ಬಾಬಾನಗರ ಗ್ರಾಮದಲ್ಲಿ ಸ್ವಚ್ಛತೆಯೆಡೆಗೆ ದಿಟ್ಟ ಹೆಜ್ಜೆ ಅಭಿಯಾನ ಆಯೋಜನೆ
ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ತಾಲೂಕು ವ್ಯಾಪ್ತಿಯ ಬಾಬಾನಗರ ಗ್ರಾಮದಲ್ಲಿ ತಾಲೂಕು ಪಂಚಾಯತಿ ತಿಕೋಟಾ ಹಾಗೂ ಗ್ರಾಮ ಪಂಚಾಯತಿ ಬಾಬಾನಗರ ಅವರ ವತಿಯಿಂದ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಐಇಸಿ ಕಾರ್ಯಕ್ರಮದಡಿ ಹಮ್ಮಿಕೊಂಡ ಸ್ವಚ್ಛತೆಯೆಡೆಗೆ ದಿಟ್ಟ ಹೆಜ್ಜೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರೇಣುಕಾ ಸೋಲಾಪುರ ರವರು, ಸೆ.೧೪ ರಿಂದ ನಮ್ಮ ಬಾಬಾನಗರ ಗ್ರಾಮ ಪಂಚಾಯತಿ ವತಿಯಿಂದ ಸ್ವಚ್ಛತೆಯೆಡೆಗೆ ದಿಟ್ಟ ಹೆಜ್ಜೆ ಅಭಿಯಾನ ವನ್ನು ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದ ಭಾಗವಾಗಿ ಇಂದು ನಮ್ಮ ಗ್ರಾಮದ ವಿವಿಧ ಸರಕಾರಿ ಶಾಲೆ ಮಕ್ಕಳಿಂದ ಜಾಥಾ ಆಯೋಜನೆ ಮಾಡಲಾಗಿದೆ. ಅದರ ಜೊತೆಗೆ ಗ್ರಾಮದ ಯಲ್ಲಮ್ಮ ದೇವಿ ದೇವಸ್ಥಾನದ ಪಕ್ಕ ಮನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಲಾದ ಕಲ್ಯಾಣಿ ಹತ್ತಿರ ಶ್ರಮದಾನ ಮಾಡುವ ಮೂಲಕ ಈ ಅಭಿಯಾನದ ಮುಖ್ಯ ಉದ್ಧೇಶವಾದ ಬೂದು ನೀರು ನಿರ್ವಹಣೆ ಕುರಿತು ಜನ ಜಾಗೃತ್ತಿ ಮೂಡಿಸುವ ಕಾರ್ಯ ಮಾಡುತ್ತಿದ್ದೇವೆ ಎಂದರು.
ಬೂದು ನೀರು ನಿರ್ವಹಣೆಯು ಪ್ರಸ್ತುತ ದಿನಮಾನದಲ್ಲಿ ಅತೀ ಅವಶ್ಯಕವಾದ ಪ್ರಥಮಾಧ್ಯತೆಯ ಕಾರ್ಯವಾಗಿದೆ. ಬೂದು ನೀರು ನಿರ್ವಹಣೆಯಿಂದ ನಮಗೆ ಸಾಕಷ್ಟು ಅನುಕೂಲಗಳಿವೆ ಎಂದರು.
ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ ಮಾತನಾಡಿ, ಈ ಅಭಿಯಾನದ ಪ್ರಯುಕ್ತ ಸ್ವ-ಸಹಾಯ ಸಂಘದವರು, ನಾಗರಿಕ ಸೇವಾ ಸಂಘ, ಸಮುದಾಯ ಸಂಘಟನೆಗಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳ, ಗ್ರಾಮಸ್ಥರ ಸಹಯೋಗದಲ್ಲಿ ಮನರೇಗಾ ಯೋಜನೆಯಡಿ ಅನುಷ್ಠಾನ ಮಾಡಲಾದ ಜಲಸಂರಕ್ಷಣೆ ಕಾಮಗಾರಿಗಳಲ್ಲಿ ಶ್ರಮದಾನ ಮಾಡಿ ಸ್ವಚ್ಛಗೊಳಿಸಲಾಗಿದೆ. ಅದರಂತೆ ಇಂದು ಬಾಬಾನಗರ ಗ್ರಾಮದ ಕಲ್ಯಾಣಿ ಸ್ಥಳದಲ್ಲಿ ಶ್ರಮದಾನ ಮಾಡುವ ಮೂಲಕ ಜಲ ಸಂರಕ್ಷಣೆಯ ಕಾಮಗಾರಿಯ ಸ್ವಚ್ಛತೆಯ ಮಹತ್ವದ ಕುರಿತು ಸಮುದಾಯಕ್ಕೆ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದೇವೆ ಎಂದರು.
ಗ್ರಾಮೀಣ ಭಾಗದಲ್ಲಿ ಉತ್ತಮ ಆರೋಗ್ಯ, ಉತ್ತಮ ಪರಿಸರ ಹಾಗೂ ಉತ್ತಮ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಸರ್ಕಾರ ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಜನರು ಬಚ್ಚಲು ನೀರು, ಬಟ್ಟೆಗಳನ್ನು ತೊಳೆದ ನೀರು ಹಾಗೂ ಪಾತ್ರೆಗಳನ್ನು ತೊಳೆದ ನೀರನ್ನು ರಸ್ತೆಗಳಿಗೆ ಬಿಡುವದರಿಂದ ಅವು ಅಲ್ಲಿಯೇ ನಿಂತು ಸಾಂಕ್ರಾಮಿಕ ರೋಗಗಳ ಹೆಚ್ಚಳಕ್ಕೆ ಆಹಾರವಾಗುತ್ತಿತ್ತು. ಪ್ರಸ್ತುತ ಮನರೇಗಾ ಯೋಜನೆಯಡಿ ಬಚ್ಚಲು ಗುಂಡಿ ನಿರ್ಮಿಸಲು ಅವಕಾಶ ನೀಡಲಾಗಿದ್ದು, ಗ್ರಾಮಸ್ಥರು ಅದರ ಉಪಯೋಗ ಪಡೆದುಕೊಳ್ಳುವದರ ಮೂಲಕ ಗ್ರಾಮ ನೈರ್ಮಲ್ಯಕ್ಕೆ ಕಾರಣರಾಗಬೇಕು ಎಂದರು.
ಈ ಸಂದರ್ಭದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರೇಣುಕಾ ಸೋಲಾಪುರ, ತಾಂತ್ರಿಕ ಸಂಯೋಜಕ ನಾಗರಾಜ ಕಲಕೇರಿ, ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ, ಗ್ರಾಮ ಪಂಚಾಯತಿ ಸದಸ್ಯರಾದ ಸಿದ್ಧಗೋಂಡ ರುದ್ರಗೌಡರ, ಪ್ರಕಾಶ ಆಯತವಾಡ, ರಾಜು ಪೂಜಾರಿ, ಕಾರ್ಯದರ್ಶಿ ಸಿ.ಬಿ.ಕೊಲಕಾರ, ಟಿಎಇ ಶ್ರೀಧರ ಸಾವಳಗಿ, ಗ್ರಾಮ ಕಾಯಕ ಮಿತ್ರ ಈರಮ್ಮ ಭೊಮ್ಮನಹಳ್ಳಿ, ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ಲಕ್ಕಪ್ಪ ತಳವಾರ, ಪ್ರಕಾಶ ವಾಲಿಕಾರ, ರಾಕೇಶ ಸಾವಳಗಿ, ಸಂಜು ಕುಸನಾಳ ಸೇರಿದಂತೆ ಶಾಲಾ ಶಿಕ್ಷಕರು, ಆಶಾ-ಅಂಗನವಾಡಿ ಕಾರ್ಯಕರ್ತೆಯರು, ಸ್ವ-ಸಹಾಯ ಸಂಘದ ಸದಸ್ಯರು, ಚುನಾಯಿತ ಜನಪ್ರತಿನಿಧಿಗಳು, ಶಾಲಾ ಮಕ್ಕಳು ಸೇರಿ ಇತರರು ಹಾಜರಿದ್ದರು.
ಅಭಿಯಾನದ ಭಾಗವಾಗಿ ಗ್ರಾಮದ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆ, ಸರಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆ, ಸರಕಾರಿ ಉರ್ದು ಪ್ರಾಥಮಿಕ ಶಾಲೆ ಮಕ್ಕಳಿಂದ ಗ್ರಾಮ ಪ್ರಮುಖ ಬೀದಿಯಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು. ಜಾಥಾಯುದ್ದಕ್ಕೂ ಮಕ್ಕಳು ಆರೋಗ್ಯ & ಸ್ವಚ್ಛತೆಯ ಕುರಿತಾದ ಘೋಷಣೆಗಳನ್ನು ಕೂಗುತ್ತಾ ಜಾಗೃತಿ ಮೂಡಿಸಿದರು.
ನಂತರ ಗ್ರಾಮದ ಯಲ್ಲಮ್ಮದೇವಿ ದೇವಸ್ಥಾನದ ಪಕ್ಕದಲ್ಲಿ ಮನರೇಗಾ ಯೋಜನೆಯಡಿ ನಿರ್ಮಿಸಿದ ಕಲ್ಯಾಣಿ ಪಕ್ಕದಲ್ಲಿ ಶ್ರಮದಾನ ಕೈಗೊಳ್ಳಲಾಯಿತು.

