ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದಲ್ಲಿ ರವಿವಾರ ಬೆಳ್ಳಂಬೆಳಿಗ್ಗೆ ಪುರಸಭೆಯ ವತಿಯಿಂದ ಪೊಲೀಸರ ಸರ್ಪಗಾವಲಿನಲ್ಲಿ ಎರಡು ಜೆಸಿಬಿಗಳು ಘರ್ಜಿಸಿವೆ.
ಇಲ್ಲಿನ ತಂಗಡಗಿ ರಸ್ತೆಯ ಜ್ಞಾನ ಭಾರತಿ ಶಾಲೆಯಿಂದ ಅಂಬೇಡ್ಕರ್ ವೃತ್ತ ಮತ್ತು ರಿಲಯನ್ಸ್ ಪೆಟ್ರೋಲ್ ಪಂಪ ವರೆಗೆ ಮುಖ್ಯ ರಸ್ತೆಯಲ್ಲಿ ಪುರಸಭೆ ಜಾಗೆಯನ್ನು ಅತಿಕ್ರಮಣ ಮಾಡಿದ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆಯಲ್ಲಿ ಪುರಸಭೆ ಸಫಲವಾಗಿದೆ.
ಹಲವು ದಿನಗಳಿಂದ ಪುರಸಭೆ ರಸ್ತೆಯನ್ನು ಅತಿಕ್ರಮಿಸಿ ಕೆಲವು ಡಬ್ಬಾ ಅಂಗಡಿಗಳು, ಗೂಡಂಗಡಿಗಳು ತಮ್ಮ ದೈನಂದಿನ ವ್ಯಾಪಾರ ವಹಿವಾಟುಗಳನ್ನು ನಡೆಸಿದ್ದರು. ಇದರ ಪರಿಣಾಮ ವಾಹನ ಸಂಚಾರಕ್ಕೆ, ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನ ನಿಲುಗಡೆಗೆ ಸಾಕಷ್ಟು ತೊಂದರೆಯಾಗಿತ್ತು. ಹಲವೆಡೆ ಪ್ರಮುಖ ರಸ್ತೆಗಳನ್ನು ಬಂದ್ ಮಾಡಿ ಡಬ್ಬಾ ಅಂಗಡಿಗಳನ್ನಿಟ್ಟು ವ್ಯವಸ್ಥಿತವಾಗಿ ನಡೆಸಲಾಗುತ್ತಿತ್ತು. ಅಲ್ಲದೇ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಭಯಾನಕ ಅಪಘಾತಗಳು ನಡೆದು ಶಾಲಾ ಮಕ್ಕಳ, ಯುವಕರ, ವೃದ್ಧರ ಸಾವುಗಳು ಅಗಿದ್ದವು. ಇದೆಲ್ಲ ಸಮಸ್ಯೆಗಳಿಗೆ ಪರಿಹಾರವಾಗಿ ಈ ಕಾರ್ಯಾಚರಣೆ ನಡೆಸಿರುವದಾಗಿ ಪುರಸಭೆ ಮೂಲಗಳಿಂದ ತಿಳಿದು ಬಂದಿದೆ.
ಕಳೆದ ಕೆಲವು ದಿನಗಳಿಂದ ಅಟೋ ಮೂಲಕ ಪಟ್ಟಣದಲ್ಲಿ ಅತಿಕ್ರಮಿತ ರಸ್ತೆಗಳ ತೆರವು ಕಾರ್ಯಾಚರಣೆ ಕೈಗೊಳ್ಳುವದಾಗಿ ದಿನಾಂಕ ಸಮೇತ ತಿಳಿಸಿದರೂ ಬಹುತೇಕರು ತಮ್ಮ ಅಂಗಡಿಗಳನ್ನು ತೆರವುಗೊಳಿಸಿರಲಿಲ್ಲ. ಕಾರ್ಯಾಚರಣೆ ವೇಳೆ ಯಾರ ಮುಲಾಜಿಗೂ ಒಳಗಾಗದೇ ತೆರವುಗೊಳಿಸಿದ್ದು ಪಟ್ಟಣದ ಸುಂದರತೆಯನ್ನು ಬಯಸುವವರ ಶ್ಲಾಘನೆಗೆ ಕಾರಣವಾಗಿದೆ.
ಈ ಕಾರ್ಯಾಚರಣೆ ಸೋಮುವಾರವೂ ಮುಂದುವರೆಯಲಿರುವದಾಗಿ ಪುರಸಭೆಯವರು ತಿಳಿಸಿದ್ದಾರೆ. ಪಟ್ಟಣದ ಬಸವೇಶ್ವರ ವೃತ್ತದಿಂದ ಮುಖ್ಯ ಬಜಾರ, ಇಂದಿರಾ ವೃತ್ತ, ಖಾದಿ ಕೇಂದ್ರ, ಆಲಮಟ್ಟಿ ರಸ್ತೆಯಲ್ಲಿ ಕಾರ್ಯಾಚರಣೆ ಮುಂದುವರೆಯಲಿದೆ.
ಬೆಳಕಿಗೆ ಬಂದ ಅತಿಕ್ರಮಣ ರಸ್ತೆ
ಪಟ್ಟಣದ ಬಸ್ ನಿಲ್ದಾಣದ ಎದುರು ಪಿಎಲ್ಡಿ ಬ್ಯಾಂಕ್ ನ ಮಳಿಗೆಗಳಿಗೆ ಹೊಂದಿಕೊಂಡು ಹಲವು ವರ್ಷಗಳಿಂದ ಪಾನ್ ಅಂಗಡಿಯೊಂದನ್ನಿಟ್ಟು ಪ್ರಮುಖ ರಸ್ತೆಯೊಂದನ್ನ ಅತಿಕ್ರಮಿಸಲಾಗಿತ್ತು. ಹಿಂದೆ ಹಲವಾರು ತೆರವು ಕಾರ್ಯಾಚರಣೆಗಳು ನಡೆದರೂ ಈ ರಸ್ತೆ ಬೆಳಕಿಗೆ ಬಂದಿರಲಿಲ್ಲ. ರವಿವಾರ ನಡೆದ ಕಾರ್ಯಾರಣೆಯಲ್ಲಿ ಇಲ್ಲಿ ರಸ್ತೆ ಇರುವದು ಬೆಳಕಿಗೆ ಬಂದಿದ್ದು ಇನ್ನೂ ಈ ರಸ್ತೆಯಲ್ಲಿ ಅತಿಕ್ರಮಣ ಕಟ್ಟಡಗಳು ಇದ್ದು ಅವುಗಳನ್ನು ತೆರವುಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಹಲವರು ಒತ್ತಾಯಿಸಿದ್ದಾರೆ.
ಬೆಂಗಳೂರು ಬೇಕರಿಯತ್ತ ಬೆರಳು
ತೆರವು ಕಾರ್ಯಾಚರಣೆಯ ಬಳಿಕ ಕೆಲವರು ಇಲ್ಲಿನ ಹುಡ್ಕೋ ಗೇಟ್ ಬಳಿ ಇರುವ ಬೆಂಗಳೂರು ಬೇಕರಿಯತ್ತ ಬೆರಳು ಮಾಡಿದರು. ಪುರಸಭೆ ಕಾಯ್ದೆಯ ವಿರುದ್ಧವಾಗಿ ಈ ಬಿಲ್ಡಿಂಗ್ ಕಟ್ಟಲಾಗಿದ್ದು ಅಲ್ಲದೇ ಬಿಲ್ಡಿಂಗ್ ನ ಮಧ್ಯ ಭಾಗದಲ್ಲಿರುವ ಸರ್ಕಾರಿ ರಸ್ತೆಯನ್ನೇ ನುಂಗಿಹಾಕಲಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಪುರಸಭೆ ಹಿಂದೇಟು ಹಾಕಿದೆ. ಬಡವರ ಅಂಗಡಿ ಕಿತ್ತೋದು ಬಂದ್ರೆ ಮಾತ್ರ ಇವರಿಗೆ ಕಾನೂನು ಶ್ರೀಮಂತರಿಗೆ ಯಾವ ಕಾನೂನುಗಳು ಇಲ್ಲವೇ? ಪುರಸಭೆ ಮುಖ್ಯಾಧಿಕಾರಿಗಳು ಕೂಡಲೇ ಇದರ ವಿರುದ್ಧ ಕ್ರಮ ಕೈಗೊಳ್ಳದೇ ಹೋದಲ್ಲಿ ಅವರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇವೆ ಎಂದು ಕೆಲವರು ಎಚ್ಚರಿಸಿದರು.

