ, ಸುಮಂಗಲಾ ಕೋಳೂರ, ಬಿ.ಎಸ್. ಪಾಟೀಲ ಯಾಳಗಿ, ಎಸ್.ಬಿ. ಕಟ್ಟಿಮನಿ, ಕಾಸಿಂ ಪಟೇಲ ಪಾಟೀಲ, ಎಂ.ಎಂ.ಬಿರಾದಾರ, ಶಿವಾನಂದ ಗೆಣ್ಣೂರ ಇದ್ದರು.
ಕಾರ್ಯಕ್ರಮದ ಸಾನಿಧ್ಯವನ್ನು ರಾಜೇಂದ್ರ ಒಡೆಯರ್ ಶಿವಾಚಾರ್ಯರು, ಜ್ಯೋತಿಷ್ಯ ರತ್ನ ರಾಮಲಿಂಗಯ್ಯ ಮಹಾಸ್ವಾಮಿಗಳು ವಹಿಸಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಚಾಲನೆ ನೀಡಿದರು. ಎಂ.ಕೆ. ಚೌರಗಸ್ತಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ, ಪುರಸಭೆ ಸದಸ್ಯರಿಗೆ ಹಾಗೂ ಪತ್ರಕರ್ತರಿಗೆ ಪರಿಷತ್ತಿನ ವತಿಯಿಂದ ಗೌರವ ಪುರಸ್ಕಾರ ನೀಡಲಾಯಿತು.
ವೇದಿಕೆಯಲ್ಲಿ ಕವಿ ಗೋಷ್ಠಿ. ಮಹಿಳಾ ಗೋಷ್ಠಿ ಹಾಗೂ ಜಾನಪದ ಗೋಷ್ಠಿಗಳು ಹಾಗೂ ಸಂಜೆಗೆ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಪರಿಷತ್ತಿನ ಎಲ್ಲ ಪದಾಧಿಕಾರಿಗಳು ಹಾಗೂ ಕನ್ನಡ ಅಭಿಮಾನಿಗಳು, ಉಪಸ್ಥಿತರಿದ್ದರು.
ಕನ್ನಡವನ್ನೇ ಬಳಸುವ ಸಂಕಲ್ಪ ಮಾಡಿ
” ಕನ್ನಡ ಭಾಷೆ ಜಗತ್ತಿನ ಶ್ರೀಮಂತ ಭಾಷೆಯಾಗಿದೆ. ಅದನ್ನು ರಕ್ಷಿಸಿ ಬೆಳೆಸುವ ಕಾರ್ಯ ಪ್ರತಿಯೊಬ್ಬರದ್ದಾಗಿದೆ. ನಮ್ಮೆಲ್ಲರ ಅಗತ್ಯಗಳಿಗೆ ಆದಷ್ಟು ಕನ್ನಡವನ್ನೇ ಬಳಸುವ ಬೆಳೆಸುವ ಸಂಕಲ್ಪ ನಾವೆಲ್ಲರೂ ಮಾಡಬೇಕು. ಕನ್ನಡ ಉಳಿದರೆ ಕನ್ನಡಿಗರು ಕನ್ನಡ ನಾಡು ಸಂಸ್ಕೃತಿ ಉಳಿಯುತ್ತದೆ. ನನ್ನ ಅಳಿಲು ಸೇವೆಯನ್ನು ಗುರುತಿಸಿ ಸರ್ವಾಧ್ಯಕ್ಷನನ್ನಾಗಿ ಮಾಡಿದಕ್ಕಾಗಿ ನಿಮಗೆಲ್ಲರಿಗೂ ಋಣಿಯಾಗಿರುವೆ.”
– ಡಾ.ಗುರುಪಾದ ಘಿವಾರಿ
ಸಮ್ಮೇಳನ ಸರ್ವಾಧ್ಯಕ್ಷರು

ಸರ್ವಾಧ್ಯಕ್ಷರ ಭವ್ಯ ಮೆರವಣಿಗೆ
ಕಾರ್ಯಕ್ರಮಕ್ಕೆ ಮುನ್ನ ಸಮ್ಮೇಳನ ಸರ್ವಾಧ್ಯಕ್ಷ ಡಾ. ಗುರುಪಾದ ಘಿವಾರಿ ಅವರ ಭವ್ಯ ಮೆರವಣಿಗೆ ಸಕಲ ವಾದ್ಯ ಮೇಳಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು.
ಪಟ್ಟಣದ ಪ್ರವಾಸಿ ಮಂದಿರದ ಹತ್ತಿರ ನಡೆದ ಮೆರವಣಿಗೆ ಚಾಲನೆ ಕಾರ್ಯಕ್ರಮದ ಸಾನಿಧ್ಯವನ್ನು ನಾವದಗಿಯ ಬೃಹನ್ ಮಠದ ರಾಜೇಂದ್ರ ಒಡೆಯರ್ ಶಿವಾಚಾರ್ಯರು ಹಾಗೂ ರಾಮಲಿಂಗಯ್ಯ ಮಹಾಸ್ವಾಮಿಗಳು ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಪುರಸಭೆ ಸದಸ್ಯರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ವಿವಿಧ ಪಕ್ಷಗಳ ಮುಖಂಡರು, ಶಾಲಾ ವಿದ್ಯಾರ್ಥಿಗಳು ಹಾಗೂ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

