ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಜರುಗಿದ ಸ್ಪರ್ಧಾತ್ಮಕ ಪರೀಕ್ಷೆ ಕಟ್ಟುನಿಟ್ಟಿನ ನಡುವೆ ಸುಗಮವಾಗಿ ಜರುಗಿದವು.
ಪಟ್ಟಣದಲ್ಲಿ ಭಾನುವಾರ ಪರೀಕ್ಷಾ ಕೇಂದ್ರಗಳಾದ ಸಿದ್ಧೇಶ್ವರ ಸ್ವಾಮೀಜಿ, ವೆಂಕಟೇಶ್ವರ ಮತ್ತು ಬಿಎಲ್ಡಿಇ ಸಂಸ್ಥೆಯ ಎ.ಬಿ.ಸಾಲಕ್ಕಿ ಪಿ.ಯು ಕಾಲೇಜುಗಳಲ್ಲಿ ಪರೀಕ್ಷೆ ಬೆಳಿಗ್ಗೆ ಆರಂಭಗೊಂಡವು. ಸಿದ್ಧೇಶ್ವರ ಸ್ವಾಮೀಜಿ ಪಿ.ಯು ಕಾಲೇಜಿನ ೧೯ ಕೋಠಡಿಗಳಲ್ಲಿ ೪೫೦, ಬಿಎಲ್ಡಿಇ ಸಂಸ್ಥೆಯ ಎ.ಬಿ.ಸಾಲಕ್ಕಿ ಕಾಲೇಜಿನ ೧೭ ಕೋಠಡಿಗಳಲ್ಲಿ ೪೦೮ ಹಾಗೂ ವೆಂಕಟೇಶ್ವರ ಕಾಲೇಜಿನ ೧೭ ಕೋಠಡಿಗಳಲ್ಲಿ ೪೦೮ ರಂತೆ ಒಟ್ಟು ೩ ಪರೀಕ್ಷಾ ಕೇಂದ್ರಗಳಲ್ಲಿ ೧೨೬೬ ಪರೀಕ್ಷಾರ್ಥಿಗಳು ಹಾಜರಿದ್ದು ಪರೀಕ್ಷೆ ಬರೆದರು.
ಪರೀಕ್ಷಾ ಕೇಂದ್ರಗಳಿಗೆ ಬೆಳಿಗ್ಗೆ ೯ ಗಂಟೆಯಿಂದಲೇ ಆಗಮಿಸಲು ಆರಂಭಿಸಿದ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರಗಳ ನಿಯೋಜಿತ ಸಿಬ್ಬಂದಿ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡುವುದರ ಮೂಲಕ ವೈಯಕ್ತಿಕ ತಪಾಸಣೆಗೆ ಒಳಪಡಿಸಿದರು. ಈ ಸಂದರ್ಭದಲ್ಲಿ ಮೊಬೈಲ್ ಸೇರಿದಂತೆ ಇನ್ನೀತರ ಇಲೆಕ್ಟ್ರಾನಿಕ್ಸ್ ವಸ್ತುಗಳು ಹಾಗೂ ಪುರುಷ ಅಭ್ಯರ್ಥಿಗಳು ಉದ್ದ ತೋಳಿನ ಅಂಗಿ, ಮಹಿಳೆಯರು ಮಾಂಗಲ್ಯದ ಹೊರತಾಗಿ ಯಾವುದೇ ಆಭರಣ ಹಾಗೂ ಹಿಜಾಬ್ದಂತ ಉಡುಗೆ ಧರಿಸಿರಬಾರದು ಎಂಬ ನಿರ್ದೇಶನದ ಹಿನ್ನೆಲೆಯಲ್ಲಿ ಕೆಲವರು ಪರದಾಡಿದ ಪ್ರಸಂಗಗಳು ಕಂಡು ಬಂದವು.
ತಹಶೀಲ್ದಾರ ಪ್ರಕಾಶ ಸಿಂದಗಿ ಸೇರಿದಂತೆ ನಿಯೋಜಿತ ಪೊಲೀಸ್ ಹಾಗೂ ಪರೀಕ್ಷಾ ಕೇಂದ್ರಗಳ ನಿಯೋಜಿತ ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿ ಪಟ್ಟಣದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಿಗದಿಯಂತೆ ಜರುಗಿದವು.

