ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವದು ನಮ್ಮೆಲ್ಲರ ಜವಾಬ್ದಾರಿ. ಆ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಬಾಚೂ ತಪ್ಪದೇ ಪಾಲಿಸಿದಲ್ಲಿ ಸುಂದರ ಹಾಗೂ ಆರೋಗ್ಯಯುತ ಸಮಾಜ ನಿರ್ಮಿಸಲು ಸಾಧ್ಯ ಎಂದು ಇಲ್ಲಿನ ಹಿರಿಯ ಸಿವಿಲ್ ನ್ಯಾಯಾಧೀಶ ರವೀಂದ್ರಕುಮಾರ ಕಟ್ಟಿಮನಿ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಪುರಸಭೆ ಕಾರ್ಯಾಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ಕಸ ಗುಡಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಗಾಂಧೀಜಿಯವರ ಸ್ವಚ್ಛ ಭಾರತ ಕಸನಿಗೆ ನಾವೆಲ್ಲರೂ ಕೈಜೋಡಿಸಬೇಕು. ಎಲ್ಲಂದರಲ್ಲಿ ಕಸ ಬಿಸಾಡುವದು, ಪರಿಸರವನ್ನು ಮಲಿನಮಾಡುವದು ಮಾಡಬಾರದು. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡಲ್ಲಿ ಯಾವ ರೋಗಗಳೂ ನಮ್ಮ ಬಳಿ ಸುಳಿಯಲಾರವು. ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು, ಸಾರ್ವಜನಿಕ ಪ್ರದೇಶಗಳಲ್ಲಿ ಮೇಲಿಂದ ಮೇಲೆ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡುವಂತಾಗಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಮಾತನಾಡಿ, ಪಟ್ಟಣದಲ್ಲಿ ಹಲವು ಅಂಗಡಿಯವರು ತಮ್ಮಲ್ಲಿ ಶೇಖರಣೆಯಾಗುವ ತ್ಯಾಜ್ಯವನ್ನು ಕಸದ ವಿಲೇವಾರಿ ವಾಹನಕ್ಕೆ ಹಾಕದೇ ಎಲ್ಲಂದರಲ್ಲಿ ಎಸೆಯುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಕೂಡಲೇ ಸುಧಾರಿಸಿಕೊಂಡು ದಿನನಿತ್ಯದ ತಾಜ್ಯವನ್ನು ಕಸದ ವಾಹನಕ್ಕೆ ಹಾಕುವ ಮೂಲಕ ಪರಿಸರ ಸ್ವಚ್ಛತೆಗೆ ಸಹಕರಿಸಬೇಕು ಎಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ, ಹಿರಿಯ ನ್ಯಾಯವಾದಿ ಎಂ.ಎಚ್.ಹಾಲಣ್ಣವರ ಮಾತನಾಡಿ, ಸ್ವಚ್ಛತೆ ಇರುವ ಕಡೆಗೆ ದೇವರು ನೆಲೆಸುತ್ತಾನೆ. ನಾವೆಲ್ಲ ಮೊದಲು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಕಲುಷಿತ ವಾತಾವರಣದಿಂದ ಸದೃಡ ಸಾಮಾಜ ನಿರ್ಮಿಸಲು ಸಾಧ್ಯವಿಲ್ಲ. ನಾವು ವಾಸಿಸುವ ಮನೆಗಳ ಸುತ್ತಮುತ್ತ, ಕೆಲಸ ಮಾಡುವ ಕಚೇರಿ, ಅಂಗಡಿ ಇತ್ಯಾದಿ ಸ್ಥಳವನ್ನು ಸ್ವಯಂಪ್ರೇರಿತರಾಗಿ ಸ್ವಚ್ಛಗೊಳಿಸುವಂತಾಗಬೇಕು ಎಂದರು.
ಎರಡು ಗಂಟೆಗೂ ಅಧಿಕ ಕಾಲ ನ್ಯಾಯಾಲಯದ ಆವರಣವನ್ನು ಸ್ವಚ್ಛಗೊಳಿಸಲಾಯಿತು.
ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ನ್ಯಾಯವಾದಿಗಳಾದ ಎನ್.ಜಿ.ಕುಲಕರ್ಣಿ, ಎಂ.ಆರ್.ಪಾಟೀಲ, ಬಿ.ಪಿ.ಮ್ಯಾಗೇರಿ, ನ್ಯಾಯಾಲಯದ ಶಿರಸ್ತೇದಾರರುಗಳಾದ ಎಸ್.ಎಸ್.ಚಕ್ರಮನಿ, ಎಸ್.ಎಸ್.ಬಳಗಾನೂರ, ಸಿಬ್ಬಂದಿಗಳಾದ ಅರವಿಂದ ಕುಂಬಾರ, ಜ್ಯೋತಿ ಹಕಾರಿ, ಲಕ್ಕಮ್ಮ ಗುರಿಕಾರ, ಶರಣಬಸಪ್ಪ ಪೂಜಾರ, ಪದ್ಮಾವತಿ ಗಾಯಕವಾಡ, ಅಶೋಕ ಕುಂಬಾರ, ಬಂದೇನವಾಜ ಖಾಜಿ, ರಮೇಶ ಲಮಾಣಿ, ರಾಜಶೇಖರ ಬಿರಾದಾರ, ಅಬ್ದುಲರಹೆಮಾನ ಮುಜಾವರ, ಅನಸೂಯಾ ಪತ್ತಾರ, ಮಂಜುಳಾ ಗಾಡದ, ಶ್ರೀಕಾಂತ ಸಂಕೀನ, ಆರ್.ಪಿ.ಜಾನಮಟ್ಟಿ, ಜೆ.ಎಸ್.ಹೆಬ್ಬಾಳ, ಬಸವರಾಜ ಹುನಶ್ಯಾಳ, ಎನ್.ಬಿ.ಮದಿಹಳ್ಳಿ, ಇಸಾಕ ಒಂಟಿ, ಮಹಾಂತೇಶ ಹಚರೆಡ್ಡಿ ಸೇರಿದಂತೆ ನ್ಯಾಯಾಲಯದ ಎಲ್ಲ ಸಿಬ್ಬಂದಿ, ಪುರಸಭೆಯ ಪೌರಕಾರ್ಮಿಕರು ಹಾಜರಿದ್ದರು.

