ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದಲ್ಲಿರುವ ಅಕ್ರಮ ನಳಗಳನ್ನು ಸಕ್ರಮಗೊಳಿಸಿದರೆ ಪುರಸಭೆಗೆ ಆದಾಯ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ಅಧ್ಯಕ್ಷ ಶಾಂತವೀರ ಬಿರಾದಾರ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಪುರಸಭೆಯ ಸಭಾ ಭವನದಲ್ಲಿ ಜರುಗಿದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಹಲವು ವಿಷಯಗಳನ್ನು ಚರ್ಚಿಸಿ ಮಾತನಾಡಿದ ಅವರು, ಅಕ್ರಮವಾಗಿ ನಳ ಸಂಪರ್ಕ ಪಡೆದ ಮನೆಯ ಮಾಲಿಕರಿಗೆ ಸಕ್ರಮಗೊಳಿಸಿಕೊಳ್ಳಲು ಕಾಲಾವಕಾಶ ಅಥವಾ ನೋಟಿನ್ ನೀಡಿ ಸಕ್ರಮಗೊಳಿಸಲು ತಿಳಿಸಬೇಕು ಎಂಬುದಕ್ಕೆ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.
ಬಳಿಕ ಮುಖ್ಯಾಧಿಕಾರಿ ಸುರೇಶ ನಾಯಕ ಮಾತನಾಡಿ, ಪಟ್ಟಣದಲ್ಲಿ ಒಟ್ಟು ೧೦ ಸಾವಿರಕ್ಕೂ ಅಧಿಕ ಮನೆಗಳಿವೆ. ಆದರೆ ಅದರಲ್ಲಿ ಕೇವಲ ೨ಸಾವಿರ ಮನೆಗಳು ಮಾತ್ರ ಅಧಿಕೃತ ನಳಗಳ ಜೋಡಣೆಯಿದ್ದು, ಇನ್ನೂಳಿದ ಮನೆಗಳಿಗೆ ಅಕ್ರಮ ನಳಗಳ ಜೋಡಣೆ ಇದೆ ಅವುಗಳನ್ನು ಸಕ್ರಮಗೊಳಿಸುವುದು ಸೂಕ್ತ ಎಂದು ಉಲ್ಲೇಖ ಮಂಡಿಸಿದರು.
ಪುರಸಭೆಯಲ್ಲಿ ಚುನಾಯಿತರಾದ ಸದಸ್ಯರಿಗೆ ಗೌರವ ಇಲ್ಲದಂತಾಗಿದೆ. ನಮ್ಮ ವಾರ್ಡಿನ ಸಮಸ್ಯೆಗಳನ್ನು ಪುರಸಭೆ ಮುಖ್ಯಾಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದರೂ ಯಾವುದೇ ಕ್ರಮ ಜರುಗಿಸಲ್ಲ ಎಂದು ಸದಸ್ಯೆ ಪ್ರತಿಭಾ ಕಲ್ಲೂರ ಆರೋಪಿಸಿದರು.
ಗುಂಟಾ ಪ್ಲಾಟ್ಗಳಿಗೂ ನೀರಿನ ಸೌಲಭ್ಯ ಪೂರೈಕೆಯಾಗಿದ್ದು ಅವರಿಂದ ಬಿಲ್ಲು ಸಂದಾಯ ಮಾಡಿಕೊಳ್ಳಲು ಅಧಿಕೃತವಾಗಿ ಪಡೆದುಕೊಳ್ಳಲು ಬರುವುದಿಲ್ಲ. ಅಂತಹುಗಳಿಗೂ ತೆರಿಗೆ ಭರಣಾ ಮಾಡಿಕೊಳ್ಳಲು ಸರಕಾರದ ಆದೇಶವಿದ್ದು, ಅವರಿಗಾಗಿ ಪ್ರತೇಕ ರಜಿಷ್ಟ್ಟರ ವ್ಯವಸ್ಥೆ ಕಲ್ಪಿಸಿ ಕರ ಭರಣಾ ಮಾಡಿಕೊಳ್ಳಬೇಕು ಎಂದು ಸದಸ್ಯ ಬಸವರಾಜ ಯರನಾಳ, ಸಂದೀಪ ಚೌರ ಸಲಹೆ ನೀಡಿದರು.
ಕಂಪ್ಯೂಟರ ಉತಾರೆ ಕಲ್ಪಿಸಿ ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸಬೇಕು ಎಂದು ನಾಲ್ಕು ಜನ ಕಂಪ್ಯೂಟರ ಪರಿಣಿತರನ್ನು ಹೊರಗುತ್ತಿಗೆ ಆದಾರದ ಮೇಲೆ ಸೇರ್ಪಡೆ ಮಾಡಿಕೊಂಡು ಪ್ರತಿಯೊಂದು ಮನೆಯ ದಾಖಲೆಗಳನ್ನು ಕ್ರೂಢೀಕರಣ ಮಾಡುವ ಮೂಲಕ ಉತಾರಿ ನೀಡುವ ವ್ಯವಸ್ಥೆ ಕಲ್ಪಿಸಬೇಕು ಸದಸ್ಯ ಹಣಮಂತ ಸುಣಗಾರ ಹೇಳಿದರು.
ರಿ.ಸ.ನಂ೪೭೩ ಮತ್ತು ೪೭೪ ಆಶ್ರಯ ವಸತಿ ಯೋಜನೆಯಡಿ ಮನೆಗಳ ಹಂಚಿಗೆಯಾಗಿದ್ದು, ಸದರಿ ಮನೆಗಳಿಗೆ ಕಲ್ಲು ಹಾಕಿ ಗಡಿ ಗುರುತಿಸಿ ಬಡವರಿಗೆ ಅನುಕೂಲ ಮಾಡುವಂತೆ ಆಶ್ರಯ ಸಮಿತಿ ಸದಸ್ಯ ಸಾಯಬಣ್ಣ ಪುರದಾಳ ತಿಳಿಸಿದರು.
ಪುರಸಭೆ ವ್ಯಾಪ್ತಿಯ ಎಲ್ಲಾ ಎನ್.ಎ.ಲೇಔಟ್ಗಳಲ್ಲಿ ಸದರಿ ಲೇಔಟ್ ಮಾಲೀಕರು ಕಡ್ಡಾಯವಾಗಿ ಉದ್ಯಾನವನ ಮತ್ತು ನಾಗರಿಕ ಸೌಲಭ್ಯ ಜಾಗಗಳಿಗೆ ಕಂಪೌಂಡ್ ನಿರ್ಮಿಸಿ ಭದ್ರಪಡಿಸಬೇಕು. ಪಟ್ಟಣದ ಪ್ರಮುಖ ರಸ್ತೆಯಾದ ವಿವೇಕಾನಂದ ವೃತ್ತದಿಂದ ಟಿಪ್ಪುಸುಲ್ತಾನ್ ವೃತ್ತದವರೆಗೆ ಸಂಚಾರದಟ್ಟಣೆಯಿಂದ ಸಾರ್ವಜನಿಕರಿಗೆ ತೊಂದರೆವುಂಟಾಗುತ್ತಿದ್ದು, ಎಕಮುಖ(ಒನ್ವೇ) ನಿರ್ಮಿಸುವದು, ಕಚೇರಿಯ ಎಲ್ಲ ಸಿಬ್ಬಂದಿಗಳಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯವಾಗಿ ಕಾರ್ಯರೂಪಕ್ಕೆ ತರುವುದು, ೧೫ನೇ ಹಣಕಾಸು ಯೋಜನೆಯಡಿ ನಿರ್ವಹಿಸುತ್ತಿರುವ ಕಾಮಗಾರಿಗಳಿಗೆ ಅನುಮೋದನೆ ನೀಡಿ ಕಾಮಗಾರಿ ಆದೇಶ ನೀಡುವದು. ಸಿಂದಗಿ ಪುರಸಭೆಯ ಕಾನೂನು ಸಲಹೆಗಾರರು ಪುರಸಭೆಯ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗುತ್ತಿಲ್ಲ. ಕಾರಣ ಸದರಿ ಕಾನೂನು ಸಲಹೆಗಾರರನ್ನು ಬದಲಾಯಿಸಿ ನೂತನ ಕಾನೂನು ಸಲಹೆಗಾರರನ್ನು ನೇಮಿಸುವದು. ಸಿಂದಗಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಬಳಗಾನೂರ ಕೆರೆ, ಯರಗಲ್ ಕೆನಾಲ್ ಮತ್ತು ಸಿಂದಗಿ ಕೆರೆಯ ಪಂಪಗಳನ್ನು ದುರಸ್ಥಿಗೊಳಿಸುವದು ಸೇರಿದಂತೆ ೨೨ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆಯಾಗಿ ಅನುಮೋದನೆ ಪಡೆದುಕೊಂಡವು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ರಾಜಣ್ಣಿ ನಾರಾಯಣಕರ, ಮಾಜಿ ಅದ್ಯಕ್ಷ ಭಾಷಾಸಾಬ ತಾಂಬೋಳಿ, ಸದಸ್ಯರಾದ ಹಾಸೀಂ ಆಳಂದ, ಶರಣಗೌಡ ಪಾಟೀಲ, ಗೊಲ್ಲಾಳ ಬಂಕಲಗಿ, ಶರಣಗೌಡ ಪಾಟೀಲ, ಶ್ರೀಶೈಲ ಬೀರಗೊಂಡ, ಪಾರ್ವತಿ ದುರ್ಗಿ, ಮಹಾಂತೇಶ ಬಿರಾದಾಋ, ಬಸಮ್ಮ ಸಜ್ಜನ, ಮಹಾದೇವಿ ನಾಯ್ಕೋಡಿ, ರಹಿಮ್ ದುದ್ದನಿ, ಸಿದ್ದು ಮಲ್ಲೇದ, ಚನ್ನಪ್ಪ ಗೋಣಿ ಸೇರಿದಂತೆ ಹಾಜರಿದ್ದ ಸದಸ್ಯರು ತಮ್ಮ ವಾರ್ಡಿನ್ ಸಮಸ್ಯೆಗಳನ್ನು ವಿವರಿಸಿದರು.
ಸಿಬ್ಬಂದಿ ಸಿದ್ದು ಅಂಗಡಿ ನಡಾವಳಿ ಪತ್ರವನ್ನು ಓದಿದರು. ಜೆಇ ಎ.ಜೆ.ನಾಟೀಕಾರ, ಸೇರಿದಂತೆ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಬೇಲಿಯೇ ಎದ್ದು ಹೊಲ ಮೇಯ್ದಂತೆ
ಪುರಸಭೆಗೆ ಆದಾಯ ಹೆಚ್ಚಿಸುವ ಯೋಜನೆ ರೂಪಿಸುತ್ತಿರುವುದು ಸ್ವಾಗತಾರ್ಹ. ಆದರೆ ಬೇಲಿಯೇ ಎದ್ದು ಹೊಲ ಮೇಯ್ದ ಹಾಗೆ ಪುರಸಭೆ ಸದಸ್ಯರೇ ಏಜೆಂಟರ ರೀತಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ಪುರಸಭೆಗೆ ಬರುತ್ತಿರುವ ಹಣ ಪೋಲಾಗುತ್ತಿದೆ. ಇದಕ್ಕೆ ಕ್ರಮವೇನು? ಅಂತಹವರ ವಿರುದ್ಧ ಎಫ್ಐಆರ್ ದಾಖಲಿಸಿ ಕ್ರಮಕೈಗೊಂಡಾಗ ಪೋಲಾಗುತ್ತಿರುವ ಹಣ ತೆಡೆಗಟ್ಟಲು ಸಾಧ್ಯ. ಬ್ಯಾಂಕ ಸಿಬ್ಬಂದಿ, ಮನೆ ಮಾಲೀಕ ಹಾಗೂ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಬೇಕು. ಎಂದು ಮಾಜಿ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಪಟ್ಟು ಹಿಡಿದ ಘಟನೆ ಚರ್ಚೆಗೆ ಗ್ರಾಸವಾಯಿತು.

