ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಕೃಷಿಯಲ್ಲಿ ಹೆಚ್ಚುತ್ತಿರುವ ಚಿಕ್ಕ ಹಿಡುವಳಿಗಳು, ಬದಲಾಗುತ್ತಿರುವ ಕೃಷಿ ಆದ್ಯತೆಗಳು ಹಾಗೂ ಮರೆಯಾಗುತ್ತಿರುವ ಸಮಗ್ರ ಕೃಷಿ ಪದ್ದತಿಗಳಿಂದ ದೇಶದ ಕೃಷಿಕರ ಬದುಕಿನಲ್ಲಿ ಉಂಟಾದ ವಿಷಮತೆಯನ್ನು ತೊಡೆದು ಹಾಕಲು ಸಾಮೂಹಿಕ ಕೃಷಿಯೊಂದೆ ಪರಿಹಾರವೆಂದು ನಂಬಲಾಗುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ರೈತರೇ ಒಗ್ಗೂಡಿ ಕಟ್ಟಿದ ಕಂಪನಿ ರೈತ ಪಾಲಿನ ಅಕ್ಷಯ ಪಾತ್ರೆಯಾಗಬೇಕು ಎಂದು ಪಶು ಪಾಲನೆ ಮತ್ತು ಪಶು ವೈಧ್ಯಕೀಯ ಇಲಾಖೆಯ ಕುಕ್ಕುಟ ವಿಭಾಗದ ಸಹಾಯಕ ನಿರ್ದೇಶಕಿ ಡಾ. ಪದ್ಮಾವತಿ ದೊಡಮನಿ ಕರೆ ನೀಡಿದರು.
ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ ನಿಯಮಿತದ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾರುಕಟ್ಟೆಯ ಬೇಡಿಕೆ ಮತ್ತು ಪೂರೈಕೆಯನ್ನು ಗಮನದಲ್ಲಿಟ್ಟುಕೊಂಡು ಸದಸ್ಯ ರೈತರಿಗೆ ಸುಸ್ಥಿರ ಲಾಭ ತಂದು ಕೊಡಬಹುದಾದ ವಿಶೇಷ ವ್ಯವಹಾರಿಕ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಉತ್ಪಾದನಾ ತಾಂತ್ರಿಕತೆಗಳಿಂದ ಹಿಡಿದು ಸ್ವಂತ ಬ್ರ್ಯಾಂಡ್ ಹೆಸರಲ್ಲಿ ಮಾರುಕಟ್ಟೆ ಮಾಡುವ ಮಟ್ಟಕ್ಕೆ ಉತ್ಪಾದಕ ಕಂಪನಿಯನ್ನು ಬೆಳೆಸಲು ಬೇಕಾದ ಸಾಮಾಜಿಕ ಚಿಂತನೆ, ವ್ಯವಹಾರಿಕ ಯೋಜನೆ ಮತ್ತು ಅನುಷ್ಠಾನ ಬದ್ದತೆಯೊಂದಿಗೆ ಕೆಲಸ ಆರಂಭಿಸಿದ ದಾಸೋಹಿ ಕಂಪನಿ ಇತರರಿಗೆ ಮಾದರಿಯಾಗಲಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ವಿಜಯಪುರ ಜಿಲ್ಲೆಯ ಅಗ್ರಣೀಯ ಬ್ಯಾಂಕ ವ್ಯವಸ್ಥಾಪಕ ನೇತಾಜಿ. ಡಿ ಮಾತನಾಡಿ ಕೃಷಿ ವ್ಯವಹಾರಗಳಿಗೆ ಸಂಬಂದಿತ ಹಣಕಾಸು ಸೇವೆಗಳನ್ನು ರೈತರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗಬೇಕೆಂಬ ಕನಸನ್ನು ನನಸು ಮಾಡಲು ರೈತರು ಸೇರಿ ಕಟ್ಟಿರುವ ಕಂಪನಿ ಒಂದು ಉತ್ತಮ ಭೂಮಿಕೆಯಾಗಿದ್ದು ಸದಸ್ಯ ರೈತರಿಗೆ ಕೃಷಿ ಮತ್ತು ಉಪ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಸಾಲದ ನೆರವು, ಸರ್ಕಾರಿ ಯೋಜನೆಗಳ ಸಬ್ಸಿಡಿ ಪ್ರಯೋಜನ ದೊರಕಿಸಿಕೊಡುವುದರ ಜೊತೆ ಸಾಲ ಮರು ಪಾವತಿಯನ್ನು ಖಾತ್ರಿಪಡಿಸಲು ಬೇಕಾದ ಮಧ್ಯಸ್ಥಿಕೆಯನ್ನು ಉತ್ಪಾದಕ ಕಂಪನಿಗಳು ತೆಗೆದುಕೊಂಡಲ್ಲಿ ಸಕಾಲದಲ್ಲಿ ರೈತರಿಗೆ ಆರ್ಥಿಕ ನೆರವು ಕಲ್ಪಿಸಿಕೊಡಲು ಸಾಧ್ಯವಾಗಲಿದೆ ಎಂದರು.
ಸಾನಿಧ್ಯ ವಹಿಸಿದ್ದ ವೇ. ಶರಣಯ್ಯ ಹಿರೇಮಠ ಆಶೀರ್ವಚನ ನೀಡಿದರು.
ಬಾಗಲಕೋಟೆಯ ಪ್ಯೂಚರ ಗ್ರೀನ್ಸ ಸಂಸ್ಥಾಪಕ ಬಿ.ಆರ್ ಅಥಣಿ, ಕೊರಟೆಗೆರೆ ಪರಿವರ್ತನಾ ಇಕೋ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಶಿವಕುಮಾರ, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶರಣಗೌಡ ಬಿರಾದಾರ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ಹರೀಶ.ಕೆ, ಪ್ರೋ ಅಗ್ರೋ ಬಯೋಟೆಕ್ ಎಂ.ಡಿ ಎಸ್.ಆರ್ ಜಾಧವ, ಸಮಾಜ ಸೇವಕಿ ಕಾಶೀಬಾಯಿ ರಾಂಪೂರ, ಬಿ.ಬಿ ಪಾಟೀಲ ಮತ್ತು ಕಂಪನಿಯ ಸಂಸ್ಥಾಪಕ ಅರವಿಂದ ಕೊಪ್ಪ ಮಾತನಾಡಿದರು.
ತಾಂತ್ರಿಕ ಗೋಷ್ಠಿಯಲ್ಲಿ ಸಿರಿಧಾನ್ಯ ಉತ್ಪಾದನೆ, ಮೌಲ್ಯವರ್ಧನೆ ಮತ್ತು ಮಾರಾಟ ಕುರಿತು ಸಿರಿವಾರ ಸಿರಿಧಾನ್ಯ ರೈತ ಉತ್ಪಾದಕ ಕಂಪನಿಯ ಸಿ.ಇ.ಓ ಶಿವಪ್ಪ ಮತ್ತು ಸುಸ್ಥಿರತೆಗಾಗಿ ಸಮಗ್ರ ಕೃಷಿ ಕುರಿತು ಪ್ರಗತಿಪರ ರೈತ ರಾಜೇಂದ್ರ ಬೋಸಲೆ ವಿಷಯ ಮಂಡಿಸಿ ಸಂವಾದ ನಡೆಸಿಕೊಟ್ಟರು.
ದಾಸೋಹಿ ರೈತ ಉತ್ಪಾದಕ ಕಂಪನಿಯ ನೂತನ ನಿರ್ದೇಶಕರಾಗಿ ಆಯ್ಕೆಯಾದ ಆನಂದ ದೇಸಾಯಿ(ಸೂಳಿಭಾವಿ), ಭಾಜಪಾ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಸೋಮಲಿಂಗಪ್ಪ ಗಸ್ತಿಗಾರ, ಕಲ್ಲಣ್ಣ ಪ್ಯಾಟಿ, ಬಿ.ಜಿ ಮಠ, ಗೋಲಪ್ಪ ಗಂಗನಗೌಡ್ರ, ಶ್ರೀಶೈಲ ಮೇಟಿ, ಭೀಮಣ್ಣ ಮಳಗೌಡರ, ಬಸವರಾಜ ಕುಂಟೋಜಿ, ಸೋಮನಗೌಡ ಬಿರಾದಾರ, ಗುರಯ್ಯ ಮುದ್ನೂರಮಠ ಭಾಗಿಯಾಗಿದ್ದರು.
ವ್ಯವಸ್ಥಾಪಕ ನಿರ್ದೇಶಕಿ ರಶ್ಮಿ ಕೊಪ್ಪ ಸ್ವಾಗತಿಸಿದರು. ಶೇಖರಗೌಡ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಡಾ. ರಾಜಶೇಖರ ಹತ್ತರಸಂಗ ನಿರೂಪಿಸಿದರು. ಬಾಲಕೃಷ್ಣ ಗೌಡರ ವಂದಿಸಿದರು.

