ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಅಪ್ರತಿಮ ದೇಶಭಕ್ತ ಭಗತಸಿಂಗ್ ಕೇವಲ ದೇಶಕ್ಕೆ ಸ್ವಾತಂತ್ರ್ಯ ಮಾತ್ರ ಬಯಸದೇ ಪ್ರತಿಯೊಬ್ಬ ಭಾರತೀಯನಿಗೂ ಸಮಾನತೆ ಸಿಗುವ ಜೊತೆಗೆ ಜಾತಿ, ಧರ್ಮಗಳಿಂದ ಮುಕ್ತವಾದ ಯುವ ಭಾರತದ ಪರಿಕಲ್ಪನೆಯ ಸ್ವಾತಂತ್ರ್ಯವನ್ನು ಬಯಸಿದ್ದರು. ಇಂತಹ ಮಹಾನ್ ಕ್ರಾಂತಿಕಾರಿ ಪುರುಷ ಎಂದಿಗೂ ಯುವಜನಾಂಗಕ್ಕೆ ಸ್ಪೂರ್ತಿದಾಯಕವಾಗಿದ್ದಾರೆ ಎಂದು ರಾಷ್ಟ್ರೀಯ ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.
ಪಟ್ಟಣದ ರಾಣಿ ಚನ್ನಮ್ಮ ವೃತ್ತದಲ್ಲಿ ರಾಷ್ಟ್ರೀಯ ಬಸವಸೈನ್ಯ ಸಂಘಟನೆಯು ಶನಿವಾರ ಹಮ್ಮಿಕೊಂಡಿದ್ದ ಕ್ರಾಂತಿಕಾರಿ ಭಗತಸಿಂಗ್ ಅವರ ೧೧೭ ನೇ ಜಯಂತಿ ಕಾರ್ಯಕ್ರಮದಲ್ಲಿ ಭಗತ್ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಅಸಮಾನತೆ ವ್ಯವಸ್ಥೆಯನ್ನು ಹೋಗಲಾಡಿಸಿ ಬದಲಾವಣೆ ತರಲು ಭಗತ್ಸಿಂಗ್ ನಿರಂತರವಾಗಿ ಹೋರಾಟ ಮಾಡಿದ್ದರು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗುವ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮದೇ ಕೊಡುಗೆ ನೀಡಿದ್ದಾರೆ. ತಮ್ಮ ಚಿಕ್ಕವಯಸ್ಸಿನಲ್ಲಿಯೇ ದೇಶದ ಸ್ವಾತಂತ್ರ್ಯ ಸಿಗಲು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಅಪ್ರತಿಮ ದೇಶಭಕ್ತರಾಗಿದ್ದಾರೆ. ಇವರ ವಿಚಾರಗಳನ್ನು ಯುವಜನಾಂಗ ಅರಿತುಕೊಂಡು ದೇಶದ ಪ್ರಗತಿಗೆ ಕೈಜೋಡಿಸಬೇಕೆಂದರು.
ಈ ಸಂದರ್ಭದಲ್ಲಿ ಸುನೀಲ ಚಿಕ್ಕೊಂಡ, ಸಂಜೀವ ಬಿರಾದಾರ, ನಿಂಗಪ್ಪ ಅವಟಿ, ಮನ್ನಾನ ಶಾಬಾದಿ, ಮಲ್ಲು ಬನಾಸಿ, ಮಹಾಂತೇಶ ಹೆಬ್ಬಾಳ, ಅಮೀನ ಚೌದರಿ, ಸಲೀಂ ಸಯ್ಯದ, ದಯಾನಂದ ಜಾಲಗೇರಿ, ಸಂಗಮೇಶ ಕಲ್ಲೂರ, ಸುರೇಶ ಚಿಕ್ಕೊಂಡ, ರಾಮಣ್ಣ ಕಲ್ಲೂರ, ಬಸವರಾಜ ಮಾಲಗಾರ, ಅನಿಲ ಬೋಂಸ್ಲೆ, ವಿರೇಶ ಗಬ್ಬೂರ, ದೀಪಕ ಬೇದರಕರ ಇತರರು ಇದ್ದರು.

