ಉದಯರಶ್ಮಿ ದಿನಪತ್ರಿಕೆ
ಇಂಡಿ: ಅನುಸೂಚಿತ ಜಾತಿ, ಪಂಗಡದ ಜನರು ಶಿಕ್ಷಣವಂತರಾದರೆ ಸಮಾಜದಲ್ಲಿ ನಡೆಯುವ ದೌರ್ಜನ್ಯ ತಡೆಯಲು ಸಾಧ್ಯ. ಶಿಕ್ಷಣವಂತರಾದರೆ ಕಾನೂನು ಅರಿವು ಬಂದು ದೌರ್ಜನ್ಯ ಕಡಿಮೆಯಾಗುತ್ತವೆ ಎಂದು ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ ಹೇಳಿದರು.
ಪಟ್ಟಣದ ಡಿ.ವಾಯ್.ಎಸ್.ಪಿ ಕಚೇರಿ ಸಭಾಭವನದಲ್ಲಿ ನಡೆದ ಉಪವಿಭಾಗೀಯ ಮಟ್ಟದ ಎಸ್ ಸಿ, ಎಸ್ ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸಭೆಯಲ್ಲಿ ಮಾತನಾಡಿದರು.
ಶಿಕ್ಷಣವಂತರಾದರೆ ಮಧ್ಯಪಾನ, ಮಟಕಾ,ಜೂಜಾಟದಂತಹ ವ್ಯಸನಗಳು ಕಡಿಮೆಯಾಗಿ ಒಳ್ಳೆಯ ಸಮಾಜ ನಿರ್ಮಿಸಲು ಸಾಧ್ಯ ಎಂದರು.
ಡಿಎಸ್ ಎಸ್ ತಾಲೂಕಾ ಸಂಚಾಲಕ ರಮೇಶ ನಿಂಬಾಳಕರ ಮಾತನಾಡಿ, ಪಜಾ ಪಪಂ ಜನರಿಂದ ದೌರ್ಜನ್ಯ ಕೇಸ್ ಪಡೆದುಕೊಂಡು ಆರೋಪಿಗಳನ್ನು ಬಂದಿಸುತ್ತಿಲ್ಲ. ಇದರಿಂದ ಆರೋಪಿಗಳು ರಾಜಾ ರೋಷವಾಗಿ ಹೊರಗಡೆ ಅಡ್ಡಾಡುತ್ತಾರೆ ಹೀಗಾಗದಂತೆ ನೋಡಿಕೊಂಡು ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಬೇಕೆಂದು ಎಂದರು.
ಡಿ.ವಾಯ್.ಎಸ್.ಪಿ ಜಗದೀಶ ಮಾತನಾಡಿ ದೌರ್ಜನ್ಯದಲ್ಲಿ ನೊಂದ ಸಂತೃಸ್ತರಿಗೆ ತಕ್ಷಣ ಇಲಾಖೆಯಿಂದ ಪರಿಹಾರ ಧನ ನೀಡಲು ಕೇಳಿಕೊಂಡರು.
ಡಿ.ಎಸ್.ಎಸ್. ಜಿಲ್ಲಾ ಸಂಚಾಲಕ ವಿನಾಯಕ ಗುಣಸಾಗರ,ತಾಲೂಕಾ ಅಧ್ಯಕ್ಷ ಶಿವಾನಂದ ಮೂರಮನ, ಸಿಂದಗಿ ತಾಲೂಕಾ ದಲಿತ ಮುಖಂಡ ಚಂದ್ರಕಾಂತ ಸಿಂಗೆ ಮಾತನಾಡಿ, ಕಚೇರಿಗೆ ಆಗಮಿಸುವ ಸಾರ್ವಜನಿಕರೊಂದಿಗೆ ಅಧಿಕಾರಿ ಹಾಗೂ ಸಿಬ್ಬಂದಿವರ್ಗ ಸೌಜನ್ಯದಿಂದ ವರ್ತಿಸಬೇಕು. ಪರಿಶಿಷ್ಠ ಜಾತಿ, ಪಂಗಡದವರು ವಿವಿಧ ಯೋಜನೆಗಳ ಸಾಲ ಸೌಲಭ್ಯ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಪರಿಗಣಿಸಿ ಶೀಘ್ರ ಸೌಲಭ್ಯ ಒದಗಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಪೋಲಿಸ ವರಿಷ್ಠಾದಿಕಾರಿ ರಿಷಿಕೇಶ ಸೋನಾವನೆ, ಹೆಚ್ಚುವರಿ ಪೋಲಿಸ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ದಲಿತ ಮುಖಂಡರ ಸಮಸ್ಯೆಗಳನ್ನು ಆಲಿಸಿ ಬೇಡಿಕೆಗಳನ್ನು ಈಡೇರಿಸುವುದಾಗಿ ತಿಳಿಸಿದರು.
ಸಿಪಿಐ ಮಲ್ಲಿಕಾರ್ಜುನ ಡಪ್ಪಿನ ಸೇರಿದಂತೆ ತಾಲೂಕಿನ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಧರ್ಮರಾಜ ವಾಲಿಕಾರ, ಉತ್ತಮ ಕಟ್ಟಿಮನಿ, ಬಾಬು ಗುಡುಮಿ, ಧರ್ಮರಾಜ ಸಾಲೋಟಗಿ, ಧರೆಪ್ಪ ಮುಂದೋಲಿ, ಪೀರಪ್ಪ ಕಟ್ಟಿಮನಿ ಮತ್ತಿತರಿದ್ದರು.

