ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಹುಣಶ್ಯಾಳ ಪಿ.ಬಿ ಗ್ರಾಮದಲ್ಲಿ ಅ.3 ರಿಂದ ಅ.14 ರ ವರೆಗೆ ಹಮ್ಮಿಕೊಂಡಿರುವ ನವರಾತ್ರೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಗ್ರಾಮದ ಹಿರೇಮಠದ ಆನಂದ ದೇವರು ಹೇಳಿದರು.
ಪಟ್ಟಣದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನವರಾತ್ರೋತ್ಸವ ಕಾರ್ಯಕ್ರಮದ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ತಾಲೂಕಿನ 27 ಗ್ರಾಮಗಳಲ್ಲಿ ಜನಜಾಗೃತಿ ಸೇವಾ ಯಾತ್ರೆಯ ಮೂಲಕ ಜಾಗೃತಿ ಮೂಡಿಸಲಾಗಿದೆ. ಪ್ರತಿ ಗ್ರಾಮದಲ್ಲಿ 5 ದಿನಗಳವರೆಗೆ ಪ್ರವಚನ, ಗ್ರಾಮಸ್ಥರಿಗೆ ರುದ್ರಾಕ್ಷಿ ಧಾರಣೆ, ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನವರಾತ್ರೋತ್ಸವ ಉತ್ಸವದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಯುವಕರು ತಂದೆ-ತಾಯಿ, ಗುರು-ಹಿರಿಯರನ್ನು ಗೌರವದಿಂದ ಕಾಣಬೇಕು. ಉತ್ತಮ ಸಂಸ್ಕಾರ ಪಡೆದುಕೊಂಡು ಸಮಾಜಕ್ಕೆ ಕೊಡುಗೆ ನೀಡುವವರಾಗಬೇಕು ಎಂದು ಹೇಳಿದರು.
ವೀರಬಸವ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿ ಜೀವನ ಅತ್ಯಂತ ಸುಂದರವಾದುದು. ಏಕಾಗ್ರತೆಯಿಂದ ನಿರಂತರ ಅಧ್ಯಯನದಲ್ಲಿ ತೊಡಗಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದರೆ ಉತ್ತಮ ಉದ್ಯೋಗ ಆಯ್ಕೆಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಆಗ ಬಂಗಾರದಂತಹ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಯುವಕರಿಗೆ ಆಧ್ಮಾತ್ಮಿಕ ವಿಚಾರಗಳನ್ನು ತಿಳಿಸುವುದಕ್ಕಾಗಿ, ದುಶ್ಚಟಗಳನ್ನು ಹೋಗಲಾಡಿಸಿ ಉತ್ತಮ ಸಂಸ್ಕಾರದ ಮಹತ್ವ ತಿಳಿಸುವುದಕ್ಕಾಗಿ ತಾಲ್ಲೂಕಿನಲ್ಲಿ ಸದೃಢ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿ ಸೇವಾ ಯಾತ್ರೆ ಆನಂದ ದೇವರು ಹಮ್ಮಿಕೊಂಡಿದ್ದರು ಎಂದು ಹೇಳಿದರು.
ಪ್ರಾಚಾರ್ಯ ಎಸ್.ಡಿ.ಪಾಟೀಲ ಮಾತನಾಡಿದರು.
ಶಿಕ್ಷಕ ಎಚ್.ಬಿ.ಬಾರಿಕಾಯಿ, ಶಿವು ಮಡಿಕೇಶ್ವರ, ಉಪನ್ಯಾಸಕರಾದ ಎಸ್.ಬಿ.ಡೋಮನಾಳ, ಎಸ್.ಎಸ್.ಸಜ್ಜನ, ರಾಜಕುಮಾರ ಮುರಗೋಡ, ಮಹಾನಂದ ನಾಯಕ, ಎಚ್.ಬಿ.ಬಿರಾದಾರ, ಕಾಶೀನಾಥ ಅವಟಿ ಇತರರು ಇದ್ದರು.

