ಕೊಲ್ಹಾರ ತಾಲೂಕಾ ಹೋರಾಟ ಸಮಿತಿ ಸದಸ್ಯ, ಪತ್ರಕರ್ತ ಪರಶುರಾಮ ಗಣಿ ಗೆ ಸನ್ಮಾನ
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಬಡತನದಲ್ಲಿ ಹುಟ್ಟಿ ಬೆಳೆದು,ಹೆತ್ತವರನ್ನು ಕಳೆದುಕೊಂಡು ಸಾಮಾಜಿಕ ಸೇವೆ, ಪತ್ರಿಕಾ ಸೇವೆ ಮಾಡುತ್ತಾ ಜನರ ಮದ್ಯದಲ್ಲಿ ಪತ್ರಿಕಾ ವಿತರಕರಾಗಿ, ಹಾಲು ಮಾರಾಟಗಾರನಾಗಿ ಬೆಳೆದ ಕೊಲ್ಹಾರದ ಪರಶುರಾಮ ಗಣಿಯವರ ಕಾರ್ಯ ಬಹಳ ಶ್ಲಾಘನೀಯವಾದದ್ದು ಎಂದು ಗಜೇಂದ್ರಗಡ ತಳ್ಳಿಹಾಳ ಕೋಡಿಮಠದ ಕಾಲಜ್ಞಾನ ಬ್ರಹ್ಮ ವಿಶ್ವಕಾಲಜ್ಞಾನಿ ಶಿವಯೋಗ ಡಾ.ಶರಣಬಸವ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಸಾಮಾಜಿಕ ಹೋರಾಟಗಾರ, ಕೊಲ್ಹಾರ ತಾಲೂಕಾ ಹೋರಾಟ ಸಮಿತಿ ಸದಸ್ಯ ಪರಶುರಾಮ ಗಣಿಯವರ ೫೧ ನೇ ಹುಟ್ಟುಹಬ್ಬ ಹಾಗೂ ೨೫ ನೇ ವಿವಾಹ ವಾರ್ಷಿಕೋತ್ಸವ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಆಶೀರ್ವಚನ ನೀಡುತ್ತಾ ಮಾತನಾಡಿದ ಅವರು, ಸಂಸಾರ ಎಂಬುವುದು ಗಾಳಿಯ ಸೊಡರು ಅದರಲ್ಲಿ ಈಜಿ ದಡ ಸೇರುವವನೆ ಬುದ್ದಿವಂತ, ಬಾಲ್ಯದಲ್ಲಿ ತಂದೆ -ತಾಯಿಯರನ್ನು ಕಳೆದುಕೊಂಡು ಹೆಂಡತಿಯನ್ನು ತಾಯಿಯ ಸ್ವರೂಪದಲ್ಲಿ ಕಂಡು ಅಣ್ಣ, ತಮ್ಮ, ಅಕ್ಕ, ಮಾವನಂದಿರ ಜೊತೆ ೫೧ ವರ್ಷಗಳ ಕಾಲ ಯಾವುದೆ ಕಪ್ಪು ಚುಕ್ಕೆ ಬರದಂತೆ, ಸಮಾಜದಲ್ಲಿ ಒಳ್ಳೆಯ ಪ್ರಜೆಯಾಗಿ ಕಾರ್ಯನಿರ್ವಹಿಸಿದ ಕೀರ್ತಿ ಪರಶುರಾಮರವರಿಗೆ ಸಲ್ಲುತ್ತದೆ ಎಂದರು.
ಅವನ ಮನೆ ಗುಡಿಸಲಾಗಿರಬಹುದು, ಮಾತು ಕಠೋರ, ಮನಸ್ಸು ಮೃದುವಾಗಿದೆ. ಗಂಡ ಹೆಂಡತಿ ಆಧುನಿಕ ಕಾಲದ ಹೆಮರೆಡ್ಡಿ ಮಲ್ಲಮ್ಮ ಹಾಗೂ ಭರಮರೆಡ್ಡಿ ಇದ್ದಂತೆ. ನಿತ್ಯ ಬೆಳಿಗ್ಗೆ ೪ ಗಂಟೆಗೆ ಎದ್ದು ಪೇಪರ್ ಹಾಗೂ ಹಾಲು ಸಂಗ್ರಹಿಸಿ ೨೫ ವರ್ಷಗಳ ಕಾಲ ಕೊಲ್ಹಾರ ಪಟ್ಟಣದ ಪ್ರತಿ ಮನೆಗೆ ಹಂಚಿ ನಿಶ್ವಾರ್ಥ ಜೀವನ ನಡೆಸಿದ ಕೀರ್ತಿ ಪರಶುರಾಮನಿಗೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾಜಿ ಸಚಿವ ಎಸ್. ಕೆ ಬೆಳ್ಳುಬ್ಬಿ,ಜೆ. ಡಿ. ಎಸ್. ಮುಖಂಡ ಅಪ್ಪುಗೌಡ ಪಾಟೀಲ ಮನಗೂಳಿ, ಮಾಜಿ ಜಿ. ಪಂ ಸದಸ್ಯ ಕಲ್ಲು ದೇಸಾಯಿಯವರು ಮಾತನಾಡಿ, ಸಾಮಾಜಿಕ ಕಾರ್ಯಕರ್ತ ಹಾಗೂ ಪತ್ರಕರ್ತ ಪರಶುರಾಮ ಗಣಿಯವರ ಬಾಲ್ಯದ ಜೀವನ, ಹಾಗೂ ಸಾಧನೆಗಳನ್ನು ವರ್ಣಿಸಿ, ಇಂದಿನ ಯುವ ಪೀಳಿಗೆಗೆ ಮಾದರಿ ಎಂದರು.
ಈ ವೇಳೆ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಗಜೇಂದ್ರಗಡ ತಳ್ಳಿಹಾಳ ಕೋಡಿಮಠದ ಕಾಲ ಜ್ಞಾನಬ್ರಹ್ಮ ವಿಶ್ವಕಾಲಜ್ಞಾನಿ ಶಿವಯೋಗಿ ಡಾ.ಶರಣಬಸವ ಮಹಾಸ್ವಾಮೀಜಿಗಳು ಹಾಗೂ ಕೊಲ್ಹಾರದ ಪಡದಯ್ಯ ಹಿರೇಮಠ ವಹಿಸಿದ್ದರು.
ಅಧ್ಯಕ್ಷತೆಯನ್ನು ಮಾಜಿ ಸಚಿವ ಎಸ್. ಕೆ ಬೆಳ್ಳುಬ್ಬಿ ವಹಿಸಿದ್ದರು.
ಅತಿಥಿಗಳಾಗಿ ಜೆ.ಡಿ.ಎಸ್ ಮುಖಂಡ ಅಪ್ಪುಗೌಡ ಪಾಟೀಲ ಮನಗೂಳಿ, ಮಾಜಿ ಜಿ. ಪಂ. ಸದಸ್ಯ ಕಲ್ಲು ದೇಸಾಯಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಫೀಕ ಪಕಾಲಿ ಭಾಗವಹಿಸಿದ್ದರು.
ಶಿಕ್ಷಕಿ ರುದ್ರಮ್ಮ ಗಿಡ್ಡಪ್ಪಗೋಳ, ಶಿಕ್ಷಕ ಕಲ್ಲು ಬಾಲಗೊಂಡ ಕಾರ್ಯಕ್ರಮ ನಡೆಸಿಕೊಟ್ಟರು.
ಈ ವೇಳೆ ಪತ್ರಕರ್ತ ಪರಶುರಾಮ ಗಣಿ ಹಾಗೂ ಪತ್ನಿ ಪಾರ್ವತಿ ಗಣಿ ಯವರನ್ನು ಮಾಜಿ ಸಚಿವ ಎಸ್. ಕೆ. ಬೆಳ್ಳುಬ್ಬಿ,ಜೆ. ಡಿ. ಎಸ್, ಮುಖಂಡ ಅಪ್ಪುಗೌಡ ಪಾಟೀಲ ಮನಗೂಳಿ, ಮಾಜಿ ಜಿ. ಪಂ. ಕಲ್ಲು ದೇಸಾಯಿ ಸೇರಿದಂತೆ ಪಟ್ಟಣದ ರಾಜಕೀಯ ಮುಖಂಡರು, ಪ. ಪಂ. ಸದಸ್ಯರು, ವಿವಿಧ ಇಲಾಖೆ ನೌಕರರು, ಸ್ನೇಹಿತರ ಬಳಗ ಹಾಗೂ ಕುಟುಂಬಸ್ಥರು ಸನ್ಮಾನಿಸಿದರು.
ನಂತರ ಎಲ್ಲ ಪ.ಪಂ ಸದಸ್ಯರನ್ನು ಪರಶುರಾಮ ಗಣಿ ಕುಟುಂಬದ ವತಿಯಿಂದ ಸನ್ಮಾನಿಸಲಾಯಿತು.

