ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ದೇಶದಲ್ಲಿ ಪ್ರತಿ ವರ್ಷ ೨೦ಸಾವಿರಕ್ಕೂ ಹೆಚ್ಚು ಜನ ಈ ರೇಬೀಸ್ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ನಾಯಿ ಸೇರಿದಂತೆ ಯಾವುದೇ ಪ್ರಾಣಿಯ ಕಡಿತವನ್ನು ನಿರ್ಲಕ್ಷಿಸದೇ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಾಲೂಕಾ ಪಶುವೈದ್ಯಾಧಿಕಾರಿ ಡಾ.ಮಾರುತಿ ತಡಲಗಿ ಹೇಳಿದರು.
ಪಟ್ಟಣದ ಆರ್.ಡಿ.ಪಾಟೀಲ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ತಾಲೂಕಾ ಆರೋಗ್ಯ ಇಲಾಖೆ, ಪಶುಪಾಲನಾ, ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಆರ್.ಡಿ.ಪಾಟೀಲ ಪದವಿ ಪೂರ್ವ ಕಾಲೇಜು ಇವುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ರೇಬೀಸ್ ನಿಯಂತ್ರಣ ಕಾರ್ಯಕ್ರಮ ಮತ್ತು ವಿಶ್ವ ರೇಬೀಸ್ ದಿನಾಚರಣೆಯನ್ನುದ್ದೇಶಿಸಿ ಅವರು ಮಾತನಾಡಿದ ಅವರು, ರೇಬೀಸ್ ಅನ್ನುವುದು ಸಸ್ತನಿಗಳಲ್ಲಿ ವೈರಾಣುವಿನಿಂದ ಹರಡುವ ಕಾಯಿಲೆ ಶ್ವಾನಗಳಿಂದ ಕಡಿತ ಮತ್ತು ಲಾಲಾರಸದ ಸಂಪರ್ಕದಿಂದ ಮನುಷ್ಯನಿಗೆ ಹರಡುತ್ತದೆ. ನೇರವಾಗಿ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಮಿದುಳಿಗೆ ಘಾಸಿಯಾಗಿ ಸಾವು ಸಂಭವಿಸುತ್ತವೆ. ಆರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಇದು ಗುಣಪಡಿಸಬಹುದಾದ ಕಾಯಿಲೆ ಎನ್ನುವುದು ತಜ್ಞರ ಅಭಿಮತವಾಗಿದೆ. ಶ್ವಾನಗಳಿಂದ ಮನುಷ್ಯನಿಗೆ ರೇಬೀಸ್ ಹರಡುವುದನ್ನು ೨೦೩೦ರ ಒಳಗೆ ತಡೆಯುವ ಗುರಿಯನ್ನು ಇರಿಸಿಕೊಳ್ಳಲಾಗಿದೆ. ಜಗತ್ತಿನಲ್ಲಿಯೇ ಭಾರತದಲ್ಲಿ ಈ ರೋಗದ ಪ್ರಮಾಣ ಹೆಚ್ಚಾಗಿದೆ ಎಂದರು.
ನಾಯಿಕಡಿತ, ರೇಬೀಸ್ ಲಕ್ಷಣಗಳು ಮತ್ತು ರೇಬೀಸ್ನ ನಂತರದ ರೊಗ ನಿರೋಧಕ ನಿರ್ವಹಣೆ ಕುರಿತು ಪ್ರೋಜೆಕ್ಟರ್ ಮೂಲಕ ಡಾ.ಮಾರುತಿ ತಡಲಗಿ ಅವರು ಸವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ವಿವರಿಸಿದರು.
ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಕುಲಕರ್ಣಿ ಮಾತನಾಡಿ, ರೇಬೀಸ್ನಿಂದ ಮಾನವ ಸಾವುಗಳನ್ನು ನಿರ್ಮೂಲನೆ ಮಾಡುವದು ಸಾಧಿಸಬಹುದಾದ ಗುರಿಯಾಗಿದೆ. ರೇಬೀಸ್ ಯಾವುದೆ ನಿರ್ಧಿಷ್ಟ ಚಿಕಿತ್ಸೆ ಇಲ್ಲದರಿರುವುದರಿಂದ ಅದನ್ನು ತಡೆಯಲು ಎಲ್ಲ ಪ್ರಯತ್ನಗಳು ಅಗತ್ಯ. ಸಾಕು ನಾಯಿ ಮತ್ತು ಬೆಕ್ಕುಗಳಿಗೆ ನಿಯಮಿತವಾಗಿ ರೇಬೀಸ್ ನಿರೋಧಕ ಚುಚ್ಚುಮದ್ದನ್ನು ಕೊಡಿಸಬೇಕು ಅವುಗಳ ಆರೋಗ್ಯದ ಬಗ್ಗೆ ಪಶುವೈದ್ಯರಿಂದ ಸೂಕ್ತ ಸಲಹೆಗಳನ್ನು ಪಡೆದುಕೊಳ್ಳಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ, ಉಪಪ್ರಾಚಾರ್ಯ ಪಿ.ವ್ಹಿ.ಮಹಲಿನಮಠ, ತಾಲೂಕಾ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ವೈ.ಚೌಡಕಿ, ಆರೋಗ್ಯ ನಿರೀಕ್ಷಣಾಧಿಕಾರಿ ವಿರೇಂದ್ರ ಪವಾಡಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಎನ್.ಬಿ.ಪೂಜಾರಿ, ಎಸ್.ಎಸ್.ತಾಳಿಕೋಟಿ, ಡಾ.ಎಸ್.ಸಿ.ಜೋಗೂರ, ಶಿವಶರಣ ಬೂದಿಹಾಳ, ವ್ಹಿ.ಪಿ.ನಂದಿಕೋಲ, ಸಂಗಮೇಶ ಚಾವರ್, ಎನ್.ಎಂ.ಶೆಳ್ಳಗಿ, ರೋಹಿತ್ ಸುಲ್ಪಿ, ಚಂದ್ರು ಬಬಲೇಶ್ವರ್, ಎಸ್.ಜಿ.ಮಾರ್ಸನಳ್ಳಿ, ಎಸ್.ಎಚ್.ಜಾಧವ, ಬಿ.ಬಿ.ಜಮಾದಾರ, ಎಸ್.ಎಸ್.ಹೂಗಾರ, ರಾಹುಲ ನಾರಾಯಣಕರ್, ರಾಹುಲ ಕುನ್ನಾಳ, ಸುನೀಲ ಪಾಟೀಲ, ಪ್ರಸನ್ ಜೋಗೂರ, ಗವಿಸಿದ್ದಪ್ಪ ಆನೆಗುಂದಿ, ರೂಪಾ ಆಲಮೇಲ ಸೇರಿದಂತೆ ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಇನ್ನಿತರರು ಇದ್ದರು.

