ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಬದುಕು ಬೆಳಕಾಗಬೇಕು. ಬದುಕು ಬಯಲಾಗಬೇಕು. ಇದುವೇ ಜೀವನ ಎಂಬುದನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ನಿಸರ್ಗದಲ್ಲಿ ಭಗವಂತ ನಮಗೆ ಎಲ್ಲವನ್ನು ನೀಡಿದ್ದಾನೆ. ಇದನ್ನು ನಾವೆಲ್ಲರೂ ಅನುಭವಿಸಿ ಸುಂದರ ಜೀವನ ಸಾಗಿಸಬೇಕೆಂದು ವಿಶ್ರಾಂತ ಮುಖ್ಯ ಅಭಿಯಂತರ, ಆಧ್ಯಾತ್ಮಿಕ ಚಿಂತಕ ಶಂಕರ ದೇವನೂರು ಹೇಳಿದರು.
ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಅಕ್ಕನಾಗಮ್ಮ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಶನಿವಾರ ಹಮ್ಮಿಕೊಂಡಿದ್ದ ಸ್ಪೂರ್ತಿ ಸಿಂಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಜೀವನ ಹೂವಿನಂತಾಗಬೇಕು. ಇದು ಬಸವೇಶ್ವರರ ಪವಿತ್ರ ಭೂಮಿಯಾಗಿದೆ. ಮಹಾತ್ಮರು ನುಡಿದಂತೆ ನಡೆದು ಬೆಳಕಾಗಿದ್ದಾರೆ. ಅದರಂತೆ ನಮ್ಮ ಜೀವನ ಬೆಳಕಾಗಬೇಕು. ವಿದ್ಯಾರ್ಥಿಗಳು ನಿರಂತರ ಅಧ್ಯಯನ ಮಾಡುವ ಮೂಲಕ ತಮ್ಮ ಜೀವನವನ್ನು ಉತ್ತಮ ಪಡಿಸಿಕೊಳ್ಳಬೇಕೆಂದರು.
ಬಸವನಿಲ್ಲದ ಕರ್ನಾಟಕ ರಾಜ್ಯವನ್ನು ಪರಿಗಣಿಸಲು ಸಾಧ್ಯವಿಲ್ಲ. ಬಸವೇಶ್ವರರನ್ನು ಸ್ಮರಿಸದೇ ರಾಜ್ಯವನ್ನು ಸ್ಮರಿಸಲು ಸಾಧ್ಯವಿಲ್ಲ. ಬಸವ ತತ್ವ ಎಲ್ಲವನ್ನು ಒಳಗೊಂಡಿದೆ. ಬಸವಾದಿ ಶರಣರ ವಚನಗಳು ಎಲ್ಲರ ಬದುಕಿಗೆ ಬೆಳಕಾಗಿವೆ. ಶಿಕ್ಷಣ, ತತ್ವ ನಮ್ಮ ಬದುಕನ್ನು ನರಳಿಸಬಾರದು. ಅದು ಅರಳಿಸುವಂತಿರಬೇಕೆಂದರು.
ಸಾನಿಧ್ಯ ವಹಿಸಿದ್ದ ಕಜ್ಜಿಡೋಣಿಯ ಕೃಷ್ಣಾನಂದ ಶರಣರು ಮಾತನಾಡಿ, ವಿದ್ಯಾರ್ಥಿಗಳು ಕೇವಲ ಅಂಕ ಪಡೆಯುವುದೇ ಮುಖ್ಯವಾಗಿಟ್ಟುಕೊಳ್ಳದೇ ಜೀವನ ಹೇಗೆ ರೂಪಿಸಿಕೊಳ್ಳಬೇಕೆಂಬುವದರ ಕಡೆಗೆ ಗಮನ ಗಮನಹರಿಸಬೇಕು. ವಿದ್ಯಾರ್ಥಿಗಳು ಒಬ್ಬ ಸಾಧಕನ ರೀತಿಯಲ್ಲಿ ನಿರಂತರವಾಗಿ ಅಧ್ಯಯನಶೀಲರಾಗಿ ಉತ್ತಮ ಅಧ್ಯಯನ ಮಾಡುವಂತಾದರೆ ಜೀವನವನ್ನು ಸುಂದರವಾಗಿ ಮಾಡಿಕೊಳ್ಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲರಾಗಿ ಉತ್ತಮ ಪ್ರಜೆಗಳಾಗಿ ನಾಡಿಗೆ ಸೇವೆ ಸಲ್ಲಿಸುವಂತಾಗಬೇಕೆಂದರು.
ಸಾನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿದರು.
ಅಧ್ಯಕ್ಷತೆಯನ್ನು ಅಕ್ಕನಾಗಮ್ಮ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಮುಖ್ಯಗುರು ಕೆ.ಆರ್.ಲಮಾಣಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮೈಸೂರಿನ ಯೋಗೇಶ್ವರಿ, ಹಿರಿಯ ಶಿಕ್ಷಕಿ ಮಾಲತಿ ಬಿದರಿ, ನಿವೃತ್ತ ಉಪಪ್ರಾಂಶುಪಾಲ ಎಸ್.ಎಸ್.ಝಳಕಿ, ನಿಕಟಪೂರ್ವ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವರುದ್ರಯ್ಯ ಹಿರೇಮಠ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಾನಂದ ಡೋಣೂರ ಇತರರು ಇದ್ದರು.
ಅಶೋಕ ಹಂಚಲಿ ಸ್ವಾಗತಿಸಿ,ನಿರೂಪಿಸಿದರು. ಶಿವು ಮಡಿಕೇಶ್ವರ ವಂದಿಸಿದರು.

