ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಮಹಾರಾಷ್ಟ್ರದ ಗಡಿಯಂಚಿನ ತಾಲ್ಲೂಕಿನ ಘೋಣಸಗಿ ತಾಂಡಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಪರಮೇಶ್ವರ ಗದ್ಯಾಳ ಅವರು ಶೈಕ್ಷಣಿಕವಾಗಿ ಸಲ್ಲಿಸಿರುವ ಸೇವೆ ಪರಿಗಣಿಸಿ ಬೆಂಗಳೂರಿನ ಜನಸಿರಿ ಪೌಂಡೇಶನ ವತಿಯಿಂದ ಪುಟ್ಟಣ್ಣ ಚೆಟ್ಟಿ ಪುರಭವನ(ಬೆಂಗಳೂರ)ದಲ್ಲಿ ಶನಿವಾರ ನಡೆದ ರಾಜ್ಯ ಮಟ್ಟದ ಶಿಕ್ಷಕರ ಹಬ್ಬ 2024 ಸಮಾರಂಭದಲ್ಲಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ.
ಶಾಲೆಯ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಿ ಮಕ್ಕಳ ಸರ್ವತೋಮುಖ ಶೈಕ್ಷಣಿಕ ಕಾಳಜಿ ತೋರಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ವಂತ ಹಣ ಖರ್ಚು ಮಾಡಿ ಶಾಲೆಯ ಅಂದ ಚಂದ ಹೆಚ್ಚಿಸಿ ಸಾರ್ವಜನಿಕರ ಹಾಗೂ ಇಲಾಖೆಗೆ ಪ್ರೀತಿ ಪಾತ್ರರಾಗಿದ್ದಾರೆ. ನೋಡುತ್ತಾ ಕಲಿ, ಆಡುತ್ತಾ ಕಲಿ ಎಂಬಂತೆ ಮಕ್ಕಳು ಕಲಿಯುವ ಕಲಿಕೆಗೆ ಸಹಾಯವಾಗಲು ನೈಜ ಕಲಿಕಾ ವಾತಾವರಣ ನಿರ್ಮಿಸಿದ್ದಾರೆ.
ಹಲವು ಸಾಧನೆಗಳ ಮೂಲಕ ಶಾಲೆಯಲ್ಲಿ ಉತ್ತಮ ಕಲಿಕಾ ವಾತಾವರಣ ನಿರ್ಮಿಸಿದ ಶಿಕ್ಷಕ ಪರಮೇಶ್ವರ ಗದ್ಯಾಳಗೆ ಈ ಬಾರಿ ಬೆಂಗಳೂರಿನ ಜನಸಿರಿ ಪೌಂಡೆಶನ ನೀಡುವ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದಕ್ಕಾಗಿ ಇಲಾಖೆಯ ಅಧಿಕಾರಿಗಳು, ಶಿಕ್ಷಕರು, ಮುದ್ದು ಮಕ್ಕಳು ಶುಭ ಹಾರೈಸಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶೈಕ್ಷಣಿಕವಾಗಿ ಅಭಿವೃದ್ಧಿ ಮಾಡಿದ 131 ಅತ್ಯುತ್ತಮ ಶಿಕ್ಷಕರನ್ನು ಗುರ್ತಿಸಿ ಜನಸಿರಿ ತಂಡದ ಮುಖ್ಯಸ್ಥ ನಾಗಲೇಖ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಇದೇ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯಿಂದ ಶಿಕ್ಷಕರಾದ ಸಂಗಮೇಶ ಜಂಗಮಶೆಟ್ಟಿ, ಈರಣ್ಣಾ ಹೊಸಟ್ಟಿ, ರೇಷ್ಮಾ ಪವಾರ ಸಚಿನ ತಳವಾರ ಪ್ರಶಸ್ತಿಗೆ ಭಾಜನರಾದರು.

