ಬಾಲಮಂದಿರ ಮಕ್ಕಳಿಗಾಗಿ ಬಾಲ ವಿಕಾಸ ಅಕಾಡೆಮಿ ಆಯೋಜಿಸಿದ ೨ನೇ ಹಂತದ ರಾಜ್ಯಮಟ್ಟದ ಕಥಾ ಕಮ್ಮಟಕ್ಕೆ ಚಾಲನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಕ್ಕಳ ಸೇವೆಯಲ್ಲಿ ಭಗವಂತನನ್ನು ಕಾಣುವ, ಮಕ್ಕಳ ಬಗೆಗೆ ಅಪಾರ ಕಾಳಜಿ ಕಕ್ಕುಲತೆಯನ್ನು ಹೊಂದಿರುವ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಅವರ ಕಾರ್ಯ ಅನನ್ಯವಾದದ್ದು. ನಾಡಿನ ಬಾಲಮಂದಿರದ ಮಕ್ಕಳನ್ನು ನಿಸರ್ಗದ ಮಡಿಲಿನಲ್ಲಿ ಕರೆತಂದು, ಮಕ್ಕಳ ಸೃಜನಶೀಲ ವ್ಯಕ್ತಿತ್ವ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಸಂಗಮೇಶ ಅವರಿಗೆ ದೇವರು ಇನ್ನಷ್ಟು ಶಕ್ತಿಯನ್ನು, ಅಧಿಕಾರವನ್ನು ನೀಡಲಿ ಎಂದು ಧಾರವಾಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಶ್ರೀಮತಿ ಗೀತಾ ಸಿ.ಡಿ ಹೇಳಿದರು.
ಹಳ್ಳಿಗೇರಿ ಹತ್ತಿರವಿರುವ ನೇಚರ್ ಫಸ್ಟ್ ಇಕೋ ವಿಲೇಜ್ ರೆಸಾರ್ಟ್ ನಲ್ಲಿ ಹತ್ತು ಜಿಲ್ಲೆಗಳಿಂದ ಆಗಮಿಸಿರುವ ಬಾಲಮಂದಿರದ ಮಕ್ಕಳಿಗಾಗಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಆಯೋಜಿಸಿರುವ ಎರಡನೇ ಹಂತದ ರಾಜ್ಯಮಟ್ಟದ ಕಥಾ ಕಮ್ಮಟ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಮಾತನಾಡಿ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ರಾಜ್ಯದ ಸಮಸ್ತ ಮಕ್ಕಳ ಶ್ರೇಯೋಭಿವೃದ್ಧಿಗೆ ಬದ್ಧವಾಗಿದ್ದು ಅದರಲ್ಲೂ ವಿಶೇಷವಾಗಿ ಬಾಲಮಂದಿರದ ಮಕ್ಕಳಿಗಾಗಿ ಅವರ ಪ್ರಗತಿಗಾಗಿ ಸದಾ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಧಾರವಾಡದ ತಹಸಿಲ್ದಾರ್ ಬಿ.ಹೆಚ್ ಹೂಗಾರ ಮಾತನಾಡಿ ” ಬಾಲ ಮಂದಿರದ ವಿಶೇಷ ಮಕ್ಕಳಿಗೆ ಇಂತಹ ಸುಸಜ್ಜಿತವಾದ ಪರಿಸರಸ್ನೇಹಿ ರೆಸಾರ್ಟ್ ನಲ್ಲಿ ಉಳಿಸಿ ರಾಜ್ಯದ ಮೂಲೆ ಮೂಲೆಯಿಂದ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಅವರ ವ್ಯಕ್ತಿತ್ವ ರೂಪಿಸುವ ನಿಟ್ಟಿನಲ್ಲಿ ಸಂಗಮೇಶ ಬಬಲೇಶ್ವರ ಅವರು ದಿಟ್ಟ ಹೆಜ್ಜೆಯನ್ನು ಇಟ್ಟಿದ್ದಾರೆ. ಇದಕ್ಕಿಂತ ಪುಣ್ಯದ ಕೆಲಸ ಮತ್ತೊಂದಿಲ್ಲ ಎಂದು ಹೇಳಿದರು.
ಅಕಾಡೆಮಿಯ ಯೋಜನಾಧಿಕಾರಿ ಭಾರತಿ ಶೆಟ್ಟರ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅತಿಥಿಗಳಾಗಿ ಮಲ್ಲನಗೌಡ ಪಾಟೀಲ, ಬಸವರಾಜ್ ಮರಿತಮ್ಮನವರ, ಉಪನಿರ್ದೇಶಕ ರವೀಂದ್ರ ರತ್ನಾಕರ, ದೀಪಾ ಜಾವೂರ, ಪುಷ್ಪ ಹಂಜಗಿ, ಸ್ವ ವರ್ಣಲತಾ ಮಠದ, ಶ್ರೀಮತಿ ಮೇಟಿ ಹಾಗೂ 9 ಜಿಲ್ಲೆಗಳಿಂದ ಆಗಮಿಸಿರುವ ಮುದ್ದು ಮಕ್ಕಳು, ನಿಲಯ ಪಾಲಕರು ಮುದ್ದು ಮಕ್ಕಳು ಉಪಸ್ಥಿತರಿದ್ದರು.

“ನಮಗಿರುವ ಎಲ್ಲ ನ್ಯೂನ್ಯತೆಗಳನ್ನು ಬದಿಗಿಟ್ಟು, ಆತ್ಮವಿಶ್ವಾಸದಿಂದ ಮುನ್ನುಗ್ಗಿ ಮಕ್ಕಳೆಲ್ಲರೂ ಶ್ರೇಷ್ಠ ಸಾಧಕರಾಗಿ ಹೊರಹೊಮ್ಮಿದಾಗ, ಜೊತೆಗೆ ಅವರ ಸಾಧನೆಯ ಕಥೆಗಳನ್ನು ಜಗತ್ತು ಓದುವಂತಾದಾಗ ನಮ್ಮೆಲ್ಲರ ಪ್ರಯತ್ನ ಸಾರ್ಥಕವಾಗುತ್ತದೆ.”
– ಸಂಗಮೇಶ ಬಬಲೇಶ್ವರ
ಅಧ್ಯಕ್ಷರು, ಕರ್ನಾಟಕ ಬಾಲವಿಕಾಸ ಅಕಾಡೆಮಿ

